ಶಂಕರ ಬಿದರಿ ಚಿತ್ತ ಕಮಲ ಪಕ್ಷದತ್ತ!
ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಶಂಕರ ಬಿದರಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕೆಲವು ದಿನಗಳ ನಂತರ ಬೆಂಬಲಿಗರು ಹಾಗೂ ಹಿತೈಷಿಗಳ ಸಭೆ ನಡೆಸಿ ತಮ್ಮ ಮುಂದಿನ ನಿರ್ಧಾರವನ್ನು ಶೀಘ್ರದಲ್ಲೇ ತಿಳಿಸುತ್ತೇನೆ ಎಂದು ಹೇಳಿದ್ದರು. [ಬಿದರಿ ಕೈ ತಪ್ಪಿದ ಎಸ್ ಪಿ ರಾಜ್ಯಾಧ್ಯಕ್ಷ ಸ್ಥಾನ]
ಸದ್ಯ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಅವರು ಬಿಜೆಪಿಸ ಸೇರಲು ಸಿದ್ಧತೆ ನಡೆಸಿದ್ದಾರೆ. ಮಾಜಿ ಸಚಿವ ಗೋವಿಂದ ಕಾರಜೋಳ ಜೊತೆ ಶಂಕರ ಬಿದರಿ ಪಕ್ಷ ಸೇರ್ಪಟೆ ಬಗ್ಗೆ ಚರ್ಚೆ ನಡೆಸಿದ್ದು, ಸದ್ಯದಲ್ಲಿಯೇ ಅವರು ಬಿಜೆಪಿ ಸೇರುವುದು ಖಚಿತವಾಗಿದೆ. [ಬಿಜೆಪಿ ಸೇರುವ ಸಿದ್ಧತೆಯಲ್ಲಿ ಶಂಕರ ಬಿದರಿ]
ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದಿಂದ ಹೊರಬಂದ ಬಳಿಕ ಶಂಕರ ಬಿದರಿ, ಹೊಸ ಪ್ರಾದೇಶಿಕ ಪಕ್ಷ ಕಟ್ಟುವ ಕುರಿತು ಆಲೋಚನೆ ನಡೆಸಿದ್ದರು. ಬಿಎಸ್ಪಿಯಿಂದ ಅವರಿಗೆ ಆಹ್ವಾನ ಬಂದರೂ ಅದನ್ನು ನಿರಾಕರಿಸಿದ್ದರು. ಸದ್ಯ ರಾಷ್ಟ್ರೀಯ ಪಕ್ಷ ಸೇರುವ ಬಗ್ಗೆ ಅವರು ಆಲೋಚನೆ ನಡೆಸಿದ್ದು, ಬಿಜೆಪಿ ಸೇರಲು ತಯಾರಿ ನಡೆಸಿದ್ದಾರೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಗೋವಿಂದ ಕಾರಜೋಳ ಜೊತೆ ಶಂಕರ ಬಿದರಿ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಪಕ್ಷ ಸೇರಲು ಆಸಕ್ತಿ ತೋರಿಸಿದ್ದಾರೆ. ಬಿಜೆಪಿಗೆ ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಮರಳಿದ ನಂತರ ಶಂಕರ ಬಿದರಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ದಿನಗಳಿಂದ ಶಂಕರ ಬಿದರಿ ತಮ್ಮ ಮುಂದಿನ ರಾಜಕೀಯ ನಿರ್ಧಾರಗಳ ಕುರಿತು ಯಾವುದೇ ಮಾತನಾಡಿಲ್ಲ. ಹುಬ್ಬಳ್ಳಿಯಲ್ಲಿ ಕೆಲ ದಿನಗಳ ಹಿಂದೆ "ಭ್ರಷ್ಟ ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಗುಂಡಿಕ್ಕಿ ಕೊಲ್ಲಬೇಕು" ಎಂದು ಹೇಳುವ ಮೂಲಕ ವಿವಾದವೆಬ್ಬಿಸಿದ್ದರು. [ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಗುಂಡಿಕ್ಕಿ]
ಸದ್ಯ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ವಿವಿಧ ಪಕ್ಷಗಳು ಚುನಾವಣೆ ತಯಾರಿ ನಡೆಸುತ್ತಿವೆ. ಆದ್ದರಿಂದ ಶಂಕರ ಬಿದರಿ ಯಾವ ಪಕ್ಷ ಸೇರುವುದು ಎಂದು ಅಂತಿಮ ತೀರ್ಮಾನ ಕೈಗೊಳ್ಳಲು ಮುಂದಾಗಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿಯೂ ಬಿಜೆಪಿ ನಾಯಕರ ಜೊತೆ ಚರ್ಚಿಸಿದ್ದ ಬಿದರಿ ಪಕ್ಷ ಸೇರ್ಪಡೆಗೊಳ್ಳುವ ಕುರಿತು ಸುಳಿವು ನೀಡಿದ್ದರು.