838 ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ನೀಡಿದ ಸಿಎಂ
ಬೆಂಗಳೂರು, ಮೇ 15 : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಉನ್ನತಾಧಿಕಾರ ಸಮಿತಿ ರಾಜ್ಯದಲ್ಲಿ 838 ಕೋಟಿ ಬಂಡವಾಳ ಹೂಡಿಕೆಯ ಮೂರು ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಮೂರು ಯೋಜನೆಗಳಿಂದ ಸುಮಾರು 2000 ಉದ್ಯೋಗ ಸೃಷ್ಟಿಯಾಗಲಿದೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಉನ್ನತಾಧಿಕಾರ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಬಗ್ಗೆ ಬಂದಿರುವ 22ಕ್ಕೂ ಹೆಚ್ಚು ಪ್ರಸ್ತಾವನೆಗಳ ಕುರಿತು ಚರ್ಚೆ ನಡೆಸಲಾಯಿತು. ಇವುಗಳನ್ನು ಮೂರು ಯೋಜನೆಗಳಿಗೆ ಒಪ್ಪಿಗೆ ನೀಡಿದ್ದು, 14 ಯೋಜನೆಗಳಿಗೆ ಕಾಲಮಿತಿ ವಿಸ್ತರಣೆ, ಸ್ಥಳ ಬದಲಾವಣೆ, ಹೆಚ್ಚುವರಿ ವಿದ್ಯುತ್ ಬೇಡಿಕೆಗೆ ಸಂಬಂಧಿಸಿದ ತಿದ್ದುಪಡಿ ಮಾಡಲು ಒಪ್ಪಿಗೆ ನೀಡಲಾಗಿದೆ.

ಒಪ್ಪಿಗೆ ನೀಡಿದ ಯೋಜನೆಗಳು: ಬುಧವಾರ ನಡೆದ ಸಭೆಯಲ್ಲಿ ಎಸ್.ಪಿ.ಆರ್ ಡಿಸ್ಟಿಲರೀಸ್ ನ 385 ಕೋಟಿ ರೂ., ಶ್ರೀನಿವಾಸ ಏಜುಕೇಷನ್ ಚಾರಿಟಬಲ್ ಟ್ರಸ್ಟ್ ನ 246.70 ಕೋಟಿ ರೂ. ಹಾಗೂ ಇಂಟರ್ ನ್ಯಾಷನಲ್ ಏರೋಸ್ಪೇಸ್ ಮ್ಯಾನುಫ್ಯಾಕ್ಚರಿಂಗ್ ಪ್ರೈ.ಲಿ.ನ 207 ಕೋಟಿ ರೂ. ಸೇರಿದಂತೆ ಒಟ್ಟು 838.7 ಕೋಟಿ ರೂ. ಹೂಡಿಕೆಯ ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ಇದರಿಂದ 2,100 ಉದ್ಯೋಗ ಸೃಷ್ಟಿಯಾಗಲಿದೆ. [ಚಾಮರಾಜನಗರಕ್ಕೆ 12 ಕೋಟಿ ಬಂಡವಾಳ]
ಚಾಮರಾಜನಗರ ಜಿಲ್ಲೆಗೆ ಆದ್ಯತೆ : ಗಡಿಜಿಲ್ಲೆ ಚಾಮರಾಜನಗರದಲ್ಲಿ 300ಕ್ಕೂ ಹೆಚ್ಚು ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ. ಜಿಲ್ಲೆಯಲ್ಲಿ ಸುಮಾರು 12 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಸಿದ್ಧರಾಗಿದ್ದು, ಅಗತ್ಯ ಭೂಮಿಗಾಗಿ ಕಾದು ಕುಳಿತಿದ್ದಾರೆ. ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಕೆಐಎಡಿಬಿ 1,600 ಎಕರೆ ಜಮೀನು ಅಭಿವೃದ್ಧಿಪಡಿಸುತ್ತಿದೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.
ಚಾಮರಾಜನಗರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಭೂ ಬೆಲೆ ನಿರ್ಧರಣಾ ಸಮಿತಿ ರಚಿಸಲಾಗಿದ್ದು, ರೈತರಿಂದ ವಶಪಡಿಸಿಕೊಂಡ ಭುಮಿಗೆ ಎಷ್ಟು ಪರಿಹಾರ ನೀಡಬೇಕು ಎಂದು ಈ ಸಮಿತಿ ನಿರ್ಧಾರ ಕೈಗೊಂಡು ವರದಿ ನೀಡಲಿದೆ. 2014ರ ಡಿಸೆಂಬರ್ ವೇಳೆಗೆ ಉದ್ಯಮ ಸ್ಥಾಪಿಸುವವರಿಗೆ ಜಿಲ್ಲೆಯಲ್ಲಿ ಭೂಮಿ ಹಂಚಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.












Click it and Unblock the Notifications