ಉತ್ತರ ಕರ್ನಾಟಕ ಬಂದ್ ವಾಪಸ್, ಇಂದು ಘೋಷಣೆ
Recommended Video

ಬೆಂಗಳೂರು, ಆಗಸ್ಟ್ 01: ಹಲವು ಸರ್ಕಾರಿ ಕಚೇರಿಗಳನ್ನು ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡುವುದು ಸೇರಿದಂತೆ ಹಲವು ಭರವಸೆಗಳನ್ನು ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ. ಉತ್ತರ ಕರ್ನಾಟಕ ಬಂದ್ ಹಿಂಪಡೆಯುವ ಬಗ್ಗೆ ಇಂದು ಅಂತಿಮ ಘೋಷಣೆ ಆಗಲಿದೆ.
ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸದಸ್ಯರ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಹಲವಾರು ಭರವಸೆಗಳನ್ನು ಕುಮಾರಸ್ವಾಮಿ ನೀಡಿದರು.
'ರಾಜ್ಯವನ್ನು ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕ ಎಂದು ಪ್ರತ್ಯೇಕಿಸಲು ಸಾಧ್ಯವಿಲ್ಲ. ಇದನ್ನು ಕನಸು ಮನಸ್ಸಿನಲ್ಲಿಯೂ ಎಣಿಸಲಾರೆ. ಇದಕ್ಕೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡುವುದಿಲ್ಲ' ಎಂದು ಸ್ಪಷ್ಟಪಡಿಸಿದರು.

'ಉತ್ತರ ಕರ್ನಾಟಕ ಭಾಗದ ಜನರ ಅಲೆದಾಟ ತಪ್ಪಿಸಲು ಹಲವು ಸರ್ಕಾರಿ ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಲಾಗುತ್ತದೆ' ಎಂದು ಕುಮಾರಸ್ವಾಮಿ ಸಮಿತಿಯ ಸದಸ್ಯರಿಗೆ ಆಶ್ವಾಸ್ವನೆ ನೀಡಿದ್ದಾರೆ.
ಸ್ಥಳಾಂತರವಾಗುವ ಕಚೇರಿಗಳು : ಒಬ್ಬರು ಉಪ ಲೋಕಾಯುಕ್ತರು, ಇಬ್ಬರು ಮಾಹಿತಿ ಆಯುಕ್ತರು, ಕೃಷ್ಣ ಜಲಭಾಗ್ಯ ನಿಗಮ, ಕರ್ನಾಟಕ ನೀರಾವರಿ ನಿಗಮ. ಕಲಬುರಗಿಗೆ ಒಬ್ಬರು ಮಾಹಿತಿ ಆಯುಕ್ತರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ.
ಕುಮಾರಸ್ವಾಮಿ ಅವರ ಜೊತೆಗಿನ ಸಭೆ ಬಳಿಕ ಮಾತನಾಡಿದ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಅವರು, 'ಆಗಸ್ಟ್ 2ರಂದು ಕರೆ ನೀಡಿರುವ ಉತ್ತರ ಕರ್ನಾಟಕ ಬಂದ್ ಕೈ ಬಿಡುವ ಬಗ್ಗೆ ಬುಧವಾರ ಘೋಷಣೆ ಮಾಡಲಾಗುತ್ತದೆ' ಎಂದು ಹೇಳಿದರು.












Click it and Unblock the Notifications