ಕರ್ನಾಟಕ ಗೃಹ ಸಚಿವರಾಗಿ ರಮಾನಾಥ ರೈ?
ಬೆಂಗಳೂರು, ಜುಲೈ 25: ಜಿ. ಪರಮೇಶ್ವರ್ ಅವರ ರಾಜಿನಾಮೆಯಿಂದ ತೆರವಾಗಿರುವ ರಾಜ್ಯ ಗೃಹ ಸಚಿವರ ಸ್ಥಾನಕ್ಕೆ ಯಾರನ್ನು ನೇಮಿಸಲಾಗುತ್ತದೆ? ಸಿದ್ದರಾಮಯ್ಯ ಸಂಪುಟ ಸೇರಲಿರುವ ಮೂವರು ಯಾರು? ಎಂಬ ಪ್ರಶ್ನೆಗಳು, ಕ್ಯಾಬಿನೆಟ್ ಸೇರಲು ಲಾಬಿ, ಸಿದ್ದರಾಮಯ್ಯರಿಂದ ಹೈಕಮಾಂಡ್ ಭೇಟಿಗೆ ಸಿದ್ಧತೆ ಎಲ್ಲವೂ ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಗರಿದೆರರಿರುವ ರಾಜಕೀಯ ಚಟುವಟಿಕೆಗಳಾಗಿವೆ.
ಗೃಹ ಖಾತೆ ಬೇಡ ಎಂದಿದ್ದ ರಾಮಲಿಂಗ ರೆಡ್ಡಿ ಅವರು, ಪಕ್ಷದ ನೀಡುವ ಯಾವುದೇ ಅಧಿಕಾರವನ್ನು ನಿಭಾಯಿಸುವೆ ಎಂದಿರುವುದರಿಂದ ಗೃಹ ಸಚಿವರ ಬಗ್ಗೆ ಸಾರ್ವಜನಿಕರಲ್ಲಿ ಭಾರಿ ಕುತೂಹಲವಿದೆ.

ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರಕ್ಷುಬ್ಧ ಪರಿಸ್ಥಿತಿಯ ನಂತರ ಸಮರ್ಥ ಗೃಹ ಸಚಿವರ ಹುಡುಕಾಟ ಮತ್ತೆ ಶುರುವಾಗಿದೆ. ಮುಂದಿನ ವಾರದೊಳಗೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಆದರೆ, ಅಷ್ಟರಲ್ಲೇ ಗೃಹ ಸಚಿವ ಖಾತೆಗೆ ಹೊಸ ಹೆಸರು ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಗೃಹ ಸಚಿವಾಲಯದ ಹೊಣೆ ನೀಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.

ರಮಾನಾಥ್ ರೈಗೆ ಮಹತ್ವದ ಸ್ಥಾನ
ಕಾಂಗ್ರೆಸ್ ಹೈಕಮಾಂಡ್ ನಿಂದ ಸೂಚನೆ ಸಿಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ(ಜುಲೈ 25) ಸಂಜೆ ವೇಳೆಗೆ ಅರಣ್ಯ ಸಚಿವ ರಮಾನಾಥ ರೈ ಅವರನ್ನು ತಮ್ಮ ಗೃಹ ಕಚೇರಿ ಕಾವೇರಿಗೆ ಕರೆಸಿಕೊಂಡಿದ್ದಾರೆ. ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಸೂಚನೆಯಂತೆ ಗೃಹ ಖಾತೆ ಹೊಣೆ ಹೊರಲು ಸಿದ್ಧ ಎಂದು ರೈ ಅವರು ಹೇಳಿದ್ದಾರೆ. ಬುಧವಾರ(ಆಗಸ್ಟ್ 2) ರಂದು ರೈ ಅವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.

ರಮಾನಾಥ್ ರೈ ಆಯ್ಕೆ ಏಕೆ?
ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣ, ನಂತರ ಬಂಟ್ವಾಳ ಮತ್ತಿತ್ತರ ಸ್ಥಳಗಳಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿ ರೈ ಸಮರ್ಥವಾಗಿ ನಿಭಾಯಿಸಿದ್ದರ ಬಗ್ಗೆ ಹೈಕಮಾಂಡ್ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ, ಶೋಭಾ, ಬಿಎಸ್ ವೈ, ಕಲ್ಲಡ್ಕ ಪ್ರಭಾಕರ್ ಭಟ್, ನಳೀನ್ ಕುಮಾರ್ ಅವರ ವಾಗ್ದಾಳಿಯನ್ನು ರೈಗಳು ಸಮರ್ಥವಾಗಿ ಎದುರಿಸಿದ್ದಾರೆ. ಪ್ರಮುಖ ಖಾತೆ ನೀಡುವ ಮೂಲಕ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ತನ್ನ ಬಲ ಹೆಚ್ಚಿಸಿಕೊಳ್ಳಲಿದೆ.

ಕಾರ್ಯತಂತ್ರ ಬದಲು
ಈ ಬಾರಿ ಗೃಹ ಖಾತೆಯನ್ನು ಅಲ್ಫಸಂಖ್ಯಾತರಿಗೆ ನೀಡುವ ಬಗ್ಗೆ ಸುಳಿವು ಸಿಕ್ಕಿತು. ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಅವರಿಗೆ ಮತ್ತೊಮ್ಮೆ ಗೃಹ ಖಾತೆ ಒಲಿಯಲಿದೆ ಎಂಬ ಸುದ್ದಿಯೂ ಹಬ್ಬಿತು. ರೋಷನ್ ಬೇಗ್ ಅವರ ಹೆಸರು ಕೇಳಿ ಬಂದಿತು. ಈ ಮೂಲಕ ಬೆಂಗಳೂರು ಉಸ್ತುವಾರಿ ಹಾಗೂ ಗೃಹ ಖಾತೆಯನ್ನು ಅಲ್ಪ ಸಂಖ್ಯಾತರಿಗೆ ನೀಡಲು ಕಾಂಗ್ರೆಸ್ ಮುಂದಾಗಿತ್ತು. ಆದರೆ, ಈಗ ತನ್ನ ಕಾರ್ಯತಂತ್ರವನ್ನು ಬದಲಾಯಿಸಿಕೊಂಡಿದೆ.

ಖಾಲಿ ಇರುವ ಮೂರು ಸ್ಥಾನ
ಖಾಲಿ ಇರುವ ಮೂರು ಸ್ಥಾನಗಳಲ್ಲಿ ಒಂದು ಕುರುಬ ಸಮುದಾಯಕ್ಕೆ, ಮತ್ತೊಂದು ಪರಿಶಿಷ್ಟ ಬಲಗೈ ಗೆ ಹಾಗೂ ಇನ್ನೊಂದನ್ನು ವೀರಶೈವ ಸಮುದಾಯಕ್ಕೆ ನೀಡುವ ಸಾಧ್ಯತೆಯಿದೆ. ಇರುವ ಮೂರು ಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಲಾಬಿ ಆರಂಭವಾಗಿದೆ.












Click it and Unblock the Notifications