Shakti Scheme: ಕರಾವಳಿಯಲ್ಲಿ ಸರ್ಕಾರಿ ಬಸ್ಗಳನ್ನೇ ಹೆಚ್ಚು ಬಳಸುತ್ತಿರುವ ಮಹಿಳೆಯರು- ಪ್ರಯಾಣಿಕರ ಸಂಖ್ಯೆ ಭಾರೀ ಏರಿಕೆ
ಮಂಗಳೂರು, ಜು.14: ಕಳೆದ ತಿಂಗಳು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಮಹಿಳೆಯರಿಗೆ ಶಕ್ತಿ ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಡಿ ರಾಜ್ಯದಾದ್ಯಂತ ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಶಕ್ತಿ ಯೋಜನೆ ಘೋಷಣೆಯಾದ ನಂತರ ಕರಾವಳಿ ಭಾಗದಲ್ಲಿ ಕೆಎಸ್ಆರ್ಟಿಸಿ ಬಸ್ಗಳನ್ನು ಬಳಸುವ ಪ್ರಯಾಣಿಕರ ಸಂಖ್ಯೆ ಪ್ರತಿದಿನ 55,000ಕ್ಕೆ ಏರಿಕೆಯಾಗಿದೆ. 'ಡೈಜಿ ವರ್ಡ್' ವೆಬ್ಸೈಟ್ ಈ ಕುರಿತು ವರದಿ ಮಾಡಿದೆ.
ಮಂಗಳೂರು ಡಿಪೋದಲ್ಲಿ ದಿನನಿತ್ಯದ ಪ್ರಯಾಣಿಕರ ಸಂಖ್ಯೆ 25000 ಕ್ಕೆ ಏರಿದರೆ, ಪುತ್ತೂರು ಡಿಪೋದಲ್ಲಿ 30,000 ಕ್ಕೆ ಏರಿಕೆ ಕಂಡಿದೆ. ಜುಲೈ 11ಕ್ಕೆ ಈ ಯೋಜನೆ ಘೋಷಣೆಯಾಗಿ ಒಂದು ತಿಂಗಳು ಪೂರೈಸಿದೆ.

ಕೆಎಸ್ಆರ್ಟಿಸಿ ಬಸ್ನ ಕಂಡಕ್ಟರ್ ಪ್ರಕಾರ, ಕರಾವಳಿ ಪ್ರದೇಶದ ಕೆಲವೇ ಜನರು ಕೆಎಸ್ಆರ್ಟಿಸಿ ಬಸ್ಗಳನ್ನು ಹತ್ತುತ್ತಿದ್ದರು. ಏಕೆಂದರೆ ಅವರಲ್ಲಿ ಹೆಚ್ಚಿನವರು ಖಾಸಗಿ ಸೇವೆಯನ್ನು ಬಳಸುತ್ತಿದ್ದರು. ಉಡುಪಿ ಮತ್ತು ಮಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ತೆರಳುವ ಬಸ್ಗಳು ಅರ್ಧದಷ್ಟು ಖಾಲಿಯಾಗಿ ಇರುತ್ತಿದ್ದವು. ಆದರೆ, ಶಕ್ತಿ ಯೋಜನೆ ಘೋಷಣೆಯಾದ ನಂತರ ಬಸ್ಗಳು ತುಂಬಿ ತುಳುಕುತ್ತಿವೆ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಪುತ್ತೂರು ಡಿಪೋದ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, 'ನಮ್ಮ ಡಿಪೋಗೆ ಸೇರಿದ ಬಸ್ಗಳಲ್ಲಿ ಸುಮಾರು 90,000 ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಈ ಹಿಂದೆ ನಾವು ಮಹಿಳಾ ಪ್ರಯಾಣಿಕರ ದಾಖಲೆಯನ್ನು ಇಡುತ್ತಿರಲಿಲ್ಲ. ಆದರೆ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ನಿಜ' ಎಂದು ತಿಳಿಸಿದ್ದಾರೆ.

ಕೆಎಸ್ಆರ್ಟಿಸಿಯ ಮಂಗಳೂರು ಡಿಪೋದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮಾತನಾಡಿ, 'ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಸುಮಾರು 68000 ಮಹಿಳೆಯರು ನಮ್ಮ ಡಿಪೋದ ಬಸ್ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಮೊದಲು 1.20 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಶಕ್ತಿ ಯೋಜನೆಯನ್ನು ಪರಿಚಯಿಸಿದ ನಂತರ, ಸಂಖ್ಯೆ 25000 ರಷ್ಟು ಹೆಚ್ಚಾಗಿದೆ' ಎಂದು ಹೇಳಿದ್ದಾರೆ.
ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯದಂತಹ ಪ್ರಮುಖ ಯಾತ್ರಾ ಕೇಂದ್ರಗಳಿಗೆ ಆಗಮಿಸುವ ಮಹಿಳಾ ಭಕ್ತರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ.
ಈ ಕುರಿತು ಮಾತನಾಡಿರುವ ಜಯಕರ ಶೆಟ್ಟಿ, 'ವಾರಾಂತ್ಯದಲ್ಲಿ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಸಾಕಷ್ಟು ಹೆಚ್ಚಿರುತ್ತದೆ. ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿರುವುದರಿಂದ, ನಾವು ವಾರಾಂತ್ಯದಲ್ಲಿ ಹೆಚ್ಚುವರಿ ಸೇವೆಗಳನ್ನು ನಿಗದಿಪಡಿಸಬೇಕಾಗಿತ್ತು' ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಸರ್ಕಾರವು ಐದು ಚುನಾವಣಾ ಖಾತರಿಗಳಲ್ಲಿ ಮೊದಲನೆಯದನ್ನು ಜೂನ್ 11ರಂದು ಪ್ರಾರಂಭಿಸಿದೆ. ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಮಹಿಳೆಯರು ರಾಜ್ಯದಾದ್ಯಂತ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಎಸಿ ಬಸ್ಗಳನ್ನು ಬಟ್ಟು ಎಲ್ಲ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಪ್ರಯಾಣ ಮಾಡಬಹುದು. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೂ ಈ ಬಸ್ಗಳು ಉಚಿತ ಪ್ರಯಾಣವನ್ನು ಒದಗಿಸುತ್ತವೆ.
ಈ ಯೋಜನೆಗೆ ಜುಲೈ 11 ರಂದು ಅಂದರೆ ಮಂಗಳವಾರ ಒಂದು ತಿಂಗಳಾಗಿದೆ. ಈ ಸಮಯದಲ್ಲಿ 16.73 ಕೋಟಿ ಮಹಿಳೆಯರು ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ತಿಳಿದುಬಂದಿದೆ. ಇದು ಒಟ್ಟು ಪ್ರಯಾಣಿಕರ ಪೈಕಿ ಶೇ 50.86 ಆಗಿದೆ. ಅಂದರೆ, ಪುರುಷರಿಗಿಂತ ಮಹಿಳೆಯರೇ ಬಸ್ಗಳಲ್ಲಿ ಹೆಚ್ಚು ಪ್ರಯಾಣ ಮಾಡಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಘೋಷಿಸಿದ ಐದು ಉಚಿತ ಗ್ಯಾರಂಟಿ ಯೋಜನೆಗಳಲ್ಲಿ 'ಶಕ್ತಿ' ಯೋಜನೆ ಮೊದಲನೆಯದು.












Click it and Unblock the Notifications