Belagavi Assembly Session: ಎಸ್ಸಿ,ಎಸ್ಟಿ ಸೇರಿ ಹಲವು ಮಸೂದೆ ಮಂಡನೆ: ಬೊಮ್ಮಾಯಿ
ಹುಬ್ಬಳ್ಳಿ, ಡಿಸೆಂಬರ್ 18: ಬೆಳಗಾವಿಯ ಸುವರ್ಣಸೌಧದಲ್ಲಿ ನಾಳೆ ಸೋಮವಾರ ಡಿಸೆಂಬರ್ 19ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದೆ. ಎಸ್ಸಿ, ಎಸ್ಟಿ ಮೀಸಲಾತಿ ಮಸೂದೆ ಸೇರಿದಂತೆ ಹಲವು ಮಸೂದೆಗಳನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ಹುಬ್ಬಳ್ಳಿಯ ತಮ್ಮ ನಿವಾಸದೆದುರು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಳಿಗಾಲದ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಸೂದೆ ಹಾಗೂ ಇತರ ಮಸೂದೆಗಳು ಮಂಡನೆ ಆಗಲಿದೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಲಿವೆ ಎಂದರು.
ಕರ್ನಾಟಕ- ಮಹಾರಾಷ್ಟ್ರ ಗಡಿ ವಿಚಾರದ ಬಗ್ಗೆ ಬೆಳಗಾವಿಯಲ್ಲಿ ಎಂಇಎಸ್ ಹೋರಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಎಂಇಎಸ್ ಕಳೆದ 50 ವರ್ಷಗಳಿಂದ ಪುಂಡಾಟಿಕೆಯಲ್ಲಿ ತೊಡಗಿದೆ. ಅವರನ್ನು ನಿಯಂತ್ರಿಸುವುದು ಹೇಗೆ ಎಂದು ಸರ್ಕಾರಕ್ಕೆ ತಿಳಿದಿದೆ. ಪದೇ ಪದೆ ಖ್ಯಾತೆ ತೆಗೆದು ವಿವಾದ ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪುಂಡಾಟಿಕೆಯನ್ನು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಉತ್ತರಿಸಿದರು.

ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ಡಿಕೆ ಶಿವಕುಮಾರ್ ಪರವಾಗಿ ಮಾತನಾಡಿದ್ದಾರೆ. ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಮರೆಮಾಚಲು ಬಿಜೆಪಿ ಕುಕ್ಕರ್ ಬಾಂಬ್ ಸ್ಪೋಟ ಮಾಡಿಸಿದೆ ಎಂದಿದ್ದಾರೆ ಹೊರತು ಭಯೋತ್ಪಾದನೆಗೆ ಸಹಕಾರ ನೀಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿಲ್ಲ. ಈ ಹೇಳಿಕೆ ಬಿಜೆಪಿಯವರನ್ನು ಕೆರಳಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಪೂರ್ಣವಾಗಿ ಅರ್ಥೈಸಿಕೊಂಡು ನಂತರ ಸ್ಪಷ್ಟವಾಗಿ ಪ್ರತಿಕ್ರಿಯೆ ನೀಡಬೇಕು. ಅಂದಾಗ ಮಾತ್ರವೇ ಸಿದ್ದರಾಮಯ್ಯನವರ ಘನತೆ ಹೆಚ್ಚುತ್ತದೆ ಎಂದು ಟಾಂಗ್ ನೀಡಿದರು.
ಚಳಿಗಾಲದ ಅಧಿವೇಶನಕ್ಕೆ ಒಂದು ದಿನ ಮಾತ್ರವೇ ಬಾಕಿ ಇದೆ. ವಿವಿಧ ಮಸೂದೆ ಮಂಡಿಸಲು ಹಾಗೂ ವಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಆಡಳಿತ ಪಕ್ಷ ಬಿಜೆಪಿ ಸಜ್ಜಾಗಿದೆ. ಇತ್ತ ವಿರೋಧ ಪಕ್ಷವು ಬೆಳೆಹಾನಿ ಪರಿಹಾರ, ಸರ್ಕಾರ ಅಭಿವೃದ್ಧಿ ಯೋಜನೆಗಳಿಂದ ಹಿಡಿದು ಮತದಾರರ ಪಟ್ಟಿ ಅಕ್ರಮ, ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣ ಮೊದಲಾದ ಪ್ರಮುಖ ವಿಚಾರಗಳ ಕುರಿತು ಮುಗಿಬೀಳಲು ಸಜ್ಜಾಗಿದೆ.












Click it and Unblock the Notifications