ಮೊದಲ ದಿನದ ಕಲಾಪ; ಡೈಲಾಗ್ ಕಿಂಗ್ ಆದ ಸಿದ್ದರಾಮಯ್ಯ!
Recommended Video
ಬೆಂಗಳೂರು, ಅಕ್ಟೋಬರ್ 10 : ಕರ್ನಾಟಕದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಂದು ಬುಧವಾರ ಸಂಜೆ ಘೋಷಣೆ ಆಯಿತು. ಗುರುವಾರ ಮೊದಲ ದಿನದ ಕಲಾಪದಲ್ಲಿ ಅವರು ಎಲ್ಲರ ಗಮನ ಸೆಳೆದರು, ತಮ್ಮ ಡೈಲಾಗ್ ಮೂಲಕ ಆಡಳಿತ ಪಕ್ಷದ ಸದಸ್ಯರನ್ನು ಸುಮ್ಮನೆ ಕೂರಿಸಿದರು.
ಮೂರು ದಿನಗಳ ವಿಧಾನಸಭೆ ಅಧಿವೇಶನ ಗುರುವಾರ ಆರಂಭವಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಅಂಕಿ-ಅಂಶಗಳ ಜೊತೆಗೆ ಅವರು ಮಾತನಾಡುವುದನ್ನು ಹೊಸ ಸದಸ್ಯರು ಕುತೂಹಲದಿಂದ ಕೇಳಿಸಿಕೊಂಡರು.
ಪ್ರವಾಹ ಪರಿಸ್ಥಿತಿ ಬಗ್ಗೆ ವಿವರವಾಗಿ ಮಾತನಾಡಿದ ಸಿದ್ದರಾಮಯ್ಯ ತಾವು ಒಬ್ಬ ಉತ್ತಮ ಸಂಸದೀಯ ಪಟು ಎಂಬುವನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧವೂ ಆಕ್ರೋಶಗೊಂಡರು.

"ಅವರು ಮಾಜಿ ಉಪ ಮುಖ್ಯಮಂತ್ರಿ, ಈಗ ಕಂದಾಯ ಸಚಿವರು ಅದಕ್ಕೆ ಉತ್ತರಿಸುವಾಗ ಸುಮ್ಮನೆ ಕುಳಿತೆ" ಎಂದು ಆರ್. ಅಶೋಕ್ ಬಗ್ಗೆ ಹೇಳಿದರು. "ಅಶೋಕ ನಿಂದು ಮುಗಿತೇನಪ್ಪಾ?" ಎಂದು ಪ್ರಶ್ನಿಸಿ ಮಾತು ಮುಂದುವರೆಸಿದರು.
"ಸಿ. ಟಿ. ರವಿ ಈಗ ನಿಂದು ಟೂರಿಸ್ಟ್ ಖಾತೆ ತಾನೇ?. ನಿನ್ನ ಖಾತೆ ವಿಚಾರ ಬಂದಾಗ ಮಾತನಾಡುತ್ತೀನಿ ಈಗ ಬೇಡ" ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಕುರಿತು ಹೇಳಿದರು.
"ನೀವು ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ರಿ, ಈಗ ಸ್ಪೀಕರ್ ಆಗಿಲ್ಲವೇ?" ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕುರಿತು ಮಾತನಾಡಿ ಸದನದಲ್ಲಿ ನಗುವಿನ ಅಲೆ ಎಬ್ಬಿಸಿದರು.
"ಒಂದು ಎಕರೆ ಕಬ್ಬು ಬೆಳೆಯಲು ಎಷ್ಟು ಖರ್ಚಾಗುತ್ತದೆ?" ಎಂದು ಪ್ರಶ್ನೆ ಮಾಡಿದರು. ಬಿಜೆಪಿ ಸದಸ್ಯ ಅಶ್ವಥ್ ನಾರಾಯಣ್ ಉತ್ತರಿಸಲು ಎದ್ದು ನಿಂತಾಗ, "ನೀವು ಡಾಕ್ಟ್ರು ನಿಮಗೆ ಗೊತ್ತಿಲ್ಲ ಬಿಡಿ ಕಾರಜೋಳ ಹೇಳುತ್ತಾರೆ" ಎಂದು ಕೂರಿಸಿದರು.
"ರೇವಣ್ಣ ನನಗೆ ಒಂದು ಲಿಂಬೆ ಹಣ್ಣು ಕೊಡಪ್ಪ ಒಳ್ಳೆದಾಗುತ್ತಾ ನೋಡಣ" ಎಂದು ಜೆಡಿಎಸ್ ಸದಸ್ಯ ಎಚ್. ಡಿ. ರೇವಣ್ಣ ಅವರನ್ನು ಹಾಸ್ಯ ಮಾಡಿದರು.
"ಪ್ರವಾಹ ಪರಿಸ್ಥಿತಿ ಬಗ್ಗೆ ನಾಳೆಯೂ ನಾನು 2 ಗಂಟೆ ಮಾತನಾಡುತ್ತೇನೆ. ಉಳಿದ ಸದಸ್ಯರು ಮಾತನಾಡುತ್ತಾರೆ" ಎಂದು ಹೇಳಿದರು.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಕಲಾಪವನ್ನು ಮುಂದೂಡಲಾಗಿದೆ. ಶುಕ್ರವಾರ ನಡೆಯುವ ಚರ್ಚೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications