'ಭಾರತ ರತ್ನ'ಕ್ಕಾಗಿ ಸಿದ್ದಗಂಗಾ ಶ್ರೀ ತಪ್ಪು ಹೇಳಿಕೆ: ಮಾತೆ ಮಹಾದೇವಿ
ಸಿದ್ದಗಂಗಾ ಶ್ರೀಗಳ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಮಾತೆ ಮಹದೇವೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಶ್ರೀಗಳಿಂದ ತಪ್ಪು ಹೇಳಿಸಿದ್ದಾರೆಂದು ಹೇಳಿಕೆ.
ಬಾಗಲಕೋಟೆ, ಸೆಪ್ಟೆಂಬರ್ 13: ಭಾರತದ ಅತ್ಯಂತ ಪ್ರತಿಷ್ಠಿತ ನಾಗರಿಕ ಗೌರವವಾದ 'ಭಾರತ ರತ್ನ'ವನ್ನು ಕೊಡಿಸುವ ವಾಗ್ದಾನವನ್ನು ಕೆಲ ರಾಜಕಾರಣಿಗಳು ನೀಡಿರುವುದರಿಂದ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಸಿದ್ದಗಂಗಾ ಶ್ರೀಗಳಿಂದ ಸುಳ್ಳು ಹೇಳಿಸಲಾಗುತ್ತಿದೆ ಎಂದು ಬಸವಪೀಠ ಅಧ್ಯಕ್ಷರಾದ ಮಾತೆ ಮಹಾದೇವಿ ಆರೋಪಿಸಿದ್ದಾರೆ.
ಸಿದ್ದಗಂಗಾ ಮಠದ ಪತ್ರಿಕಾ ಪ್ರಕಟಣೆಯಲ್ಲಿ ಏನಿದೆ?
ಇತ್ತೀಚೆಗೆ, ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂಬುದು ಸಿದ್ದಗಂಗಾ ಶ್ರೀಗಳ ಅಭಿಲಾಷೆಯಾಗಿದೆ ಎಂದು ಹೇಳುವ ಮೂಲಕ ಸಚಿವ ಎಂ.ಬಿ. ಪಾಟೀಲ್ ಅವರು ವಿವಾದಕ್ಕೆ ನಾಂದಿ ಹಾಡಿದ್ದರು.
ಇದರ ಬೆನ್ನಲ್ಲೇ ಸಿದ್ದಗಂಗಾ ಮಠದಿಂದ ಸ್ಪಷ್ಟನೆ ಬಂದಿತ್ತು. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಮಠ, ಲಿಂಗಾಯತ ಹಾಗೂ ವೀರಶೈವ ಒಂದೇ ಎಂದು ಸಿದ್ದಗಂಗಾ ಶ್ರೀಗಳು ಹೇಳಿಲ್ಲ. ಸಚಿವ ಪಾಟೀಲರು ಶ್ರೀಗಳ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ ಎಂದು ತಿಳಿಸಿತು. ಇದು ಭಾರೀ ವಿವಾದಕ್ಕೆ ಕಾರಣವಾಯಿತಲ್ಲದೆ, ಸಚಿವ ಎಂ.ಬಿ. ಪಾಟೀಲರ ವಿರುದ್ಧ ತೀವ್ರ ವಾಗ್ದಾಳಿಗಳು ಕೇಳಿಬಂದವು.
ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾತೆ ಮಹಾದೇವಿ, ''ಸಿದ್ದಗಂಗಾ ಶ್ರೀಗಳಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ. ಇತ್ತೀಚೆಗೆ ಬೇಲಿ ಮಠದ ಶ್ರೀಗಳು ಮಠಕ್ಕೆ ಬಂದಿದ್ದಾಗ ನೀವು ಯಾರು ಎಂದು ಅವರು ಪ್ರಶ್ನೆ ಮಾಡಿದ್ದರಂತೆ. ಶ್ರೀಗಳ ಇಂಥ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಮಠದ ಕೆಲವರು ಕೆಲವು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ'' ಎಂದರು.
'ನಾನು ಸುಳ್ಳು ಹೇಳಿದ್ದರೆ ಅದರ ಶಾಪ ನನ್ನ ಕುಟುಂಬಕ್ಕೆ ತಟ್ಟಲಿ'
''ಶ್ರೀಗಳಿಗೆ ಭಾರತ ರತ್ನ ಕೊಡಿಸುವುದಾಗಿ ಕೆಲವು ರಾಜಕಾರಣಿಗಳು ಶ್ರೀಗಳಿಗೆ ಆಮಿಷ ಒಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಹೇಳಿಕೆಯನ್ನು ಬದಲಿಸಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ'' ಎಂದು ಅವರು ತಿಳಿಸಿದ್ದಾರೆ.
ಶ್ರೀಗಳಿಗೆ ಭಾರತ ರತ್ನ ಕೊಡಿಸುವ ಭರವಸೆಯನ್ನು ಕೆಲ ರಾಜಕಾರಣಿಗಳು ಆಶ್ವಾಸನೆ ನೀಡಿರುವುದು ತಮಗೆ ತಿಳಿದುಬಂದಿದೆ ಎಂದಿರುವ ಅವರು, ಶೀಘ್ರದಲ್ಲೇ ಇದರ ವಿವರವನ್ನೂ ಬಹಿರಂಗಗೊಳಿಸುವುದಾಗಿ ಹೇಳಿದರು.