ರಾಜ್ಯದ 60% ಜನರು ಕೊರೊನಾ ವಿರುದ್ಧ ಪ್ರತಿಕಾಯ ಹೊಂದಿದ್ದಾರೆ ಎಂದ ಸೆರೊ ಸರ್ವೇ
ಬೆಂಗಳೂರು, ಜುಲೈ 24: ಕೊರೊನಾ ಸೋಂಕಿನ ವಿರುದ್ಧ ಜನರಲ್ಲಿನ ಪ್ರತಿಕಾಯ ಶಕ್ತಿ ಕುರಿತು ಈಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ರಾಷ್ಟ್ರೀಯ ಮಟ್ಟದ ನಾಲ್ಕನೇ ಸೆರೋ ಸಮೀಕ್ಷೆ ನಡೆಸಿದ್ದು, ಕರ್ನಾಟಕದ ಕೆಲವು ನಗರಗಳಲ್ಲಿ ಶೇ 80ರಷ್ಟು ಆರೋಗ್ಯ ಕಾರ್ಯಕರ್ತರಲ್ಲಿ ಕೊರೊನಾ ವಿರುದ್ಧ ಹೋರಾಡಬಲ್ಲ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಸೆರೋಪ್ರಿವಲೆನ್ಸ್ (ಸೋಂಕಿಗೆ ವಿರುದ್ಧವಾಗಿ ಪ್ರತಿಕಾಯಗಳನ್ನು ಹೊಂದಿರುವ ಪ್ರಮಾಣ) ಪ್ರಮಾಣ ಶೇ 70ರಷ್ಟಿದ್ದರೆ, ಕಲಬುರಗಿಯಲ್ಲಿ ಶೇ 67.3%, ಚಿತ್ರದುರ್ಗದಲ್ಲಿ ಶೇ 64.8 ಇದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಆರೋಗ್ಯ ಕಾರ್ಯಕರ್ತರಲ್ಲಿ ಈ ಪ್ರಮಾಣವು ಬೆಂಗಳೂರಿನಲ್ಲಿ ಶೇ 86.1, ಕಲಬುರಗಿಯಲ್ಲಿ ಶೇ 89.5 ಚಿತ್ರದುರ್ಗದಲ್ಲಿ ಶೇ 82.8 ಇದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಸೆರೊ ಪ್ರಿವಲೆನ್ಸ್ ಅಂಕಿ ಅಂಶಗಳನ್ನು ಐಸಿಎಂಆರ್ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ ಅವರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತಾರ್ ಅವರಿಗೆ ಸಲ್ಲಿಸಿದ್ದಾರೆ.
ಜಿಲ್ಲಾವಾರು ಮಟ್ಟದಲ್ಲಿ ಈ ಪ್ರಮಾಣವನ್ನು ನಿರ್ಧರಿಸಲು ಪ್ರತಿಕಾಯ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರ ಪ್ರಕಾರ ಶೇ 60ರಷ್ಟು ಜನರಲ್ಲಿ ಕೊರೊನಾ ವಿರುದ್ಧ ನೈಸರ್ಗಿಕ ಪ್ರತಿಕಾಯಗಳ ಸೃಷ್ಟಿಯಾಗಿದೆ. "ಇದು ನೈಸರ್ಗಿಕವಾಗಿ ಬಂದ ರೋಗನಿರೋಧಕ ಶಕ್ತಿಯೇ, ಸೋಂಕಿನಿಂದ ಸೃಷ್ಟಿಯಾದುದೇ ಅಥವಾ ಲಸಿಕೆಗಳಿಂದ ಉತ್ಪತ್ತಿಯಾದ ಪ್ರತಿಕಾಯವೇ ಎಂಬುದನ್ನು ಪ್ರತ್ಯೇಕವಾಗಿ ಹೇಳಲು ಸಾಧ್ಯವಿಲ್ಲ" ಎಂದು ಕೊರೊನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಪ್ರದೀಪ್ ಬಾಣಂದೂರು ತಿಳಿಸಿದ್ದಾರೆ.
ಸೋಂಕು ಹಾಗೂ ಲಸಿಕೆ ಎರಡೂ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕೆಲಸ ಮಾಡಿವೆ. ಇಷ್ಟು ಪ್ರಮಾಣದಲ್ಲಿ ಜನರಲ್ಲಿ ಪ್ರತಿಕಾಯ ಸೃಷ್ಟಿಯಾಗಿರುವುದರಿಂದ ಶಾಲಾ ಕಾಲೇಜುಗಳನ್ನು ತೆರೆಯಬಹುದು "ಎಂದು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಆರು ವರ್ಷಕ್ಕೂ ಮೇಲ್ಪಟ್ಟ 447 ಮಂದಿಯನ್ನು ಸೆರೊ ಸಮೀಕ್ಷೆ ಭಾಗವಾಗಿ ಪರೀಕ್ಷೆ ನಡೆಸಲಾಗಿತ್ತು.












Click it and Unblock the Notifications