ನಾನು ಹೇಳಿದ್ದರಲ್ಲಿ ತಪ್ಪು ಏನಿದೆ...!? ನೀವು ಅದಕ್ಕೆ ಉಪ್ಪು ಕಾರ ಹಾಕಬೇಡಿ: ಸಿದ್ದರಾಮಯ್ಯ ಗರಂ ಆಗಿದ್ಯಾಕೆ?
ಬೆಳಗಾವಿ, ಡಿಸೆಂಬರ್ 05: ನಾನು ಹೇಳಿದ್ದರಲ್ಲಿ ತಪ್ಪು ಏನಿದೆ. ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯಗಳ ರಕ್ಷಣೆಗೆ ನಮ್ಮ ಸರ್ಕಾರ ಬದ್ದ ಅಂತ ನಾನು ಹೇಳಿರೋದು, ನೀವು ಅದಕ್ಕೆ ಉಪ್ಪು ಕಾರ ಹಾಕಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಗರಂ ಆಗಿದ್ದಾರೆ.
ಈ ಕುರಿತು ಮಂಗಳವಾರ ಬೆಳಗಾವಿಯ ಸುವರ್ಣ ಸೌಧದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ. ಅಲ್ಪಸಂಖ್ಯಾತರಿಗೆ 4 ರಿಂದ 5 ಸಾವಿರ ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಮೀಸಲಿಡುವುದಾಗಿ ಸಿಎಂ ಅವರ ಹೇಳಿಕೆಯನ್ನು ಬಿಜೆಪಿ ಓಲೈಕೆ ರಾಜಕಾರಣ ಎಂದು ಕರೆದಿರುವ ಬಗ್ಗೆ ಮಾತನಾಡಿ ಅದರಲ್ಲಿ ತಪ್ಪೇನಿದೆ ಎಂದರು. ಅಲ್ಪಸಂಖ್ಯಾತರನ್ನೂ ಸೇರಿದಂತೆ ಎಲ್ಲರಿಗೂ ರಕ್ಷಣೆ ನೀಡುವುದಾಗಿ ಹೇಳಿದ್ದೇನೆ ಎಂದರು.

ಇನ್ನೂ ಮುಸ್ಲೀಂ ಸಮುದಾಯಕ್ಕೆ ಅನುದಾನ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿಗಳು ನಿನ್ನೆ ಸಭೆಯೊಂದರಲ್ಲಿ ರಾಷ್ಟ್ರ ಸಂಪತ್ತಿನಲ್ಲಿ ಅಲ್ಪ ಸಂಖ್ಯಾ ತರಿಗೆ ವಿಶೇಷವಾಗಿರುವ ಹಕ್ಕು ಕೊಡುವ ಮಾತನಾಡಿದ್ದಾರೆ. ಇದು ತುಷ್ಟೀಕರಣದ ರಾಜಕಾರಣ ಮತ ಬ್ಯಾಂಕಿನ ರಾಜಕಾರಣ ಮತ್ತು ಮುಖ್ಯಮಂತ್ರಿ ಯಾಗಿ ಎಲ್ಲರಿಗೂ ನ್ಯಾಯ ಕೊಡುವ ಅವರ ಕರ್ತವ್ಯವನ್ನು ಮರೆತಂತಿದೆ.
ಈಗಾಗಲೇ ಅಲ್ಪಸಂಖ್ಯಾತರಿಗೆ ವಕ್ಪ್ ಬೊರ್ಡ್ ಮೈನಾರಿಟಿ ಕಾರ್ಪೊರೆಷನ್, ಮೈನಾರಿಟಿ ಕಮಿಷನ್ ನಿಂದ ಹಲವಾರು ಕಾರ್ಯಕ್ರಮಗಳ ಮೂಲಕ ಅನುದಾನ ಬರುತ್ತಿದೆ ಅವರೂ ಕೂಡ ಶಿಕ್ಷಣವನ್ನು ಪಡೆದು ಸ್ವಾವಲಂಬಿ ಆಗಬೇಕೆಂಬ ಆಸೆ ಎಲ್ಲ ಸರ್ಕಾರಗಳ ಉದ್ದೇಶ. ಆದರೆ, ಇತರ ಎಲ್ಲ ಸಮುದಾಯಗಳ ಮೇಲೆ ಸವಾರಿ ಮಾಡುವ ರೀತಿ ಮುಖ್ಯಮಂತ್ರಿಯ ಮಾತು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಈ ಕುರಿತು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಪಾಕಿಸ್ತಾನದವರ ಸರ್ಕಾರ ಬಂದಂತಾಗಿದೆ. ಇಂತಹ ಸರ್ಕಾರ. ಇದೇ ಉದ್ಧಟತನ ಮುಂದುವರಿಸಿದರೆ ಅತೀ ಹೆಚ್ಚು ಮತಗಳಿಂದ ಬಿಜೆಪಿ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನೂ ಕರ್ನಾಟಕ ಬಿಜೆಪಿ ಈ ಕುರಿತು ಟ್ವೀಟ್ ಮಾಡಿದ್ದು, ರಾಜ್ಯದ ಬೊಕ್ಕಸ ಬರಿದು ಮಾಡಿ, ಬರ ಪರಿಸ್ಥಿತಿ ನಿಭಾಯಿಸಲು ದುಡ್ಡಿಲ್ಲದೆ ಪರಿತಪಿಸುತ್ತಿರುವಾಗಲೂ ಮುಖ್ಯಮಂತ್ರಿಗಳು ತುಷ್ಟೀಕರಣದಲ್ಲಿ ನಿತ್ಯ ನಿರತರಾಗಿದ್ದಾರೆ. ಅಲ್ಪಸಂಖ್ಯಾತರಿಗೆ ಈಗಾಗಲೇ ₹4,000 ಕೋಟಿ ನೀಡಿದ್ದೇವೆ ಹಾಗೂ ಮುಂದಿನ ದಿನಗಳಲ್ಲಿ ವಾರ್ಷಿಕ ₹10,000 ಕೋಟಿ ನೀಡಲಿದ್ದೇವೆ ಎಂಬ ಮೂಲಕ ಸಿದ್ದರಾಮಯ್ಯ ಅವರು ತುಷ್ಟೀಕರಣ ರಾಜಕಾರಣದ ತುತ್ತತುದಿ ತಲುಪಿದ್ದಾರೆ.
ಭಾಷೆ ಮತ್ತು ಸಂಸ್ಕೃತಿ ನೆಲೆಯಲ್ಲಿ ಮುಸಲ್ಮಾನರಲ್ಲಿ ಪ್ರತ್ಯೇಕತಾ ಭಾವ ಮೂಡಿಸುವ ಪ್ರಯತ್ನಗಳನ್ನು ಮಾಡುವ ಕಾಂಗ್ರೆಸ್ ಪಕ್ಷ, ಇದೀಗ ಪ್ರತ್ಯೇಕತಾ ಭಾವವನ್ನು ಹೆಚ್ಚುಗೊಳಿಸಲು ಸಿದ್ದರಾಮಯ್ಯರವರು ಅನುದಾನಗಳನ್ನು ದುರ್ಬಳಕೆ ಮಾಡಲು ಆರಂಭಿಸಿದ್ದಾರೆ ಎಂದು ಬಿಜೆಪಿ ಹೇಳಿದೆ.












Click it and Unblock the Notifications