ಸಿಎಂ ಆಗಿದ್ದವರಿಗೆ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಗಿಲ್ಲ: ಸಚಿವ ಶಿವಾನಂದ ಪಾಟೀಲ್ ಕಿಡಿ
ಹಾವೇರಿ, ಮಾರ್ಚ್ 20: ಬಿಜೆಪಿ ಅಭ್ಯರ್ಥಿ ಬಗ್ಗೆ ನನಗೆ ನೋವು ಅನಿಸುತ್ತದೆ. ಅವರು ಸಚಿವರಾಗಿದ್ದರು, ಸಿಎಂ ಆಗಿದ್ದರು. ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಗಿಲ್ಲ. ಬರುವ 2025ರಲ್ಲಿ ಇಡೀ ಹಾವೇರಿ ಜಿಲ್ಲೆಗೆ ಕುಡಿಯುವ ನೀರು ಕೊಟ್ಟು ತೋರಿಸುತ್ತೇವೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಹಾವೇರಿಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಆನಂದ ಗಡ್ಡದೇವರಮಠ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಿನ ಸಮಸ್ಯೆಯನ್ನ ಸರಕಾರವಿದ್ದಾಗ ಮಾಡದೆ ಈಗ ನಮಗೆ ಮಾಡ್ರಿ ಅಂತೀರೋದು ನೋವಿನ ಸಂಗತಿಯಾಗಿದೆ. ಬೊಮ್ಮಾಯಿಯವರು ಅಭ್ಯರ್ಥಿ ಆಗುತ್ತೇನೆ ಎಂದು ಯಾವಾಗಲೂ ಹೇಳಲಿಲ್ಲ. ರಾತ್ರೋರಾತ್ರಿ ಅಭ್ಯರ್ಥಿ ಆಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ನಮ್ಮದು ಶಿಸ್ತಿನ ಪಕ್ಷ ಅಂತಿದ್ದರು. ಅತ್ಯಂತ ಅಶಿಸ್ತಿನ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಎಂದು ಸಚಿವ ಶಿವಾನಂದ ಪಾಟೀಲ್ ಕಿಡಿಕಾರಿದರು. ಕಾಂತೇಶ ಕ್ಷೇತ್ರದಲ್ಲಿ ಓಡಾಡಿದರೂ, ಈಗ ಅವರು ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ಇದೆ. ಮೈಸೂರಿನಿಂದ ಬೀದರವರೆಗೆ ಬಿಜೆಪಿ ಅಶಿಸ್ತಿನ ಪಕ್ಷ ಎಂಬುದು ಸಾಬೀತಾಗಿದೆ. ಬಿಜೆಪಿಯವರು ಕೆಲಸ ನೋಡಿ ಮತ ಕೊಡ್ರಿ ಎನ್ನುತ್ತಿಲ್ಲ, ಮೋದಿ ನೋಡಿ ವೋಟು ಕೊಡ್ರಿ ಅಂತಾರೆ ಎಂದು ಸಚಿವ ಶಿವಾನಂದ ಪಾಟೀಲ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾವೇರಿ ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದಾರೆ ಎಂಬುದನ್ನು ಮರೆಯಬಾರದು. ಬೊಮ್ಮಾಯಿಯವರು ಹೇಗೆ ಬಂದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಜನರ ಬಲದಿಂದ ಗೆದ್ದಿಲ್ಲ, ದುಡ್ಡಿನ ಬಲದಿಂದ ಬೊಮ್ಮಾಯಿ ಗೆದ್ದಿದ್ದಾರೆ. ಕೇಂದ್ರದ ಅನುದಾನ ಬರದಿದ್ದರೂ ಬಾಯಿ ತೆಗಿಲಿಲ್ಲ. ಬರಗಾಲ ಬಂದರೂ ಪ್ರಧಾನಿ ರಾಜ್ಯಕ್ಕೆ ಬರಲಿಲ್ಲ.
ಈಗ ಚುನಾವಣೆ ಬಂದಿದೆ ಎಂದು ಓಡಾಡುತ್ತಿದ್ದಾರೆ. ಉದಾಸಿಯವರು ಪ್ರಾಮಾಣಿಕತೆಯಿಂದ ಬಿಟ್ಟು ಹೋಗಿದ್ದಾರೆ. ಬೊಮ್ಮಾಯಿಯವರ ಸಿಎಂ ಇದ್ದಾಗ ಏನೂ ಮಾಡದೆ ಈಗ ಅಭ್ಯರ್ಥಿ ಆಗಿ ಬಂದಿದ್ದಾರೆ. ಸಿದ್ದರಾಮಯ್ಯ ಸಿಎಂ ಆದ್ಮೇಲೆ ಸಿಎಂ ಅವರು ನಾಲ್ಕು ಬಾರಿ ಜಿಲ್ಲೆಗೆ ಬಂದಿದ್ದಾರೆ. ಕರ್ನಾಟಕ ಕಾಂಗ್ರೆಸ್ ಗೆ ಆಪತ್ಕಾಲದ ಬಂದು. ಇಂದಿರಾಗಾಂದಿ, ಸೋನಿಯಾ ಗಾಂಧಿ ಅವರಿಗೆ ಗೆಲುವನ್ನು ಕೊಟ್ಟಂತಹದ್ದು ಕರ್ನಾಟಕ. ದೇಶದ ಜನರು ಕರ್ನಾಟಕವನ್ನು ನೋಡುತ್ತಿದ್ದಾರೆ.
ಕರ್ನಾಟಕದ ಐದು ಗ್ಯಾರಂಟಿಗಳು ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಿಸಿವೆ. ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದೆ ನರಳುತ್ತಿದ್ದಾರೆ. ಬ್ಯಾಂಕ್ ಸಾಲ ಕಟ್ಟಲು ಆಗದ ಸ್ಥಿತಿ ಕೇಂದ್ರ ಸರಕಾರ ರೈತರಿಗೆ ತಂದು ಕೊಟ್ಟಿದೆ. ಕನಿಷ್ಠ ಇಪ್ಪತ್ತು ಸ್ಥಾನಗಳನ್ನು ಗೆಲ್ಲಿಸುವ ಶಕ್ತಿ ಕರ್ನಾಟಕ ಕಾಂಗ್ರೆಸ್ ಗೆ ಇದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.












Click it and Unblock the Notifications