'ಅಶಾಶ್ವತವಾದ ಈ ಶರೀರದ ಮೇಲಿನ ವ್ಯಾಮೋಹ ತೊರೆಯಬೇಕು'
ಹಾವೇರಿ, ಮಾರ್ಚ್. 09 : ಕೇವಲ ಶರೀರದ ಸೌಖ್ಯಕ್ಕಾಗಿ, ಸಂಪತ್ತಿನ ಗಳಿಕೆಗಾಗಿ ಜನರು ಮಾಡುವ ಪ್ರಯತ್ನ ಹಾಸ್ಯಾಸ್ಪದ. ಅಶಾಶ್ವತವಾದ ಈ ಶರೀರದ ಮೇಲಿನ ವ್ಯಾಮೋಹ ತೊರೆಯಬೇಕು ಎಂದು ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.
ಸವಣೂರಿನ ವಿಷ್ಣುತೀರ್ಥದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಉತ್ತರಾಧಿಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿದ ಅವರು, ಧರ್ಮಾಚರಣೆಯಲ್ಲಿನ ಕ್ಷೀಣತೆ, ದುರಾಚಾರ, ದೇವರ ಆಜ್ಞೆಗಳ ಉಲ್ಲಂಘನೆ ಇಂದಿನ ದುರ್ಭಿಕ್ಷತೆಗೆ ಕಾರಣವಾಗಿದ್ದು, ನಾವು ನಮ್ಮ ಜ್ಞಾನ ಭಕ್ತಿ ವೈರಾಗ್ಯಗಳಿಗೆ ಅನುಗುಣವಾಗಿ ಸಮೃದ್ದಿಯನ್ನು ಪಡೆಯುತ್ತೆವೆ ಎಂದು ತಿಳಿಸಿದರು.
ಭಾಗವತದಲ್ಲಿನ ಹಲವಾರು ರಾಜರ ಕಥೆಗಳು ಇಂದಿಗೂ ಮಾರ್ಗದರ್ಶಕವಾಗಿದೆ. ಆಡಳಿತಗಾರರಿಗೆ ಪ್ರಸ್ಥುತವಾಗಿದೆ. ದೇವರು, ಧರ್ಮದ ಮಹಿಮೆಯನ್ನು ಅರಿಯದೆ ಸ್ವತಃ ದುಖಃವನ್ನು ಅನುಭವಿಸಿ, ಪ್ರಜೆಗಳಿಗೂ ತೊಂದರೆ ನೀಡಿದ ರಾಜರ ಕಥೆಗಳು ಅನೇಕ ಎಚ್ಚರಿಕೆಗಳನ್ನು ನೀಡುತ್ತದೆ.
ಇಂತಹ ಸಂದರ್ಭದಲ್ಲಿ ಭಗವಂತನ ಮಹಿಮೆಗಳನ್ನು ಸತತವಾಗಿ ಕೇಳುವ ಮೂಲಕ ಭಕ್ತಿಯನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಮುತ್ತಿಗೆ ನರಸಿಂಹಾಚಾರ್ಯರ ನಿರಂತರ ಸಂಗೀತ
ಸವಣೂರಿನ ವಿಷ್ಣುತೀರ್ಥದ ಆವರಣದಲ್ಲಿ ರೂಪಿಸಲಾಗಿದ್ದ ಬೃಹತ್ ಸಭಾಂಗಣದಲ್ಲಿ ಏಕಾದಶಿ ಪ್ರಯುಕ್ತ ಜಾಗರಣೆಯೊಂದಿಗೆ ಹರಿಸಂಕೀರ್ತನೆಯನ್ನು ಕೈಗೊಳ್ಳಲಾಯಿತು. ಬೆಂಗಳೂರಿನ ಗಾಯಕರಾದ ಎಸ್. ಶ್ರೀಧರರಾವ್ ಹಾಗೂ ಸುಧನ್ವ ಅವರೊಂದಿಗೆ ಶ್ರೀಮಠದ ಶಿಷ್ಯರಾದ ಮುತ್ತಿಗೆ ನರಸಿಂಹಾಚಾರ್ಯ ಅವರು ನಿರಂತರವಾದ ಸಂಗೀತ ಸೇವೆ ಸಲ್ಲಿಸಿದರು.
ದಾಸರು, ಗುರುಗಳು ರಚಿಸಿದ ಕೀರ್ತನೆಗಳ ಜಪ
ಶ್ರೀವತ್ಸ ಅವರ ಪಿಟೀಲು ವಾದನ ಹಾಗೂ ನರಸಿಂಹ ಪ್ರಸಾದ ಅವರ ಮೃದಂಗದ ಹಿಮ್ಮೇಳದೊಂದಿಗೆ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ಹಲವಾರು ದಾಸರು, ಗುರುಗಳು ರಚಿಸಿದ ಕೀರ್ತನೆಗಳನ್ನು ಗಾಯಕರು ಪ್ರಸ್ಥುತ ಪಡಿಸಿದರು. ಶ್ರೀಮಠದ ವತಿಯಿಂದ ಗುರುಗಳಾಧ ಶ್ರೀ ಸತ್ಯಾತ್ಮತೀರ್ಥರು ಗಾಯಕರನ್ನು ಗೌರವಿಸಿದರು.
ಹಲವಾರು ಕಾರ್ಯಕ್ರಮಗಳು ನೆರೆವೇರಿದವು
ಕಾರ್ಯಕ್ರಮದ ಅನ್ವಯ ಶ್ರೀ ದಿಗ್ವಿಜಯ ಮೂಲರಾಮದೇವರ ಮಹಾಪೂಜೆ, ತಪ್ತಮುದ್ರಾಧಾರಣೆ, ದೀಪೋತ್ಸವ, ತೊಟ್ಟಿಲೋತ್ಸವ, ಸಂಗೀತ ಸೇವೆ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನೆರೆವೇರಿದವು. ಶ್ರೀಮಠದ ಪೂಜಾ ಪರ್ಯಾಯಸ್ಥರಾದ ಬಾಳಾಚಾರ್ಯ ರಾಯಚೂರ ಸೇರಿದಂತೆ ಶ್ರೀಮಠದ ಸಮಸ್ತ ಶಿಷ್ಯವೃಂದ ಉಪಸ್ಥಿತರಿದ್ದರು.
ಅಹೋರಾತ್ರಿ ಸಂಗೀತ ಸೇವೆ
ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿರುವ ತುಳಸೀದಳ ಸಮರ್ಪಣೆಯ ಸಪ್ತದಿನೋತ್ಸವ ಮಹಾಸಮಾರಾಧನೆ ಹಾಗೂ ಶ್ರೀ ಸತ್ಯಪ್ರಮೋದತೀರ್ಥರ ಜನ್ಮಶತಮಾನೋತ್ಸವದ ಅಂಗವಾಗಿ ವಿವಿಧ ಸಂಗೀತಗಾರರಿಂದ ಅಹೋರಾತ್ರಿ ಸಂಗೀತ ಸೇವೆ ನೆರವೇರಿತು.