"ಯಡಿಯೂರಪ್ಪ ನಮಗೆ ಅನ್ಯಾಯ ಮಾಡಲ್ಲ"
ಬೆಂಗಳೂರು, ಜುಲೈ 28: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ನಂತರ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನಮಾನ ಸಿಗಲಿದೆ ಎಂಬ ಕುರಿತು ಕುತೂಹಲ ಉಂಟಾಗಿದೆ.
ಯಡಿಯೂರಪ್ಪ ರಾಜೀನಾಮೆ ಸಲ್ಲಿಸಿದ ನಂತರ, ಕಾಂಗ್ರೆಸ್, ಜೆಡಿಎಸ್ ತೊರೆದು ಬಂದಿದ್ದವರ ಭವಿಷ್ಯ ಏನಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೊಮ್ಮಾಯಿ ಸಂಪುಟ; ಮೈಸೂರು ಶಾಸಕರಿಗೆ ಸಿಗುತ್ತಾ ಸಚಿವ ಸ್ಥಾನ?
"ನಾವು ಬಿಜೆಪಿ ಹಾಗೂ ಯಡಿಯೂರಪ್ಪ ಅವರನ್ನು ನಂಬಿಕೊಂಡು ಬಂದವರು. ನಮಗೆ ಬಿಜೆಪಿಯವರು ಹಾಗು ಯಡಿಯೂರಪ್ಪನವರು ಅನ್ಯಾಯ ಮಾಡುವುದಿಲ್ಲ ಎಂಬ ವಿಶ್ವಾಸವಿದೆ" ಎಂದು ಹೇಳಿದ್ದಾರೆ.
ನೂತನ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪನವರು ಹೇಗೆ ತೀರ್ಮಾನ ಮಾಡುತ್ತಾರೋ ಅದರ ಮೇಲೆ ನಮ್ಮ ಸಚಿವ ಸ್ಥಾನ ನಿರ್ಧಾರವಾಗುತ್ತದೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವ ಬಿ.ಸಿ. ಪಾಟೀಲ್ ಕೂಡ ಈ ಕುರಿತು ಮಾತನಾಡಿದ್ದು, "ನಾವು ಹೈಕಮಾಂಡ್ ನಂಬಿ ಬಂದಿಲ್ಲ, ಯಡಿಯೂರಪ್ಪ ನಂಬಿ ಬಿಜೆಪಿಗೆ ಬಂದಿದ್ದೇವೆ" ಎಂದು ಮತ್ತೆ ಮಂತ್ರಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ನಾವು ದೆಹಲಿಯನ್ನು ನಂಬಿ ಬಂದವರಲ್ಲ. ಬೆಂಗಳೂರನ್ನು ನಂಬಿ ಬಂದವರು. ಯಡಿಯೂರಪ್ಪನವರೇ ಈಗಲೂ ಮಾರ್ಗದರ್ಶಕರು. ಯಡಿಯೂರಪ್ಪನವರು ಅಧಿಕಾರ ಬಿಟ್ಡಿದ್ದಾರೆ ಹೊರತು ಪಕ್ಷವನ್ನಲ್ಲ. ಹೊಸ ಮುಖ್ಯಮಂತ್ರಿಯವರೂ ಯಡಿಯೂರಪ್ಪನವರ ಮಾರ್ಗದರ್ಶನದಲ್ಲೇ ನಡೆಯುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Recommended Video
ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಸಚಿವ ಸ್ಥಾನ ಸಿಗಲಿಲ್ಲ. ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣ ಕೊಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ನ ಶಾಸಕರು ಬಿಜೆಪಿ ಸೇರಿದ್ದರು. ರಮೇಶ್ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಬಿ.ಸಿ. ಪಾಟೀಲ್, ಬೈರತಿ ಬಸವರಾಜು, ಎಂಟಿಬಿ ನಾಗರಾಜು, ಮನಿರತ್ನ, ಎಸ್. ಟಿ. ಸೋಮಶೇಖರ್ , ಡಾ. ಕೆ. ಸುಧಾಕರ್ ಕಾಂಗ್ರೆಸ್ ನಿಂದ ಜಿಗಿದಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಬಿಟ್ಟು ಎಚ್. ವಿಶ್ವನಾಥ್, ನಾರಾಯಣಗೌಡ, ಶಾಸಕ ಗೋಪಾಲಯ್ಯ ಕಮಲ ಪಾಳಯ ಸೇರಿದ್ದರು.