ಕರ್ನಾಟಕದಲ್ಲೂ ಪಟಾಕಿ ನಿಷೇಧಿಸಬೇಕಾ? ಒನ್ ಇಂಡಿಯಾ ಓದುಗರು ಏನಂತಾರೆ?
ಬೆಂಗಳೂರು, ಅಕ್ಟೋಬರ್ 11: ಬೆಳಕಿನ ಹಬ್ಬ ದೀಪಾವಳಿಗೆ ಇನ್ನು ಕೆಲವೇ ದಿನ ಬಾಕಿ ಇದೆ.
ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ತಡೆಗಾಗಿ ಸುಪ್ರೀಂ ಕೋರ್ಟ್ ಪಟಾಕಿ ನಿಷೇಧಿಸುವಂತೆ ಆದೇಶಿಸಿದ ಬೆನ್ನಲ್ಲೇ ಛತ್ತೀಸ್ ಗಢ ಮತ್ತು ಮಹಾರಾಷ್ಟ್ರ ಸರ್ಕಾರಗಳೂ ಪಟಾಕಿ ನಿಷೇಧಿಸಿ ಪರಿಸರ ಸ್ನೇಹಿ ದೀಪಾವಳಿಗೆ ನಾಂದಿ ಹಾಡಿವೆ.
ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಪಟಾಕಿ ನಿಷೇಧಿಸಬೇಕಾ ಎಂಬ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಒನ್ ಇಂಡಿಯಾ ಕನ್ನಡ, ಸಾರ್ವಜನಿಕರ ಅಭಿಪ್ರಾಯ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಕರ್ನಾಟಕದಲ್ಲಿ ಪಟಾಕಿ ನಿಷೇಧಿಸಬೇಕೆ ಎಂಬ ಪ್ರಶ್ನೆಗೆ ಶೇ. 53 ರಷ್ಟು ಜನ "ಹೌದು, ಪರಿಸರ ಸ್ನೇಹಿ ದೀಪಾವಳಿ ನಮ್ಮ ಆದ್ಯತೆ" ಎಂದಿದ್ದಾರೆ. ಇನ್ನುಳಿದ 47 ಪ್ರತಿಶತ ಜನರಲ್ಲಿ ಶೇ.23 ರಷ್ಟು ಜನ "ಪಟಾಕಿ ಬೇಕು" ಎಂದಿದ್ದರೆ, ಶೇ.24 ರಷ್ಟು ಜನ "ಪಟಾಕಿ ಬೇಕೋ, ಬೇಡವೋ ಎಂಬುದು ಅವರವರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟ ವಿಚಾರ" ಎಂದಿದ್ದಾರೆ.
ಈ ಕುರಿತು ಫೇಸ್ ಬುಕ್, ಟ್ವಿಟ್ಟರ್ ಗಳಲ್ಲೂ ಚರ್ಚೆ ಎದ್ದಿದ್ದು, ಕೆಲವರು ಪಟಾಕಿ ನಿಷೇಧವನ್ನು ಬೆಂಬಲಿಸಿದರೆ ಮತ್ತಷ್ಟು ಜನ ವಿರೋಧಿಸಿದ್ದಾರೆ.

ಪಟಾಕಿ ನಿಷೇಧಿಸಿ
ನಮ್ಮೆಲ್ಲರನ್ನೂ ಪೊರೆಯುತ್ತಿರುವ ನಿಸರ್ಗವನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಮನುಷ್ಯ ಆರೋಗ್ಯದ ಮೇಲೆ ಪ್ರಭಾವ ಬೀರುವ ಪಟಾಕಿಯ ಅಗತ್ಯವಿಲ್ಲ. ದಯವಿಟ್ಟು ಇದನ್ನು ನಿಷೇಧಿಸಿ ಎಂದು ಹನುಮಂತ್ ನಂದೇಶ್ವರ್ ಎನ್ನುವವರು ಫೇಸ್ ಬುಕ್ ನಲ್ಲಿ ಕಮೆಂಟ್ ಮಾಡಿದ್ದಾರೆ.

ಪಟಾಕಿಯಿಂದ ಹೆಚ್ಚೇನೂ ಮಾಲಿನ್ಯ ಆಗ್ತಾ ಇಲ್ಲ!
ಪಟಾಕಿ ಹಚ್ಚುವುದರಿಂದ ಹೆಚ್ಚೇನೂ ಪರಿಸರ ಮಾಲಿನ್ಯ ಆಗ್ತಾ ಇಲ್ಲ. ಆದರೆ ಪ್ರಾಣಿ-ಪಕ್ಷಿಗಳಿಗೆ ತೊಂದರೆ ಆಗ್ತಾ ಇದೆ. ಒಂದು ವಾರ ಪಟಾಕಿ ಹೊಡೆಯುವುದರಿಂದ ಆಗುವ ಮಾಲಿನ್ಯ ವಾತಾವರಣ ಶುದ್ಧವಾಗುವುದಕ್ಕೆ ಒಂದು ವಾರ ಸಾಕು. ನಿಜ ಹೇಳಬೇಕಂದ್ರೆ ವಾಹನಗಳಿಂದ ದಿನನಿತ್ಯ ಮಾಲಿನ್ಯ ಆಗ್ತಾ ಇದೆ ಎಂದು ಲಕ್ಶ್ಮಣ್ ಎನ್ನುವವರು ಕಮೆಂಟ್ ಮಾಡಿದ್ದಾರೆ.

ತಮಿಳುನಾಡಿಗೆ ನಷ್ಟ
ಪಟಾಕಿ ಬ್ಯಾನ್ ಮಾಡುವುದರಿಂದ ಕರ್ನಾಟಕಕ್ಕೆ ನಷ್ಟವಿಲ್ಲ, ಬದಲಾಗಿ ತಮಿಳುನಾಡಿನ ಮಾರುಕಟ್ಟೆಗೆ ನಷ್ಟ ಎಂದು ನಿತಿನ್ ಎಂಬುವವರು ಕಮೆಂಟ್ ಮಾಡಿದ್ದಾರೆ.

ವಾಹನದ ಉಪಯೋಗ ನಿಲ್ಲಿಸಿ!
ಮನೆಗೆ ನಾಲ್ಕು ನಾಲ್ಕು ಗಾಡಿ, ಕಾರುಗಳನ್ನ್ ಇಟ್ಟುಕೊಳ್ಳೋದು ಬಂದ್ ಮಾಡಿದರೆ, ವಾಯು, ಶಬ್ದ ಎಲ್ಲಾ ಮಾಲಿನ್ಯವೂ ನಿಲ್ಲುತ್ತದೆ ಎಂದು ಶಶಿವ ಮೂರ್ತಿ ಎಂಬುವವರು ಕಮೆಂಟ್ ಮಾಡಿದ್ದಾರೆ.

ಸ್ವಲ್ಪ ಪಟಾಕಿ ಇರಲಿ ಸಾಕು!
ಹಬ್ಬದ ಸಂಭ್ರಮಕ್ಕಾಗಿ ಸ್ವಲ್ಪ ಪಟಾಕಿ ಇರಲಿ ಸಾಕು. ರಸ್ತೆ ತುಂಬ ಪಟಾಕಿ ಹೊಡೆಯಬೇಕಾದ ಅಗತ್ಯವಿಲ್ಲ. ಅದರಿಂದ ಮಾಲಿನ್ಯವೂ ಆಗೋಲ್ಲ, ಯಾವ ಅನಾಹುತವೂ ಆಗೋಲ್ಲ ಎಂದು ವೀರೇಶ್ ಎಂಬುವವರು ಕಮೆಂಟ್ ಮಾಡಿದ್ದಾರೆ.

ನಿಷೇಧಿಸುವುದಕ್ಕಿಂತ ಜನರಲ್ಲಿ ಅರಿವು ಮೂಡಿಸಿ!
ಪಟಾಕಿಗಳನ್ನು ನಿಷೇಧಿಸುವ ಬದಲು ಅವುಗಳಿಂದಾಗುವ ಅಪಾಯಗಳ ಕುರಿತು ಜನರಲ್ಲಿ ಅರಿವು ಮೂಡಿಸಿ ಎಂದು ರಾಕೇಶ್ ಎನ್ನುವವರ ಕಮೆಂಟ್ ಮಾಡಿದ್ದರೆ, ರಾಮಚಂದ್ರ ಎನ್ನುವವರು, ಪಟಾಕಿಯನ್ನು ಭಾರತದಿಂದಲೇ ನಿಷೇಧಿಸಬೇಕು ಎಂದಿದ್ದಾರೆ.












Click it and Unblock the Notifications