ಶೋಭಾಗೆ ಸಂಪುಟದಲ್ಲಿ ಸ್ಥಾನವಿಲ್ಲ, ಯಡಿಯೂರಪ್ಪ ಶಿಫಾರಸಿಗೆ ಮನ್ನಣೆಯಿಲ್ಲ
Recommended Video
ಬೆಂಗಳೂರು, ಮೇ 31 : ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯಲ್ಲಿ 28ರಲ್ಲಿ 25+1 ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಕರ್ನಾಟಕದಿಂದ ಗೆದ್ದ ಏಕೈಕ ಮಹಿಳಾ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಭಾರೀ ಭ್ರಮನಿರಸನವಾಗಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವ ಶೋಭಾ ಕರಂದ್ಲಾಜೆ ಅವರನ್ನು ನರೇಂದ್ರ ಮೋದಿಯವರ ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎಂಬ ಯಡಿಯೂರಪ್ಪ ಅವರ ಕೋರಿಕೆಯನ್ನು ನರೇಂದ್ರ ಮೋದಿಯಾಗಲಿ, ಅಮಿತ್ ಶಾ ಅವರಾಗಲಿ ಮನ್ನಿಸಿಲ್ಲ.
ಮೋದಿ ಸಂಪುಟ 2.0 LIVE : 58 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ
ಬದಲಾಗಿ, ಹಿರಿಯ ಸಂಸದರಾದ ಪ್ರಹ್ಲಾದ್ ಜೋಶಿ (ಧಾರವಾಡ), ಸುರೇಶ್ ಅಂಗಡಿ (ಬೆಳಗಾವಿ) ಮತ್ತು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ (ಬೆಂಗಳೂರು ಉತ್ತರ) ಅವರನ್ನು ಅವರ ಅನುಭವದ ಆಧಾರದ ಮೇಲೆ ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ. ಇವರಲ್ಲಿ ಜೋಶಿ ಮತ್ತು ಸದಾನಂದ ಗೌಡರು ಸಂಪುಟ ದರ್ಜೆಯ ಸಚಿವರಾದರೆ, ಅಂಗಡಿ ಅವರನ್ನು ರಾಜ್ಯ ಖಾತೆ ಸಚಿವರನ್ನಾಗಿ ಮಾಡಲಾಗಿದೆ. ಅವರಿಗೆ ಯಾವ ಖಾತೆ ಸಿಗಲಿದೆ ಎಂಬುದು ಇಂದು ತಿಳಿಯಲಿದೆ.
ಕರ್ನಾಟಕದ ಬಿಜೆಪಿ ಮಹಿಳಾ ಮೋರ್ಚಾ ಶೋಭಾ ಕರಂದ್ಲಾಜೆಯವರನ್ನು ಮೋದಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ ಬೇಡಿಕೆ ಇಟ್ಟಿತ್ತು. ಅದನ್ನು ಯಡಿಯೂರಪ್ಪನವರು ಕೂಡ ಶಿಫಾರಸು ಮಾಡಿದ್ದರು. ಶೋಭಾ ಅವರು ಕೇಂದ್ರ ತಮಗೆ ನೀಡಿದ್ದ ಜವಾಬ್ದಾರಿಯನ್ನು ಹಿಂದೆ ಕೂಡ ಅತ್ಯಂತ ನಿಷ್ಠೆಯಿಂದ ನಿಭಾಯಿಸಿರುವುದರಿಂದ ತಮ್ಮ ಕೋರಿಕೆಯನ್ನು ಮನ್ನಿಸಲಾಗುವುದು ಮತ್ತು ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಗೌರವಿಸಲಾಗುವುದು ಎಂದು ಅವರು ಭಾವಿಸಿದ್ದರು.
ಮೋದಿ ಸಂಪುಟದಲ್ಲಿ 6 ಮಹಿಳೆಯರಿಗೆ ಸಚಿವ ಸ್ಥಾನ, ಮೂವರಿಗೆ ಸಂಪುಟ ದರ್ಜೆ
ಈ ಕುರಿತಾಗಿ, ಬುಧವಾರದಿಂದಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಯಡಿಯೂರಪ್ಪನವರು, ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಕೇಂದ್ರದ ಹಿರಿಯ ನಾಯಕರನ್ನು ಭೇಟಿಯಾಗುವುದಾಗಿಯೂ ಘೋಷಿಸಿದ್ದರು. ಸಂಪುಟ ಸೇರಿರಿರುವ ಹಲವಾರು ಸಂಸದರಿಗೆ ಅಮಿತ್ ಶಾ ಅವರ ಕರೆಗಳು ಹೋಗುತ್ತಿದ್ದಂತೆ, ಶೋಭಾ ಕರಂದ್ಲಾಜೆ ಅವರಿಗೂ ಶಾ ಅವರ ಕರೆ ಬರುವುದಾಗಿ ನಿರೀಕ್ಷಿಸಿದ್ದರು. ಆದರೆ, ಆ ಕರೆ ಕಡೆಗೂ ಬರಲೇ ಇಲ್ಲ. ಶೋಭಾ ಅವರ ಜೊತೆ ಗದ್ದಿಗೌಡರ್ ಅವರ ಹೆಸರನ್ನೂ ಶಿಫಾರಸು ಮಾಡಲಾಗಿತ್ತು.
ಮೋದಿ 2.0 ಸರ್ಕಾರದಲ್ಲಿ ಯಾರು ಹಿರಿಯ ಹಾಗೂ ಕಿರಿಯ ಸಚಿವರು
ಈ ಕಾರಣದಿಂದಾಗಿ ಯಡಿಯೂರಪ್ಪನವರಿಗೆ ಎರಡನೇ ಬಾರಿ ನಿರಾಶೆಯಾಗಿದೆ. ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅವರು ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಆದರೆ, ಕಡೆಯ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿತ್ತು. ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ಸಿನ ಬಿಕೆ ಹರಿಪ್ರಸಾದ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದ್ದಾರೆ.