ಬಿಜೆಪಿಯಿಂದ ಆಮಿಷ : ಶಿವರಾಮ ಹೆಬ್ಬಾರ್ ಹೇಳಿದ್ದೇನು?
ಕಾರವಾರ, ಮೇ 20 : ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್ ಅವರ ಪತ್ನಿ ವನಜಾಕ್ಷಿ ಹೆಬ್ಬಾರ್ ಅವರಿಗೆ ಬಿಜೆಪಿಯಿಂದ ಕರೆ ಮಾಡಿ ಆಮಿಷವೊಡ್ಡಲಾಗಿದೆ ಎಂಬ ಸುದ್ದಿಯನ್ನು ಶಿವರಾಮ ಹೆಬ್ಬಾರ್ ತಳ್ಳಿ ಹಾಕಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಅವರು ಸ್ಪಷ್ಟನೆ ನೀಡಿದ್ದಾರೆ. 'ನ್ಯೂಸ್ ಚಾನಲ್ಗಳಲ್ಲಿ ನನ್ನ ಪತ್ನಿಯೊಂದಿಗೆ ಬಿಜೆಪಿಯವರು ನಡೆಸಿದ್ದಾರೆ ಎನ್ನುವ ಸಂಭಾಷಣೆ ಟೇಪ್ ಬಿಡುಗಡೆ ವಿಷಯ ಸದನದಲ್ಲಿದ್ದ ನನಗೆ ತಡವಾಗಿ ತಿಳಿಯಿತು. ಇದು ನನ್ನ ಹೆಂಡತಿಯ ಧ್ವನಿಯೂ ಅಲ್ಲ ಮತ್ತು ನನ್ನ ಹೆಂಡತಿಗೆ ಯಾರ ಫೋನ್ ಕರೆಯೂ ಬಂದಿಲ್ಲ' ಎಂದು ಹೇಳಿದ್ದಾರೆ.
'ರಾಜಕೀಯ ಕಾರಣಕ್ಕಾಗಿ ಈ ರೀತಿ ಸುಳ್ಳು ಟೇಪ್ಗಳನ್ನು ಯಾರೇ ಬಿಡುಗಡೆ ಮಾಡಿದರೂ ಅದಕ್ಕೆ ನನ್ನ ಧಿಕ್ಕಾರವಿದೆ' ಎಂದು ಬರೆದುಕೊಂಡಿದ್ದಾರೆ. 'ಈ ಆಡಿಯೋ ಟೇಪ್ ಫೇಕ್, ಇದನ್ನು ಖಂಡಿಸುತ್ತೇನೆ. ನನ್ನ ಕ್ಷೇತ್ರದ ಜನರು ಮತ್ತೊಮ್ಮೆ ಸೇವೆ ಮಾಡಲು ನನಗೆ ಅವಕಾಶ ಕೊಟ್ಟಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು' ಎಂದು ಬರೆದಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಅವರು ವನಜಾಕ್ಷಿ ಹೆಬ್ಬಾರ್ಗೆ ಕರೆ ಮಾಡಿ, ಹೆಬ್ಬಾರ್ ಬಿಜೆಪಿಯನ್ನು ಬೆಂಬಲಿಸಿದರೆ 15 ಕೋಟಿ ರೂ. ಮತ್ತು ಮಂತ್ರಿ ಸ್ಥಾನ ನೀಡುವುದಾಗಿ ಹಾಗೂ ಪುತ್ರನ ಮೇಲಿರುವ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ರದ್ದುಪಡಿಸುವ ಆಮಿಷವೊಡ್ಡಿದ್ದಾರೆ ಎಂಬ ಆರೋಪವನ್ನು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಮಾಡಿದ್ದರು.
ಶನಿವಾರ ವಿಧಾನಸೌಧದಲ್ಲಿ ಅದಕ್ಕೆ ಸಂಬಂಧಿಸಿದ ಆಡಿಯೋ ಟೇಪ್ ಅನ್ನು ಅವರು ಬಿಡುಗಡೆ ಮಾಡಿದ್ದರು. ಆದರೆ, ಈಗ ಸ್ವತಃ ಶಾಸಕರೇ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದ್ದಾರೆ.












Click it and Unblock the Notifications