ಸೀಟು ಹಂಚಿಕೆ: ಒಮ್ಮತಕ್ಕೆ ಬರಲು ಜೆಡಿಎಸ್-ಕಾಂಗ್ರೆಸ್ ವಿಫಲ? ಮುಂದೇನು?
Recommended Video

ಬೆಂಗಳೂರು, ಮಾರ್ಚ್ 04: ಲೋಕಸಭೆ ಚುನಾವಣೆ ಸೀಟು ಹಂಚಿಕೆ ವಿಚಾರವಾಗಿ ಚರ್ಚೆ ನಡೆಸಲು ಜೆಡಿಎಸ್-ಕಾಂಗ್ರೆಸ್ ಮುಖಂಡರು ಸೇರಿ ನಡೆಸಿದ ಸಮನ್ವಯ ಸಭೆಯು ಸ್ಪಷ್ಟ ತೀರ್ಮಾನಕ್ಕೆ ಬರಲು ವಿಫಲವಾಗಿದೆ.
ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಪರಮೇಶ್ವರ್, ಕುಮಾರಸ್ವಾಮಿ, ಡ್ಯಾನಿಷ್ ಅಲಿ ಅವರು ಸಮನ್ವಯ ಸಮಿತಿ ಸಭೆ ಸೇರಿ ಸೀಟು ಹಂಚಿಕೆ ಕುರಿತು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಆದರೆ ಸಭೆಯಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರಲು ಅವರು ವಿಫಲರಾಗಿದ್ದಾರೆ.
ಜೆಡಿಎಸ್ ಪಕ್ಷವು 12 ಕ್ಷೇತ್ರಗಳು ಬೇಕು ಎಂದು ಪಟ್ಟಿ ನೀಡಿದ್ದು, ಕಾಂಗ್ರೆಸ್ ನಾಯಕರು ಆರು ಕ್ಷೇತ್ರಗಳನ್ನಷ್ಟೆ ಜೆಡಿಎಸ್ಗೆ ನೀಡಲು ಸಿದ್ಧರಿರುವುದಾಗಿ ಹೇಳುತ್ತಿದ್ದಾರೆ. ಈ ಹಗ್ಗ-ಜಗ್ಗಾಟದಿಂದಾಗಿ ಇಂದಿನ ಸಭೆಯಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

ಸೀಟು ಹಂಚಿಕೆ ಮೊದಲ ಸಭೆ ವಿಫಲ: ಮುಂದೇನು?
ಇಂದಿನ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಸೀಟು ಹಂಚಿಕೆ ಚರ್ಚೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿದ್ದು, ಸೀಟು ಹಂಚಿಕೆ ಬಗ್ಗೆ ದೇವೇಗೌಡ ಹಾಗೂ ರಾಹುಲ್ ಗಾಂಧಿ ಅವರು ಚರ್ಚೆ ನಡೆಸಿ ನಿರ್ಣಯ ಮಾಡಲಿದ್ದಾರೆ.

ಜೆಡಿಎಸ್ ಪಟ್ಟಿಗೆ ಸಿದ್ದರಾಮಯ್ಯ ತೀವ್ರ ತಕರಾರು
ಜೆಡಿಎಸ್ ಪಕ್ಷವು 12 ಕ್ಷೇತ್ರಗಳನ್ನು ಕೇಳಿದ್ದು, ಅದರಲ್ಲಿ ಬಹುತೇಕ ಹಳೆ ಮೈಸೂರು ಭಾಗದ್ದೇ ಆಗಿದೆ ಎನ್ನಲಾಗಿದೆ. ಹಾಗಾಗಿ, ಇದು ಕಾಂಗ್ರೆಸ್ ಪ್ರಬಲವಾಗಿರುವ ಜಾಗ ಹಾಗಾಗಿ ಇದು ಸಿದ್ದರಾಮಯ್ಯ ಅವರನ್ನು ಕೆರಳಿಸಿದ್ದು, ಜೆಡಿಎಸ್ ಪಟ್ಟಿಗೆ ಸಿದ್ದರಾಮಯ್ಯ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ದೇವೇಗೌಡ-ರಾಹುಲ್ ಗಾಂಧಿ ಚರ್ಚೆ
ರಾಹುಲ್ ಗಾಂಧಿ ಹಾಗೂ ದೇವೇಗೌಡ ಅವರು ಚರ್ಚೆ ಮಾಡಿದ ಬಳಿಕ ಮತ್ತೆ ಇಂದು ಸಭೆ ಸೇರಿದ್ದವರೇ ಮತ್ತೊಂದು ಹಂತದ ಚರ್ಚೆ ನಡೆಸಲಿದ್ದಾರೆ. ಆ ನಂತರ ಸೀಟು ಹಂಚಿಕೆ ಅಂತಿಮವಾಗಲಿದೆ. ಅದೆಲ್ಲವೂ ಇನ್ನೂ ವಾರ ಅಥವಾ ಹತ್ತು ದಿನದ ಸಮಯ ಹಿಡಿಯುವ ಸಾಧ್ಯತೆ ಇದೆ.

ಕನಿಷ್ಟ 20 ಸೀಟು ಗೆಲ್ಲುವ ನಿರೀಕ್ಷೆ: ಸಿದ್ದರಾಮಯ್ಯ
ಎರಡೂ ಪಕ್ಷಗಳು ಮೈತ್ರಿ ಆಗಿ ಕನಿಷ್ಟ 20 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ ಎಂದು ಸಭೆ ಬಳಿಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಚರ್ಚೆಯು ಸರಿಯಾದ ದಿಕ್ಕಿನಲ್ಲಿಯೇ ಸಾಗುತ್ತಿದೆ. ಆದಷ್ಟು ಶೀಘ್ರವಾಗಿ ಸೀಟು ಹಂಚಿಕೆ ಪೂರ್ಣವಾಗಲಿದೆ ಎಂದು ಅವರು ಹೇಳಿದರು.

ಸೂತ್ರಗಳ ಮೂಲಕ ಕಾರ್ಯ
ಜೆಡಿಎಸ್ ಕಾರ್ಯದರ್ಶಿ ಡಾನಿಶ್ ಅಲಿ ಮಾತನಾಡಿ, ಈ ಚುನಾವಣೆಯಲ್ಲಿ ನಾವು ಸೂತ್ರಗಳ ಮೂಲಕ ಕಾರ್ಯನಿರ್ವಹಿಸಲಿದ್ದೇವೆ. ಬಿಜೆಪಿಯನ್ನು ಬಗ್ಗುಬಡಿಯಲು ಹಲವು ಸೂತ್ರಗಳು ನಮ್ಮ ಬಳಿ ಇವೆ. ಸೀಟು ಹಂಚಿಕೆ ಕುರಿತು ಮುಂದಿನ ಸಭೆಯಲ್ಲಿ ಅಂತಿಮವಾಗುತ್ತದೆ ಎಂದು ಆಶಾಭಾವ ವ್ಯಕ್ತಪಡಿಸಿದರು.












Click it and Unblock the Notifications