ಎರಡು ತಿಂಗಳು ಇಷ್ಟದ ಮಾಂಸಾಹಾರ ತ್ಯಜಿಸಿದ್ದರು ಸಿದ್ದರಾಮಯ್ಯ: ಕಾರಣ ಇಲ್ಲಿದೆ
ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಮೇ 20 ರಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಅವರು ರಾಜ್ಯದಾದ್ಯಂತ ಪ್ರವಾಸ ಮಾಡುವ ಮೂಲಕ ಪ್ರಚಾರ ಮಾಡಿದ್ದರು. ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಿದ್ದು, ಪಕ್ಷಕ್ಕೆ ಅನುಕೂಲವಾಗಿತ್ತು.
ಮಾಂಸಾಹಾರ ಪ್ರಿಯರಾದ ಸಿದ್ದರಾಮಯ್ಯ ಚುನಾವಣೆ ಸಂದರ್ಭದಲ್ಲಿ ಎರಡು ತಿಂಗಳ ಕಾಲ ಮಾಂಸಾಹಾರ ತ್ಯಜಿಸಿದ್ದರು. ವಾರಕ್ಕೆರಡು ಬಾರಿ ನಾಟಿ ಕೋಳಿ ಸಾರು ರಾಗಿಮುದ್ದೆ ತಿನ್ನುವ ಅವರು ಪ್ರಚಾರದ ಸಂದರ್ಭದಲ್ಲಿ ಬರೀ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿದ್ದರು. ಇದನ್ನು ಸ್ವತಃ ಸಿದ್ಧರಾಮಯ್ಯ ಅವರೇ ಹೇಳಿಕೊಂಡಿದ್ದರು.

ಚುನಾವಣೆ ಸಂದರ್ಭದಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಸ ಮಾಡಬೇಕಾಗಿದ್ದರಿಂದ ಅನಿವಾರ್ಯವಾಗಿ ಮಾಂಸಾಹಾರ ಬಿಡಬೇಕಾಯಿತು ಎಂದು ಅವರು ಹೇಳಿದ್ದರು. ಆರೋಗ್ಯದಲ್ಲಿ ಕೂಡ ಏರುಪೇರಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಾಂಸ ತಿನ್ನುವುದನ್ನು ಬಿಟ್ಟಿದ್ದರು. ಪ್ರಚಾರಕ್ಕಾಗಿ ಸಾವಿರಾರು ಕಿ.ಮೀ. ದೂರದವರೆಗೆ ಪ್ರಯಾಣ ಮಾಡುತ್ತಿದ್ದರು, ಪ್ರತಿ ಊರಿನಲ್ಲಿ ಸಮಾವೇಶಗಳು, ಗಂಟೆಗಟ್ಟಲೆ ಭಾಷಣ, ಚುನಾವಣಾ ರ್ಯಾಲಿ ಇರುತ್ತಿದ್ದ ಕಾರಣ ಸಿದ್ದರಾಮಯ್ಯ ನಾಟಿ ಕೋಳಿ ತಿನ್ನುವುದನ್ನು ಬಿಟ್ಟಿದ್ದರು.
ಮಾಂಸಾಹಾರ ತಿನ್ನುವುದರಿಂದ ಹೆಚ್ಚಿನ ಪ್ರವಾಸ ಮಾಡಲು ಕಷ್ಟವಾಗುತ್ತದೆ, ಹೆಚ್ಚಾಗಿ ಸುಸ್ತಾಗುತ್ತದೆ. ಚುನಾವಣೆಯಲ್ಲಿ ನಿರತರಾಗಿದ್ದರಿಂದ ವ್ಯಾಯಾಮ ಮಾಡಲು ಕೂಡ ಸಮಯ ಸಿಗದೇ ಇರುವ ಕಾರಣ ವೈದ್ಯರ ಸಲಹೆಯಂತೆ ಅವರು ಮಾಂಸಾಹಾರ ಬಿಟ್ಟಿದ್ದರು. ಮೈಸೂರಿನಲ್ಲಿ ಪ್ರಚಾರದ ಸಂದರ್ಭದಲ್ಲಿ ಆಪ್ತರ ಮನೆಯಲ್ಲಿ ಕೂಡ ಅವರು ನಾಟಿಕೋಳಿ ಸಾರಿನಲ್ಲಿ ಊಟ ಮಾಡದೆ ಬಂದಿದ್ದರು.
ಹಲವು ವಿವಾದಗಳಿಗೆ ಸಿಲುಕಿದ್ದ ಸಿದ್ದರಾಮಯ್ಯ
ಸಿದ್ದರಾಮಯ್ಯ ತಮ್ಮ ನೇರ, ನಿಷ್ಠುರ ಮಾತಿಗೆ ಹೆಸರಾದವರು, ಯಾವುದನ್ನೇ ಆದರು ಅವರು ಪ್ರಶ್ನೆ ಮಾಡುತ್ತಾರೆ. ಹಲವು ವರ್ಷಗಳ ಹಿಂದೆ ಅವರು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದರು ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು, ಅಲ್ಲದೆ ಹನುಮ ಜಯಂತಿ ಸಂದರ್ಭದಲ್ಲಿ ಕೂಡ ಅವರು ಮಾಂಸಾಹಾರ ಸೇವಿಸಿದ್ದರು ಎಂದು ಬಿಜೆಪಿ ನಾಯಕರು ಟೀಕಿಸಿದ್ದರು.
ಇದಕ್ಕೆಲ್ಲ ಸಿದ್ದರಾಮಯ್ಯ ಖಾರವಾಗಿಯೇ ಉತ್ತರ ನೀಡಿದ್ದರು, "ದೇವರು ಇದನ್ನೇ ತಿಂದು ದೇವಸ್ಥಾನಕ್ಕೆ ಬಾ ಎಂದು ಹೇಳಿದ್ದಾರಾ? ಮಧ್ಯಾಹ್ನ ಮಾಂಸ ತಿಂದು ಸಂಜೆ ದೇವಸ್ಥಾನಕ್ಕೆ ಹೋಗಬಾರದಾ? ಹಿಂದಿನ ದಿನ ಮಾಂಸ ತಿಂದು ಹೋಗಬಹುದಾ? ಎಂದು ಖಡಕ್ ತಿರುಗೇಟು ನೀಡಿದ್ದರು.
ಚುನಾವಣೆ ಮುಗಿದ ಬಳಿಕ ಅವರು ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ತಮ್ಮ ನೆಚ್ಚಿನ ಮಾಂಸಾಹಾರವನ್ನು ಸವಿದಿದ್ದಾರೆ. ಜಮೀರ್ ಅಹ್ಮದ್ ಮತ್ತು ಇತರ ಶಾಸಕರ ಜೊತೆ ಬಾಡೂಟ ಸೇವನೆ ಮಾಡುತ್ತಿರುವ ಫೋಟೊ ವೈರಲ್ ಆಗಿತ್ತು.












Click it and Unblock the Notifications