Siddaramaiah VS DK Shivakumar: ಸರ್ಕಾರ ರಚನೆಗೆ ಕಾಂಗ್ರೆಸ್ ಸಜ್ಜು: ಡಿಕೆಶಿ - ಸಿದ್ದರಾಮಯ್ಯ ಪ್ಲಸ್,ಮೈನಸ್ ಅಂಶಗಳೇನು?
ಬೆಂಗಳೂರು, ಮೇ 14: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸ ಗೆಲುವು ಸಾಧಿಸಿದೆ. ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಕಾಂಗ್ರೆಸ್ ಪಾಳಯದಲ್ಲಿ ಕಳೆದ ಒಂದು ವರ್ಷಗಳಿಂದ ಚರ್ಚೆಯಾಗುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಹೆಸರು ಹೆಸರು ಭರ್ಜರಿಯಾಗಿ ಓಡಾಡುತ್ತಿದೆ. ಇನ್ನೂ ಬಹುತೇಕ ಶಾಸಕರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕು ಎಂದು ಈ ಹಿಂದೆಯೇ ಬೆಂಬಲವನ್ನ ಸೂಚಿಸಿದ್ದರು.
ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಡಲಿದೆ. ಅಲ್ಲದೇ ಇಂದು ನಡೆಯುವ ಸಭೆಯಲ್ಲೂ ಈ ಕುರಿತು ಶಾಸಕರ ಅಭಿಪ್ರಾಯವನ್ನ ಸಂಗ್ರಹಿಸಲಿದ್ದು, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರ ಬಲಾಬಲಗಳ ಬಗ್ಗೆ ಚರ್ಚೆಯಾಗುತ್ತಿದೆ.

ಸಿದ್ದರಾಮಯ್ಯ ಪ್ಲಸ್ ಪಾಯಿಂಟ್ ಏನು?
ರಾಜ್ಯದಲ್ಲೂ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಸಮುದಾಯದ ದೊಡ್ಡ ಶಕ್ತಿ ಅವರ ಹಿಂದೆ ಇದೆ. 2013 ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಐದು ವರ್ಷ ಆಡಳಿತ ಪೂರ್ಣಗೊಳಿಸಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕೊಟ್ಟಂತಹ ಸಾಕಷ್ಟು ಜನಪರ ಕಾರ್ಯಕ್ರಮಗಳು ಜನರಿಗೆ ತಲುಪಿದೆ. ಅನ್ನ ಭಾಗ್ಯ ಸೇರಿದಂತೆ ಹಲವು ಭಾಗ್ಯ ಯೋಜನೆ ಜಾರಿ ಮಾಡಿದ್ದರು.
ಇನ್ನೂ ಪಕ್ಷದಲ್ಲಿ ಎಲ್ಲಾ ಶಾಸಕರ ಜೊತೆಗ ಉತ್ತಮ ಸಂಬಂಧ ಇಟ್ಟುಕೊಂಡಿರುವ ಸಿದ್ದರಾಮಯ್ಯ ಈ ಬಾರಿಯೂ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ವೈಯಕ್ತಿಕವಾಗಿ ಸಿದ್ದರಾಮಯ್ಯ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ ಅನ್ನೋದು ಮತ್ತೊಂದು ಹೆಗ್ಗಳಿಕೆ. ಹೈಕಮಾಂಡ್ನಲ್ಲಿ ಸಿದ್ದರಾಮಯ್ಯ ಕುರಿತಾಗಿ ಉತ್ತಮವಾದ ಅಭಿಪ್ರಾಯ ಇದೆ. ಅದರಲ್ಲೂ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಬಗ್ಗೆ ಹೆಚ್ಚಿನ ಗೌರವ ಇದೆ.

ಇನ್ನೂ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಮಾತಿಗೆ ಹೆಚ್ಚಿನ ಮನ್ನಣೆ ಸಿಗುತ್ತದೆ. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜನರನ್ನು ಆಕರ್ಷಣೆ ಮಾಡುವ ನಾಯಕತ್ವ ಗುಣ ಹೊಂದಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಉತ್ತಮ ಆಡಳಿತಗಾರ ಎಂಬ ಅಭಿಪ್ರಾಯವೂ ಜನರಲ್ಲಿದೆ.
ಸಿದ್ದರಾಮಯ್ಯ ಮೈನಸ್ ಪಾಯಿಂಟ್ ಏನು?
2013 ರಲ್ಲಿ ಸಿದ್ದರಾಮಯ್ಯ ಅವರು ಈಗಾಗಲೇ ಒಂದು ಬಾರಿ ಪೂರ್ಣಾವಧಿ ಸಿಎಂ ಆಗಿದ್ದಾರೆ. ಈ ನಿಟ್ಟಿನಲ್ಲಿ ಹೊಸಬರಿಗೆ ಅವಕಾಶ ಕೊಡಲಿ ಎಂಬ ಅಭಿಪ್ರಾಯ ವ್ಯಕ್ತವಾಗಬಹುದು. ಇನ್ನೂ ಈ ಹಿಂದೆ ಸಿದ್ದರಾಮಯ್ಯ ಅವರುಜೆಡಿಎಸ್ ಪಕ್ಷದಲ್ಲಿದ್ದವರು. ಸಿದ್ದರಾಮಯ್ಯ ಅವರು ಮೂಲ ಕಾಂಗ್ರೆಸ್ಸಿಗ ಅಲ್ಲ ಎಂಬ ಮಾತೂ ಈ ವೇಳೆ ಚರ್ಚೆಗೆ ಬರಬಹುದು. ಜೊತೆಗೆ ಹೈಕಮಾಂಡ್ನಲ್ಲಿ ಒಂದು ಬಣಡಿಕೆ ಶಿವಕುಮಾರ್ ಪರವಾಗಿ ಇರುವುದು ಕೂಡಾ ಸಿದ್ದರಾಮಯ್ಯ ಅವರಿಗೆ ತೊಡಕಾಗಬಹುದು.
ಡಿ. ಕೆ. ಶಿವಕುಮಾರ್ ಪ್ಲಸ್ ಪಾಯಿಂಟ್ ಏನು?
ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಅವರ ಪ್ರಬಲ ಪ್ರತಿಸ್ಪರ್ಧಿ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಒಕ್ಕಲಿಗರ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಅಲ್ಲದೇ ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷರಾದವರಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎನ್ನುವ ಸಂಪ್ರಾಯವಿದೆ ಇದು ಸಹ ಡಿ ಕೆ ಶಿವಕುಮಾರ್ ಅವರಿಗೆ ಸಹಾಯಕವಾಗಬಹುದು.
ಇನ್ನೂ 35 ವರ್ಷದ ಬಳಿಕ ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿಗೆ ಶ್ರಮ ಹಾಕಿದ್ದಾರೆ ಎಂಬ ಹೆಗ್ಗಳಿಕೆಯೂ ಡಿಕೆಶಿ ಅವರಿಗೆ ಇದೆ. ಇನ್ನು ಮೇಕೆದಾಟು ಸೇರಿದಂತೆ ಹಲವಾರು ಹೋರಾಟಗಳನ್ನು ಉತ್ತಮವಾಗಿ ಸಂಘಟಿಸಿದ್ದಾರೆ. ಒಕ್ಕಲಿಗ ಬೆಲ್ಟ್ನಲ್ಲಿ ಜೆಡಿಎಸ್ ನಾಯಕರಿಗೆ ಪರ್ಯಾಯ ಪ್ರಬಲ ನಾಯಕತ್ವ ನೀಡುವಲ್ಲಿ ಡಿಕೆಶಿ ಯಶಸ್ವಿ ಯಾಗಿದ್ದಾರೆ. ಎಲ್ಲಕ್ಕಿಂತಾ ಹೆಚ್ಚಾಗಿ ಹೈಕಮಾಂಡ್ ಮಟ್ಟದಲ್ಲೂ ಡಿಕೆಶಿಗೆ ಉತ್ತಮ ಬಾಂಧವ್ಯ ಇದೆ.
ಡಿ. ಕೆ. ಶಿವಕುಮಾರ್ ಮೈನಸ್ ಪಾಯಿಂಟ್ ಏನು?
ಇನ್ನೂ ಮೊದಲಿಗೆ ಡಿ. ಕೆ. ಶಿವಕುಮಾರ್ ವಿರುದ್ಧ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದು, ಇದು ಸಹ ಸಿಎಂ ಸ್ಥಾನಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಡಿ. ಕೆ. ಶಿವಕುಮಾರ್ ಅವರ ಮೇಲೆ ಇಡಿ, ಐಟಿ, ಸಿಬಿಐ ತನಿಖೆಗಳಿಂದಾಗಿ ಒಂದು ವೇಳೆ ಸಿಎಂ ಸ್ಥಾನ ಸಿಕ್ಕರೂ ಭವಿಷ್ಯದಲ್ಲಿ ಸಮಸ್ಯೆ ಎದುರಾಗಬಹುದು. ಅಲ್ಲದೇ ಪಕ್ಷದಲ್ಲಿ ಶಾಸಕರ ವಿಶ್ವಾಸ ಗಳಿಸಿಕೊಳ್ಳುವಲ್ಲಿ ಯಶಸ್ವಿ ಆಗಿಲ್ಲ ಎಂಬ ಅಪಸ್ವರಗಳು ಕೇಳಿಬಂದಿದ್ದು, ಡಿ ಕೆ ಶಿವಕುಮಾರ್ ಅವರ ನಡವಳಿಕೆ ಬಗ್ಗೆ ಕೆಲವರಲ್ಲಿ ಇರುವ ಅಸಮಾಧಾನ ಇದೆ.











Click it and Unblock the Notifications