ಕಚೇರಿ ಫೈಟ್ : ಜೆಡಿಎಸ್ ಕಾನೂನು ಹೋರಾಟ ಅಂತ್ಯ
ಬೆಂಗಳೂರು, ಜ. 16 : ಬೆಂಗಳೂರಿನ ಜೆಡಿಎಸ್ ಕೇಂದ್ರ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಜೆಡಿಎಸ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದ ಕಚೇರಿ ಉಳಿಸಿಕೊಳ್ಳಲು ಪಕ್ಷ ನಡೆಸಿದ ಎಲ್ಲಾ ಹೋರಾಟಗಳು ಅಂತ್ಯಗೊಂಡಿವೆ.
ಜೆಡಿಎಸ್ ಕಚೇರಿಯನ್ನು ಕಾಂಗ್ರೆಸ್ಗೆ ಬಿಟ್ಟುಕೊಡಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ, ಜಾತ್ಯತೀತ ಜನತಾದಳ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಆದ್ದರಿಂದ ಕಚೇರಿಯನ್ನು ಕಾಂಗ್ರೆಸ್ಗೆ ಬಿಟ್ಟುಕೊಡಬೇಕೆಂಬ ತೀರ್ಪನ್ನು ಪಾಲಿಸಲೇ ಬೇಕಾಗಿದೆ. [ಜೆಡಿಎಸ್ ಗೆ ಕಚೇರಿ ಖಾಲಿ ಮಾಡಲು ಸುಪ್ರೀಂ ಆದೇಶ]

2014ರ ಜನವರಿ 21ರಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿ ಕಾಂಗ್ರೆಸ್ಗೆ ಸೇರಿದ್ದಾಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. 2014ರ ಡಿ.31ರೊಳಗೆ ಕಚೇರಿಯನ್ನು ಬಿಟ್ಟುಕೊಡುವಂತೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಜೆಡಿಎಸ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿತ್ತು. [ಬೆಂಗಳೂರಿನ ಜೆಡಿಎಸ್ ಕಚೇರಿ ವಿವಾದವೇನು?]
ಕಾನೂನು ಹೋರಾಟ ಅಂತ್ಯ : ರೇಸ್ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿ ಕಾಂಗ್ರೆಸ್ ಭವನವಾಗಿತ್ತು. ಈ ಕಟ್ಟಡದ ನಿಜವಾದ ಒಡೆತನ ಕೆಪಿಸಿಸಿಯದ್ದು ಎಂದು ಸಿಟಿ ಸಿವಿಲ್ ಕೋರ್ಟ್ 2005ರಲ್ಲಿ ತೀರ್ಪು ನೀಡಿತ್ತು. ಕರ್ನಾಟಕ ಹೈಕೋರ್ಟ್ ಸಹ 2013ರ ಅಕ್ಟೋಬರ್ಲ್ಲಿ ಈ ತೀರ್ಪನ್ನು ಎತ್ತಿ ಹಿಡಿದಿತ್ತು. ಸದ್ಯ, ಸುಪ್ರೀಂಕೋರ್ಟ್ ಸಹ ಎರಡೂ ಕೋರ್ಟ್ಗಳ ಆದೇಶವನ್ನು ಎತ್ತಿಹಿಡಿದು ಕಚೇರಿ ಖಾಲಿ ಮಾಡುವಂತೆ ಆದೇಶ ನೀಡಿದೆ. [ಜೆಡಿಎಸ್ ವಿರುದ್ಧ ನ್ಯಾಯಾಂಗ ನಿಂದನೆ ದೂರು]
ಕಟ್ಟಡದ ವಿವಾದವೇನು : ರೇಸ್ಕೋರ್ಟ್ ರಸ್ತೆಯ ಕಚೇರಿ ಇರುವ ನಿವೇಶನವನ್ನು ರಂಗಸ್ವಾಮಿ ಎಂಬುವರು 1949ರಲ್ಲಿ ಬೆಂಗಳೂರು ಸಿಟಿ ಕಾಂಗ್ರೆಸ್ ಸಮಿತಿಗೆ ದಾನ ಮಾಡಿದ್ದರು. ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯು ಐವತ್ತರ ದಶಕದಲ್ಲಿ ಈಗಿನ ಕಲ್ಲು ಕಟ್ಟಡವನ್ನು ನಿರ್ಮಿಸಿ ಕಾಂಗ್ರೆಸ್ ಭವನ ಎಂದು ನಾಮಕರಣ ಮಾಡಿತ್ತು.
ಕಾಂಗ್ರೆಸ್ ಪಕ್ಷ ವಿಭಜನೆಯಾದ ನಂತರ ಈ ಕಟ್ಟಡವು ಸಂಸ್ಥಾ ಕಾಂಗ್ರೆಸ್, ಜನತಾ ಪಾರ್ಟಿ ಮುಂತಾಗಿ ಕೈ ಬದಲಾವಣೆಯಾಗಿ ಜೆಡಿಎಸ್ ಕೈ ಸೇರಿತು. ಜನತಾ ಪಕ್ಷವು ಈ ಕಟ್ಟಡದ ಖಾತೆಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಳ್ಳುವ ಪ್ರಯತ್ನ ನಡೆಸಿದಾಗ ಕಾಂಗ್ರೆಸ್ 1982ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು.












Click it and Unblock the Notifications