Lingayat Leader: ಬಿಜೆಪಿಯಿಂದ ಲಿಂಗಾಯತ ಮುಖ್ಯಮಂತ್ರಿ ಮಾಡುವಂತೆ ಕೇಂದ್ರಕ್ಕೆ ಒತ್ತಡ: ಶಂಕರಪಾಟೀಲ ಮುನೇನಕೊಪ್ಪ
ಹುಬ್ಬಳ್ಳಿ, ಏಪ್ರಿಲ್ 22: ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಮುಖ್ಯಮಂತ್ರಿ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ಬಿಜೆಪಿಯ ಹಲವು ಬಿಜೆಪಿ ನಾಯಕರು ಮುಂದಿನ ಲಿಂಗಾಯತ ಮುಖ್ಯಮಂತ್ರಿ ವಿಚಾರವಾಗಿ ಹೇಳಿಕೆಯನ್ನ ನೀಡುತ್ತಾ ಹೈಕಮಾಂಡ್ ಗೂ ಒತ್ತಡ ಹಾಕುತ್ತೇವೆ ಎಂದು ಹೇಳುತ್ತಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಲಿಂಗಾಯತ ಮುಖ್ಯಮಂತ್ರಿ ಮಾಡುವ ಕುರಿತು ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದು, ಇದೀಗ ಬಿಜೆಪಿಯಲ್ಲಿ ಮುಂದಿನ ಮುಖ್ಯಮಂತ್ರಿ ಲಿಂಗಾಯತ ನಾಯಕರೇ ಆಗ್ಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ಬಿಜೆಪಿಯಿಂದ ಈ ಬಾರಿ ಲಿಂಗಾಯತ ಮುಖ್ಯಮಂತ್ರಿ ಮಾಡುವಂತೆ ಕೇಂದ್ರ ಹಾಗೂ ರಾಜ್ಯದ ವರಿಷ್ಠರ ಮೇಲೆ ಒತ್ತಡ ಹೇರುತ್ತೇವೆ. ಹೀಗಾಗಿ ಮತದಾರರು ಹೆಚ್ಚು ಲಿಂಗಾಯತ ನಾಯಕರನ್ನು ಆಯ್ಕೆ ಮಾಡಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.
ಬಿಜೆಪಿ ಲಿಂಗಾಯತ ನಾಯಕರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ನವರು ಲಿಂಗಾಯತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎನ್ನುವುದು ಅಪ್ರಸ್ತುತ, ಈ ಹಿಂದೆ ಲಿಂಗಾಯತ ನಾಯಕರಾದ ವೀರೇಂದ್ರ ಪಾಟೀಲ್ ಅವರನ್ನು ನಡೆಸಿಕೊಂಡ ರೀತಿ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ನವರು ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂದು ಹೇಳುತ್ತಾ ಅಹಿಂದ ಸಿದ್ದಾಂತವನ್ನು ಕೈಗೊಂಡು, ಅಹಿಂದ ವರ್ಗದವರಿಗೆ ಯಾವುದೇ ಯೋಜನೆ ನೀಡದೇ ಮತಬ್ಯಾಂಕ್ ಗಾಗಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡುತ್ತಾ ಬಂದಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎನ್ನುವ ಕಾಂಗ್ರೆಸ್ ಈ ಹಿಂದೆ ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾಗಿತ್ತು. ಹೀಗಾಗಿ ಹೀನಾಯ ಸೋಲು ಅನುಭವಿಸಿತು. ನಾವು ಕೂಡಾ ಈ ಬಾರಿ ಬಹುತೇಕ ಲಿಂಗಾಯತರಿಗೆ ಟಿಕೆಟ್ ನೀಡಿದ್ದೇವೆ. ಜೊತೆಗೆ ಅಭ್ಯರ್ಥಿ ಪಟ್ಟಿ ಹೊಸಬರಿಂದ ತುಂಬಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದಿರುವುದರಿಂದ ಪಕ್ಷಕ್ಕೆ ಯಾವುದೇ ದಕ್ಕೆ ಉಂಟಾಗುವುದಿಲ್ಲ. ಅವರು ನಮ್ಮ ನಾಯಕರು, ಬಿಜೆಪಿ ಕಟ್ಟಿ ಬೆಳೆಸಿದವರು. ಅವರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಆದರೆ ಏನೇ ಆದರೂ ಪಕ್ಷದಲ್ಲಿದ್ದುಕೊಂಡು ಮುಂದುವರೆಯಬೇಕಿತ್ತು ಎಂದರು.
ಕಾಂಗ್ರೇಸ್ನವರಿಗೆ ಧಮ್ ಇದ್ರೆ ಲಿಂಗಾಯಿತ ಮುಖ್ಯಮಂತ್ರಿ ಘೋಷಣೆ ಮಾಡಲಿ: ಸಿದ್ದೇಶ್ವರ್
ಈ ಹಿಂದಿನ ಚುನಾವಣೆಯಲ್ಲಿ ಬಿ.ಎಸ್ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂತು ಎಂದು ಸಂಸದ ಸಿದ್ದೇಶ್ವರ್ ಹೇಳಿದರು.
ಈ ಚುನಾವಣೆಯಲ್ಲಿಯೂ ಕೂಡ ಲಿಂಗಾಯಿತ ಮುಖ್ಯಮಂತ್ರಿ ಬಗ್ಗೆ ಒಮ್ಮತವಾಗಿ ಹೇಳಲಾಗುತ್ತಿದೆ ಎಂದ ಅವರು ಕಾಂಗ್ರೇಸ್ನವರಿಗೆ ಧಮ್ ಇದ್ದರೆ ಲಿಂಗಾಯಿತ ಮುಖ್ಯಮಂತ್ರಿ ಯಾರು ಎಂದು ಘೋಷಣೆ ಮಾಡಲಿ ಲಿಂಗಾಯಿತ ಸಿ.ಎಂ ಎಂದು ಘೋಷಣೆ ಮಾಡಿ ಚುನಾವಣೆಗೆ ಹೋಗಲಿ ಎಂದು ಹೇಳಿದರು.
ಕಾಂಗ್ರೆಸ್ ನವರು ಬಹಳ ವರ್ಷಗಳಿಂದ ಈ ರಾಜ್ಯದಲ್ಲಿ ಮುಸ್ಲಿಂರನ್ನು ಓಟ್ ಬ್ಯಾಂಕ್ ಮಾಡಿಕೊಡ್ಡಿದ್ದಾರೆ. ಮುಸ್ಲಿಂ ಮುಖ್ಯಮಂತ್ರಿ ಎಂದು ಘೋಷಣೆ ಮಾಡಲಿ ನೋಡೋಣ ಎಂದ ಅವರು 24 ರ ನಂತರ ದಾವಣಗೆರೆಯಲ್ಲಿ ರಾಷ್ಟೀಯ ನಾಯಕರು ಪ್ರವಾಸ ಮಾಡುತ್ತಾರೆ. ಜಿಲ್ಲೆಯಲ್ಲಿ ಹರಪನಹಳ್ಳಿ ಸೇರಿದಂತೆ ಎಲ್ಲಾ ತಾಲೂಕುಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದರು.












Click it and Unblock the Notifications