CM Siddaramaiah: ಸಿದ್ದರಾಮಯ್ಯ ಸರ್ಕಾರಕ್ಕೆ ‘100 ದಿನಗಳ’ ಸಂಭ್ರಮ!
2023ರ ವಿಧಾನಸಭೆ ಚುನಾವಣೆಯಲ್ಲಿ ಹಲವು ಸವಾಲು ಎದುರಿಸಿ ಅಸ್ತಿತ್ವಕ್ಕೆ ಬಂದಿರುವ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದೆ. ಈ ಕುರಿತು ಖುದ್ದು ಸಿಎಂ ಸಿದ್ದರಾಮಯ್ಯ ತಮ್ಮ ಫೇಸ್ಬುಕ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದು, ಹಾಗೇ ಸಿಎಂ ಆಫ್ ಕರ್ನಾಟಕ ಅಕೌಂಟ್ನಲ್ಲೂ ಸ್ಪೆಷಲ್ ಪೋಸ್ಟ್ ಹಾಕಲಾಗಿದೆ. ಹಾಗಾದರೆ ಈ ಬಗ್ಗೆ ಸಿದ್ದರಾಮಯ್ಯ ಅವರು ಹೇಳಿದ್ದೇನು? ಮುಂದೆ ಓದಿ.
ಫೇಸ್ಬುಕ್ ಅಕೌಂಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು, 'ನಮ್ಮ ಸರ್ಕಾರ' ಅಧಿಕಾರಕ್ಕೆ ಬಂದು ಇಂದಿಗೆ " 100 ದಿನಗಳು" ಪೂರೈಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಡಿನ ಮತದಾರರು ನಮ್ಮ ಮೇಲೆ ನಂಬಿಕೆ ಮತ್ತು ಭರವಸೆಯನ್ನಿಟ್ಟು 135 ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ ಪೂರ್ಣ ಬಹುಮತದ ಸುಭದ್ರ ಸರ್ಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಜನರು ನೀಡಿರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಅವರ ನಿರೀಕ್ಷೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇವೆ.' ಎಂದು ಹೇಳಿದ್ದಾರೆ.

ನಮ್ಮೊಂದಿಗೆ ಕೈಜೋಡಿಸಿ, ಬೆಂಬಲವಾಗಿ..
ಹಾಗೇ ಮಾತು ಮುಂದುವರಿಸಿ, ಗ್ಯಾರಂಟಿ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜೊತೆ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಕನಕದಾಸರು, ನಾರಾಯಣ ಗುರು ಮುಂತಾದ ದಾರ್ಶನಿಕರು ತೋರಿದ ಸಮಾನತೆಯ ಹಾದಿಯಲ್ಲಿ ನಾಡನ್ನು ಮುನ್ನಡಿಸಿಕೊಂಡು ಹೋಗುತ್ತಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಸರ್ಕಾರದ ಕಾರ್ಯಕ್ರಮಗಳ ಮೂಲಕ ತಲುಪಬೇಕೆಂಬ ಆಶಯದೊಂದಿಗೆ ಆರಂಭಿಸಿರುವ ನಮ್ಮ ಪಯಣಕ್ಕಿಂದು ಶತಕ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ನಮ್ಮೊಂದಿಗೆ ಕೈಜೋಡಿಸಿ, ಬೆಂಬಲವಾಗಿ ನಿಂತಿರುವ ನಾಡಿನ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಅನ್ನಭಾಗ್ಯದ ಬಗ್ಗೆ ಸಿಎಂ ಪ್ರಸ್ತಾಪ
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ 2013 ಹಾಗೂ 2023ರಲ್ಲೂ ದೊಡ್ಡ ಹೆಸರನ್ನ ತಂದುಕೊಟ್ಟಿದ್ದು ಅನ್ನಭಾಗ್ಯ ಯೋಜನೆ. ಹೀಗೆ ಈ ಯೋಜನೆಯನ್ನು ಮತ್ತೊಮ್ಮೆ ಸಿಎಂ ಇಂದು ಪ್ರಸ್ತಾಪ ಮಾಡಿದ್ದು 'ಹಸಿವುಮುಕ್ತ ಕರ್ನಾಟಕ ನಿರ್ಮಾಣ ಸಂಕಲ್ಪದೊಂದಿಗೆ ನಾವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಡಿ ನಾಡಿನ 1.28 ಕೋಟಿ ಬಡ ಕುಟುಂಬಗಳ ಪ್ರತಿ ವ್ಯಕ್ತಿಗೆ ತಲಾ 10 ಕೆ.ಜಿ ಅಕ್ಕಿಯನ್ನ ಉಚಿತವಾಗಿ ವಿತರಿಸಲು ಉದ್ದೇಶಿಸಲಾಗಿದೆ. ಸದ್ಯ ಪೂರ್ಣ ಪ್ರಮಾಣದಲ್ಲಿ ಅಕ್ಕಿಯ ಲಭ್ಯತೆಯಿಲ್ಲದ ಕಾರಣಕ್ಕೆ ತಲಾ 5 ಕೆ.ಜಿ ಅಕ್ಕಿ ಹಾಗೂ ಇನ್ನುಳಿದ 5 ಕೆ.ಜಿ ಅಕ್ಕಿಯ ಬದಲಿಗೆ ರೂ.170 ಅನ್ನು ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆ ಮಾಡಲಾಗಿದೆ.' ಎಂದು ತಿಳಿಸಿದ್ದಾರೆ.
ಅಲ್ಲದೆ, ನಮ್ಮ ಮೊದಲ '100 ದಿನಗಳ' ಆಡಳಿತದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಗ್ಯಾರಂಟಿಗಳ ಈಡೇರಿಕೆಯ ಜೊತೆಗೆ ಅಭಿವೃದ್ಧಿಯ ರಥವನ್ನು ಮುನ್ನಡೆಸುತ್ತಿರುವ ನಮ್ಮೊಂದಿಗೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ಸಿಎಂ ಸಿದ್ದರಾಮಯ್ಯ 100 ದಿನಗಳ ಸಂಭ್ರಮ ಹಂಚಿಕೊಂಡಿದ್ದಾರೆ.

ಗೃಹಜ್ಯೋತಿ ಯೋಜನೆ ಪ್ರಸ್ತಾಪ
ಮತ್ತೊಂದ್ಕಡೆ ಗೃಹಜ್ಯೋತಿ ಯೋಜನೆ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಪ್ರಸ್ತಾಪವನ್ನು ಮಾಡಿದ್ದಾರೆ. 'ಬೆಲೆಯೇರಿಕೆ ಕತ್ತಲು ಸರಿಸಿ ಭರವಸೆಯ ಬೆಳಕು ಹರಿಸುವ ಆಶಯದೊಂದಿಗೆ ನಾವು ಜಾರಿಗೆ ತಂದಿರುವ "ಗೃಹಜ್ಯೋತಿ" ಯೋಜನೆಯಡಿ ನಾಡಿನ ಗೃಹಬಳಕೆದಾರರಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತಿದೆ. ಈಗಾಗಲೇ 1.48 ಕೋಟಿ ಕುಟುಂಬಗಳು ಯಶಸ್ವಿಯಾಗಿ ನೋಂದಣಿ ಮಾಡಿಕೊಳ್ಳುವ ಮೂಲಕ ಯೋಜನೆಯ ಲಾಭ ಪಡೆಯುತ್ತಿವೆ.' ಎಂದಿದ್ದಾರೆ.
ಒಟ್ನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಶತಕದ ಸಂಭ್ರಮದಲ್ಲಿ ಇದೆ. ಅದರಲ್ಲೂ 2 ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರಿಗೆ, ಈ ಬಾರಿಯ ಗೆಲುವು ಮತ್ತೊಮ್ಮೆ ಸಿಎಂ ಸ್ಥಾನ ಒಲಿಯುವಂತೆ ಮಾಡಿದೆ. ಅದರಲ್ಲೂ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಜನರ ಮನಸ್ಸು ಗೆದ್ದಿದ್ದು, ಈಗ ಲೋಕಸಭೆಯಲ್ಲೂ ಇಂತಹದ್ದೇ ಗೆಲುವಿಗೆ ಸಿದ್ದತೆಯಲ್ಲಿ ತೊಡಗಿದೆ. ಈ ಎಲ್ಲಾ ಪರಿಸ್ಥಿತಿ ನಡುವೆ ಇದೀಗ ನೂರು ದಿನ ಪೂರೈಸಿದೆ ಸಿದ್ದರಾಮಯ್ಯ ಅವರ ಸರ್ಕಾರ.












Click it and Unblock the Notifications