ನಾನು RSS ವ್ಯಕ್ತಿ: ಹಾಗಂತಾ ಗೌರಿ ಲಂಕೇಶ್ ರನ್ನು ನಾನು ಕೊಲೆ ಮಾಡಿದ್ನಾ?
ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವ್ಯಕ್ತಿ, ಹಾಗಂತ, ನಾನು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಂದಿದ್ದೇನೆಂದು ಅರ್ಥನಾ ಎಂದು ಹಿರಿಯ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ ಪ್ರಶ್ನೆ.
ಬೆಂಗಳೂರು, ಸೆ 9: ನಾನು ಹೆಮ್ಮೆಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವ್ಯಕ್ತಿ ಎಂದು ಹೇಳಿಕೊಳ್ಳುವೆ. ಹಾಗಂತ, ನಾನು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಂದಿದ್ದೇನೆಂದು ಅರ್ಥನಾ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಬಿಜೆಪಿ ಹಿರಿಯ ಮುಖಂಡ ಕೆ ಎಸ್ ಈಶ್ವರಪ್ಪ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಾಯಿಗೆ ಬೆಲೆ ಎನ್ನುವುದೇ ಇಲ್ಲ. ಮನಸ್ಸಿಗೆ ತೋಚಿದಂತೇ ಮಾತನಾಡುವ ರಾಹುಲ್, ಮೊದಲು ಅರೆಪ್ರಜ್ಞೆಯಿಂದ ಮಾತನಾಡುವುದನ್ನು ನಿಲ್ಲಿಸಲಿ ಎಂದು ಈಶ್ವರಪ್ಪ, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. (ಗೌರಿ ಹತ್ಯೆಯಲ್ಲಿ ಮೋದಿಯನ್ನು ಎಳೆತಂದ ರಾಹುಲ್)
ನಮ್ಮ ಮಾತೃ ಸಂಘಟನೆ RSS ವಿಚಾರಧಾರೆಯನ್ನು ನಾನು ನಂಬುವವನು, ಅದಕ್ಕಾಗಿ ಹೆಮ್ಮೆಯಿದೆ. ನಮ್ಮದು ದೇಶಭಕ್ತ ಸಂಘಟನೆ, ಕಾಂಗ್ರೆಸ್ಸಿಗರಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.
ಗೌರಿ ಹತ್ಯೆ ನಮಗೂ ನೋವು ತಂದಿದೆ, ಮುಖ್ಯಮಂತ್ರಿಗಳಿಗೆ ನಿಜವಾಗಲೂ ಗೌರಿ ಹಂತಕರನ್ನು ಬಂಧಿಸಬೇಕು ಎನ್ನುವ ಮನಸ್ಸಿದ್ದರೆ ತನಿಖೆಯನ್ನು ಸಿಬಿಐಗೆ ವಹಿಸಲಿ ಎಂದು ಈಶ್ವರಪ್ಪ, ಸಿದ್ದರಾಮಯ್ಯನವರಿಗೆ ಸವಾಲೆಸೆದಿದ್ದಾರೆ.
ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS ) ಸಿದ್ದಾಂತವನ್ನು ವಿರೋಧಿಸುವವರನ್ನು ಕೊಲ್ಲಲಾಗುತ್ತಿದೆ. ಮೋದಿಯವರ ಒಟ್ಟಾರೆ ಚಿಂತನೆ ಸಾರ್ವಜನಿಕರ ಧ್ವನಿಯನ್ನು ಅಡಗಿಸುವುದು, ಹಾಗಾಗಿಯೇ ಈ ರೀತಿಯ ಹತ್ಯೆಗಳು ನಡೆಯುತ್ತಿರುವುದು ಎಂದು ರಾಹುಲ್, ಗೌರಿ ಹತ್ಯೆಗೆ ನೇರವಾಗಿ ಸಂಘಪರಿವಾರದ ಮೇಲೆ ಗೂಬೆ ಕೂರಿಸಿದ್ದರು.
ರಾಹುಲ್ ಗಾಂಧಿ ನೀಡಿದ ಹೇಳಿಕೆ ವ್ಯಾಪಕ ಟೀಕೆಗೊಳಗಾದ ನಂತರ ಉಲ್ಟಾ ಹೊಡೆದ ಕಾಂಗ್ರೆಸ್, ಪತ್ರಕರ್ತೆ ಗೌರಿ ಲಂಕೇಶ್ ಅಂಥವರ ಹತ್ಯೆಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯವೇ ಕಾರಣವಿದ್ದಿರಬಹುದು.
ಆದರೆ ಅವರ ಕೊಲೆಗೆ ಆರ್ ಎಸ್ ಎಸ್ ಅಥವಾ ಬಿಜೆಪಿ ಹೊಣೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಲೋಕಸಭೆಯಲ್ಲಿ ವಿಪಕ್ಷದ ನಾಯಕ, ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.