ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡ್ತಾ ಇದೆ ಎಂದು ಒಪ್ಪಿಕೊಂಡ ಸಿದ್ದರಾಮಯ್ಯ!
ಬೆಂಗಳೂರು: ಕರ್ನಾಟಕದಲ್ಲಿ ಅಕ್ಕಿ ಕದನ ಜೋರಾಗಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ಹೇಳಿಕೆ ತಲ್ಲಣ ಸೃಷ್ಟಿಸಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಹೋರಾಟ ನಡೆಸುವಾಗಲೇ ಸರ್ಕಾರ ಯುಟರ್ನ್ ತೆಗೆದುಕೊಂಡಿದೆ. ಅದ್ರಲ್ಲೂ 5 ಕೆಜಿ ಅಕ್ಕಿ ಹೊಂದಿಸಲು ಆಗದೆ ಕೊನೆಗೆ ಹಣ ಕೊಡುವ ತೀರ್ಮಾನಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಷ್ಟುದಿನ 5 ಕೆಜಿ ಅಕ್ಕಿ ಕೊಡುತ್ತಿತ್ತು ಎಂಬ ಸತ್ಯವನ್ನು ಒಪ್ಪಿಕೊಂಡಿದ್ದಾರೆ ಸಿಎಂ ಸಿದ್ದರಾಮಯ್ಯ.
ಅಂದಹಾಗೆ ಅನ್ನಭಾಗ್ಯ ಯೋಜನೆ ಅಡಿ ರಾಜ್ಯದಲ್ಲಿ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು. ಆದರೆ ಅಕ್ಕಿ ದಾಸ್ತಾನು ಇಲ್ಲವೆಂದು ಈಗ 5 ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ಸರ್ಕಾರ ಘೋಷಿಸಿದೆ. ಆದರೆ ಇನ್ನುಳಿದ 5 ಕೆಜಿ ಅಕ್ಕಿ ಬದಲು ಅದರ ಹಣ ನೀಡುವುದಾಗಿ ಹೇಳಿದೆ. ಬುಧವಾರ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜುಲೈ ತಿಂಗಳಿನಿಂದಲೇ 5 ಕೆಜಿ ಅಕ್ಕಿ ಬದಲು ಹಣ ಹಾಕಲು ಸರ್ಕಾರ ತೀರ್ಮಾನಿಸಿದೆ. ಅಕ್ಕಿ ಸಿಗುವವರೆಗೂ 5 ಕೆಜಿ ಅಕ್ಕಿಯ ಬದಲಾಗಿ ಜನರಿಗೆ ಹಣ ಸಿಗಲಿದೆ. ಆದರೆ ವಿಷಯ ಇದಲ್ಲ, ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.

ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ!
ಹೌದು, ಸಂಪುಟ ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ 5 ಕೆಜಿ ಅಕ್ಕಿ ಬದಲು ಜನರಿಗೆ ಹಣ ನೀಡುವ ತೀರ್ಮಾನದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಕರ್ನಾಟಕದ ಅಕ್ಕಿ ದಾಸ್ತಾನು ಮಾಹಿತಿ ನೀಡುವಾಗ, ಕೇಂದ್ರ ಸರ್ಕಾರ ಕೂಡ 5 ಕೆಜಿ ಅಕ್ಕಿ ಕೊಡುತ್ತಿದೆ ಎಂದಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮತ್ತೊಮ್ಮೆ ಬೆಂಕಿ ಹತ್ತಿದೆ. ಇಷ್ಟುದಿನ ಇಲ್ಲ ಎನ್ನುತ್ತಿದ್ದವರು ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿರುವ ವಿಚಾರವನ್ನ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಆರಂಭಿಸಿದೆ. ಈ ಮೂಲಕ ಕರ್ನಾಟಕದಲ್ಲಿ ಅಕ್ಕಿ ವಾರ್ ಮತ್ತೊಂದು ಹಂತಕ್ಕೆ ಹೋಗುವ ಮುನ್ಸೂಚನೆ ಸಿಕ್ಕಿದೆ.
ಎಷ್ಟು ಹಣ ನೀಡಲಿದೆ ರಾಜ್ಯ ಸರ್ಕಾರ?
ಅಗತ್ಯ ಇರುವಷ್ಟು ಅಕ್ಕಿ ಸಿಗುವವರೆಗೂ 1 ಕೆಜಿ ಅಕ್ಕಿಗೆ 34 ರೂಪಾಯಿ, ಅಂದರೆ ಒಟ್ಟಾರೆ 5 ಕೆಜಿಗೆ 170 ರೂಪಾಯಿ ನೀಡಲಾಗುತ್ತೆ. ಪ್ರತಿಯೊಬ್ಬರಿಗೂ 5 ಕೆಜಿ ಅಕ್ಕಿ ಬದಲು ಹಣವನ್ನೇ ನೀಡಲು ತೀರ್ಮಾನಿಸಲಾಗಿದೆ. ಬಿಪಿಎಲ್ ಕಾರ್ಡ್ದಾರರ ಅಕೌಂಟ್ಗೆ ಈ ಹಣ ಹಾಕುತ್ತೇವೆ. ಜುಲೈ 1ರಂದು ಫಲಾನುಭವಿಗಳ ಅಕೌಂಟ್ಗೆ ಹಣ ಹಾಕಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಅಕ್ಕಿ ಕೊಡದ ಹಿನ್ನೆಲೆ ನಾವು ಮಾತು ಕೊಟ್ಟಿದ್ದಂತೆ ಜುಲೈ ತಿಂಗಳಲ್ಲಿ ಹಣ ಕೊಡಲಿದ್ದೇವೆ. 1 ತಿಂಗಳಿಗೆ ಸರ್ಕಾರಕ್ಕೆ 800 ಕೋಟಿ ರೂಪಾಯಿ ಖರ್ಚು ಆಗುತ್ತೆ, ಆದಷ್ಟು ಬೇಗ ಅಕ್ಕಿ ಕೊಡ್ತೀವಿ ಎಂದಿದ್ದಾರೆ ಸಿದ್ದರಾಮಯ್ಯ. ಆದರೆ 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಕೇಂದ್ರ ಸರ್ಕಾರವೇ ಕೊಡುತ್ತಿದೆ ಎಂಬುದನ್ನೂ ಸಿಎಂ ಇದೇ ವೇಳೆ ಒಪ್ಪಿಕೊಂಡಿದ್ದಾರೆ.
ಮಾನ್ಯ @siddaramaiah ರವರೇ...
— BJP Karnataka (@BJP4Karnataka) June 28, 2023
ಕೊನೆಗೂ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು.🙏
ನಿಮ್ಮ #ATMSarkara ಕ್ಕೆ ಮರ್ಯಾದೆ, ವಚನಬದ್ಧತೆ ಇರುವುದೇ ಆದರೆ, ನೀವು ಕೊಡಬೇಕಿರುವುದು ಕೇವಲ 5 ಕೆಜಿಯ ಅಕ್ಕಿಯ ಹಣವನ್ನಲ್ಲ…
…10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಪೂರೈಸಲಿದೆ ಎಂದು ಎದೆ… pic.twitter.com/gOYAsW7wTF
ಸಿದ್ದರಾಮಯ್ಯ ವಿರುದ್ಧ ಕಮಲ ಪಡೆ ವಾಗ್ದಾಳಿ!
ಕೇಂದ್ರ ಸರ್ಕಾರ ಕೂಡ 5 ಕೆಜಿ ಅಕ್ಕಿ ಕೊಡ್ತಿದೆ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಫುಲ್ ಗರಂ ಆಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಆಕ್ರೋಶ ಹೊರಹಾಕಿದೆ. 'ಮಾನ್ಯ @siddaramaiah ರವರೇ... ಕೊನೆಗೂ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು.🙏 ನಿಮ್ಮ #ATMSarkara ಕ್ಕೆ ಮರ್ಯಾದೆ, ವಚನಬದ್ಧತೆ ಇರುವುದೇ ಆದರೆ, ನೀವು ಕೊಡಬೇಕಿರುವುದು ಕೇವಲ 5 ಕೆಜಿಯ ಅಕ್ಕಿಯ ಹಣವನ್ನಲ್ಲ... ...10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಪೂರೈಸಲಿದೆ ಎಂದು ಎದೆ ಬಡಿದುಕೊಂಡಂತೆ, 10 ಕೆಜಿಯ ಸಂಪೂರ್ಣ ಹಣವನ್ನು ಜನರ ಖಾತೆಗಳಿಗೆ ವರ್ಗಾಯಿಸಿ. ಕೊಟ್ಟ ಮಾತು ತಪ್ಪಿ ನಡೆದರೆ ಮೆಚ್ಚಲಾರರು ಕನ್ನಡಿಗರು!' ಎಂದು ಎಚ್ಚರಿಕೆ ನೀಡಿದೆ.
ಒಟ್ನಲ್ಲಿ ಬೀಸುವ ದೊಡ್ಡಣ್ಣೆಯಿಂದ ತಪ್ಪಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಕಿಯ ಬದಲಾಗಿ ದುಡ್ಡು ಕೊಡುತ್ತಿದೆ ಅಂತಾ ಬಿಜೆಪಿ ಆರೋಪಿಸಿದೆ. ಆದರೆ ನಮಗೆ ಕೇಂದ್ರವೇ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇಷ್ಟೆಲ್ಲದರ ನಡುವೆ ಅಕ್ಕಿ ಬದಲು ಹಣ ಸಿಗುತ್ತಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ರಿಯಾಕ್ಷನ್ ಕೊಟ್ಟಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಅಕ್ಕಿಯ ಬದಲು ಕೊಡುತ್ತಿರುವ ದುಡ್ಡಿಗೆ ಮಾರುಕಟ್ಟೆಯಲ್ಲಿ ಕೇವಲ ಎರಡೂವರೆ ಕೆಜಿ ಅಕ್ಕಿ ಮಾತ್ರ ಸಿಗಲಿದೆ ಎಂದು ಕಿಡಿ ಹೊತ್ತಿಸಿದ್ದಾರೆ.












Click it and Unblock the Notifications