Namma Metro: ಇತಿಹಾಸದಲ್ಲೇ 1ಕಿ.ಮೀ. ಲೈನ್ ನಿರ್ಮಾಣಕ್ಕೆ ₹776 ಕೋಟಿ: ಕೇಂದ್ರದ ಸೂಚನೆ ಪಾಲಿಸದ BMRCL
Bengaluru Namma Metro: ಬೆಂಗಳೂರಿನ ಅಷ್ಟ ದಿಕ್ಕುಗಳಿಗೂ ನಮ್ಮ ಮೆಟ್ರೋ ಜಾಲ ವಿಸ್ತರಣೆ ಆಗುತ್ತಿದೆ. ಬಹುನಿರೀಕ್ಷಿತ "ಯೆಲ್ಲೋ ಲೈನ್' ತೆರೆದ ಬೆನ್ನಲ್ಲೆ ಸರ್ಜಾಪುರ-ಹೆಬ್ಬಾಳ ಕೆಂಪು ಮಾರ್ಗ (Sarjapur-Hebbal Metro Red Line) ಯೋಜನೆ ಬಗ್ಗೆ ಚರ್ಚೆ ಆಗುತ್ತಿದೆ. ಏಕೆಂದರೆ ಕೇಂದ್ರ ಸರ್ಕಾರ ಅಂದಾಜು ವೆಚ್ಚು ಪುನರ್ ಪರಿಶೀಲಿಸುವಂತೆ ತಿಳಿಸಿದರೂ ಸಹಿತ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಇನ್ನೂವರೆಗೆ ಅದಕ್ಕೆ ಸ್ಪಂದಿಸಿಲ್ಲ. ಅಲ್ಲದೇ ಮೆಟ್ರೋ ಮೂರನೇ ಹಂತದ ಯೋಜನೆಗೆ ಟೆಂಡರ್ ಸಹ ಕರೆದಿಲ್ಲ ಎಂಬ ಆರೋಪ ಇದೆ.
ಹೌದು, ಬೆಂಗಳೂರು ಮೆಟ್ರೋ ಸಾರಿಗೆ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ. ಈ ಸಂಬಂಧ ಹೊಸ ಮಾರ್ಗಗಳ ಯೋಜನೆ ಪೈಕಿ ತಂತ್ರಜ್ಞಾನ ಕೇಂದ್ರವಾಗಿರುವ ಸರ್ಜಾಪುರದಿಂದ ಹೆಬ್ಬಾಳವರೆಗೆ ಕೆಂಪು ಮಾರ್ಗ ನಿರ್ಮಿಸುವ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿ ಅನುಮೋದನೆ ನೀಡಿತ್ತು. 37 ಕಿ.ಮೀ. ಮಾರ್ಗ ಇದಾಗಿದೆ. ಒಂದು ಕಿಲೋ ಮೀಟರ್ಗೆ ಮಾರ್ಗ ನಿರ್ಮಾಣಕ್ಕೆ 776 ಕೋಟಿ ರೂ. ತಗುಲಬಹುದೆಂದು BMRCL ಅಂದಾಜಿಸಿದೆ. ಇದು ಇಡಿ ಬೆಂಗಳೂರು ಮೆಟ್ರೋ ಜಾಲದ ಮಾರ್ಗಗಳಲ್ಲೇ ಅತ್ಯಧಿಕ ದುಬಾರಿ ವೆಚ್ಚದ ಮಾರ್ಗವಾಗಲಿದೆ ಎಂದು ಹೇಳಲಾಗುತ್ತಿದೆ.

4 ತಿಂಗಳಾದರೂ ಸ್ಪಂದಿಸದ BMRCL
ಕೇಂದ್ರ ಸರ್ಕಾರ ಸದ್ಯ ಯೋಜನೆಗೆ ಅನುಮೋದನೆ ನೀಡಿಲ್ಲ. 37 ಕಿ.ಮೀ. ಕೆಂಪು ಮಾರ್ಗದ ವೆಚ್ಚವನ್ನು ಮರುಮೌಲ್ಯಮಾಪನ ಮಾಡುವಂತೆ ಕೇಂದ್ರ ಸರ್ಕಾರ ಬೆಂಗಳೂರು ಮೆಟ್ರೋ ರೈಲು ನಿಗಮವನ್ನು (BMRCL) ತಿಳಿಸಿದೆ. ಇದಾಗಿ 4 ತಿಂಗಳು ಕಳೆದರೂ ಸಹಿತ ಈ ಬಗ್ಗೆ ಮೆಟ್ರೋ ಅಧಿಕಾರಿಗಳು ಏನನ್ನು ಪ್ರತಿಕ್ರಿಯಿಸಿಲ್ಲ. ಒಟ್ಟು ಈ ಯೋಜನೆಗೆ 28,405 ಕೋಟಿ ರೂ. ಅಂದಾಜು ವೆಚ್ಚವಾಗಬಹುದೆಂದು ತಿಳಿಸಿದ್ದ BMRCLಗೆ ರಾಜ್ಯ ಸರ್ಕಾರ 2024ರ ಡಿಸೆಂಬರ್ ಅನುಮೋದನೆ ನೀಡಿತ್ತು.
ಕೋರಮಂಗಲ, ಸರ್ಜಾಪುರ ವ್ಯಾಪಾರ ಕೇಂದ್ರವಾಗಿರುವ ಈ ಭಾಗದಲ್ಲಿ ಕೆಂಪು ಮೆಟ್ರೋ ಮಾರ್ಗ ನಿರ್ಣಾಯಕ ಪಾತ್ರ ವಹಿಸಲಿದೆ. ಇಲ್ಲಿ ಐಟಿ ಕಾರಿಡಾರ್ಗಳು ಇವೆ. ಸದ್ಯ ಮೆಟ್ರೋ ಅಧಿಕಾರಿಗಳು ವೆಚ್ಚ ಮರುಮೌಲ್ಯಮಾಪನ ಮಾಡಲು ಇಷ್ಟೊಂದು ನಿಧಾನಗತಿ ವಹಿಸುತ್ತಿರುವುದಕ್ಕೆ ಕಳವಳ ವ್ಯಕ್ತವಾಗಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳು ಮತ್ತು ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಸಹ ಕಳೆದ ಮೇ 23 ರಂದು ಬೆಂಗಳೂರಿನ ಪ್ರಸ್ತಾವಿತ ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್ನ ವೆಚ್ಚದ ಅಂದಾಜನ್ನು ತಜ್ಞ ಸಂಸ್ಥೆಯಿಂದ ಪರಿಶೀಲಿಸಬೇಕು ಎಂದು ತಿಳಿಸಿದ್ದರು. ಆದರೆ ಈ ಬಗ್ಗೆ BMRCL ಏನನ್ನು ತಿಳಿಸಿಲ್ಲ.
ನಮ್ಮ ಮೆಟ್ರೋ 3ನೇ ಹಂತ: ಟೆಂಡರ್ ಆಹ್ವಾನಿಸಿಲ್ಲ..!
BMRCLನ ನಿಧಾನಗತಿ ಇದು ಕೇವಲ ರೆಡ್ ಲೈನ್ಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಒಂದು ವರ್ಷದ ಹಿಂದೆ ಕೇಂದ್ರ ಸರ್ಕಾರದ ಅನುಮೋದನೆ ನೀಡಿದ ಮೆಟ್ರೋ 3 ನೇ ಹಂತದ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ಗಳಿಗೂ ವಿಸ್ತರಿಸಿದೆ. ಅಂದರೆ ಕೇಂದ್ರ ಸರ್ಕಾರ ಈ ಯೋಜನೆಗೆ ಕೇಲವ 100 ದಿನಗಳಲ್ಲಿ ಅನುಮೋದನೆ ನೀಡಿದೆ. ಆದರೆ BMRCL ಅಧಿಕಾರಿಗಳು ಮಾತ್ರ ಇನ್ನೂವರೆಗೂ ಟೆಂಡರ್ ಕರೆಯಲು ಮುಂದಾಗಿದೆ ಎಂದು ಬೆಂಗಳೂರು ಕೇಂದ್ರ ಬಿಜೆಪಿ ಸಂಸದ ಪಿ.ಸಿ.ಮೋಹನ್ ದೂರಿದ್ದಾರೆ.
ಕೆಲವು ಸಂಭಾವ್ಯ ಪರಿಣಾಮಗಳನ್ನು ತೋರಿಸಲಾಗುತ್ತಿದೆ. ಕೇಂದ್ರ ಅನುಮೋದನೆ ನೀಡಿ ಒಂದು ವರ್ಷದ ನಂತರವೂ, ಬಿಎಂಆರ್ಸಿಎಲ್ ಸಿವಿಲ್ ಕೆಲಸ ಟೆಂಡರ್ಗಳನ್ನು ಕರೆಯಲು ವಿಫಲವಾಗಿದೆ. ಇಂತಹ ನಿಷ್ಕ್ರಿಯತೆಯಿಂದ 2041 ರವರೆಗೆ ಪೂರ್ಣಗೊಳ್ಳಬೇಕಿರುವ ಈ ಯೋಜನೆ ಮತ್ತಷ್ಟು ವಿಳಂಬವಾಗಬಹದು. ಅಂದಾಜು ವೆಚ್ಚ ಇನ್ನಷ್ಟು ಹೆಚ್ಚಾಗಬಹುದು. ಇದನ್ನು ಭವಿಷ್ಯದಲ್ಲಿ ಪ್ರಯಾಣಿಕರ ಮೇಲೆ ಹಾಕಲಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications