ಕುರಿ ಕಾಯೋ ತೋಳ ಅಂದ್ರೆ ಸಂಬಳ ಬೇಡ ಅಂತು: ಸಿದ್ದರಾಮಯ್ಯ
Recommended Video
ಬೆಂಗಳೂರು, ಫೆಬ್ರವರಿ 14: "ಕುರಿ ಕಾಯೋ ತೋಳ ಅಂದ್ರೆ ಸಂಬಳ ಬೇಡ ಅಂತು" ಎಂದು ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವುದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾತೆಯನ್ನು ಬದಲಾವಣೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿ, ಖಾತೆ ಹಂಚಿಕೆ ಮಾಡಿದ ಬಳಿಕ ಹಲವಾರು ಗೊಂದಲಗಳು ಸೃಷ್ಟಿಯಾಗಿದೆ. ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವುದಕ್ಕೆ ವಿರೋಧ ಕೇಳಿ ಬರುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, "ಆನಂದ್ ಸಿಂಗ್ ಅರಣ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ಯಡಿಯೂರಪ್ಪ ಅವರೇ ಖಾತೆಯನ್ನು ಬದಲಾವಣೆ ಮಾಡಬೇಕು" ಎಂದು ಒತ್ತಾಯಿಸಿದರು.
"ಆನಂದ್ ಸಿಂಗ್ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣ ದಾಖಲಾಗಿದೆ. ಅರಣ್ಯ ಕಾಯ್ದೆ ಉಲ್ಲಂಘನೆ ಪ್ರಕರಗಳು ಇವೆ. ಅಂತಹವರಿಗೆ ಅರಣ್ಯ ಇಲಾಖೆ ಕೊಟ್ಟರೆ ಏನಾಗುತ್ತದೆ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಭ್ರಷ್ಟಾಚಾರ ಪೋಷಕ ಸರ್ಕಾರ
ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ಅವರು ಅಲ್ಲಿ ಪ್ರಕರಣ ಎದುರಿಸುತ್ತಿದ್ದಾರೆ. ಅಂತಹವರಿಗೆ ಅದೇ ಖಾತೆಯನ್ನು ನೀಡಿದರೆ ಈ ಸರ್ಕಾರ ಭ್ರಷ್ಟಾಚಾರ ಪೋಷಕ ಸರ್ಕಾರವಾಗುತ್ತದೆ" ಎಂದು ಆರೋಪಿಸಿದರು.

ತುರ್ತಾಗಿ ಸಂಪುಟದಿಂದ ಕೈಬಿಡಿ
"ಆನಂದ್ ಸಿಂಗ್ ಅವರೇ ಇಲಾಖೆಗೆ ರಾಜೀನಾಮೆ ನೀಡಬೇಕು ಅಥವ ಮುಖ್ಯಮಂತ್ರಿಗಳು ತುರ್ತಾಗಿ ಆನಂದ್ ಸಿಂಗ್ರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲವೇ ಖಾತೆಯನ್ನು ಬದಲಾವಣೆ ಮಾಡಬೇಕು" ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಅರಣ್ಯ ಖಾತೆಗೆ ವಿರೋಧ ಏಕೆ?
ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ವಿರುದ್ಧ ಅರಣ್ಯ ಕಾಯ್ದೆ ಉಲ್ಲಂಘಟನೆಯ ಎರಡು ಪ್ರಕರಣಗಳು ದಾಖಲಾಗಿವೆ. ಅರಣ್ಯ ನಿಯಮ ಉಲ್ಲಂಘನೆ ಮಾಡಿದವರಿಗೆ ಅದೇ ಖಾತೆಯನ್ನು ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಖಾತೆ ಬದಲಾವಣೆ ಮಾಡಿದ್ದ ಸಿಎಂ
ಸಂಪುಟ ವಿಸ್ತರಣೆ ಬಳಿಕ ಯಡಿಯೂರಪ್ಪ ಆನಂದ್ ಸಿಂಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನು ಸೋಮವಾರ ನೀಡಿದ್ದರು. ಆದರೆ, ಮಂಗಳವಾರ ಖಾತೆಯನ್ನು ಬದಲಾವಣೆ ಮಾಡಿ ಆರಣ್ಯ ಮತ್ತು ಜೈವಿಕ ಖಾತೆ ಹಂಚಿಕೆ ಮಾಡಲಾಗಿತ್ತು.












Click it and Unblock the Notifications