ಈಶ್ವರಪ್ಪ ಕಿವಿ ಹಿಂಡಲು ಹೈಕಮಾಂಡ್ಗೆ ದೂರು?
ಬೆಂಗಳೂರು, ಆಗಸ್ಟ್ 20 : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಯಡಿಯೂರಪ್ಪ ಅವರು ಹೈಕಮಾಂಡ್ ನಾಯಕರಿಗೆ ದೂರು ನೀಡುವ ಸಾಧ್ಯತೆ ಇದೆ. ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಕಿವಿ ಹಿಂಡುವಂತೆ ಅವರು ಮನವಿ ಮಾಡಲಿದ್ದಾರೆ ಎಂಬುದು ಸದ್ಯದ ಸುದ್ದಿ.
ಪಕ್ಷದ ವಿವಿಧ ಮೋರ್ಚಾಗಳ ಹೊರತಾಗಿ ಬೇರೆ ಸಂಘಟನೆಯಡಿ ಕಾರ್ಯಕ್ರಮಗಳನ್ನು ನಡೆಸಬಾರದು ಎಂಬ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯನ್ನು ಈಶ್ವರಪ್ಪ ಧಿಕ್ಕರಿಸಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟು ಹಾಕಲು ವೇದಿಕೆ ಸಿದ್ಧಪಡಿಸಿದ್ದಾರೆ.['ಚಟುವಟಿಕೆಯಿಂದ ಇರುವ ಮಗು ಕಂಡರೆ ಯಾರೂ ಸಹಿಸುವುದಿಲ್ಲ']
'ಪಕ್ಷದ ನಾಯಕರ ಸೂಚನೆಯನ್ನು ನಾನು ತಿರಸ್ಕಾರ ಮಾಡುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆಯನ್ನು ನಡೆಸುತ್ತಿಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಚನೆ ವಿಚಾರದಲ್ಲಿ ನನ್ನನ್ನು ಆಹ್ವಾನಿಸಿದ್ದರು. ಆಹ್ವಾನಿತನಾಗಿ ನಾನು ಸಭೆಗೆ ಹೋಗಿದ್ದೆ' ಎಂದು ಈಶ್ವರಪ್ಪ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.[ಕೇಂದ್ರ ನಾಯಕರಿಗೆ ಬಿಎಸ್ವೈ ರವಾನಿಸಿದ ಎಚ್ಚರಿಕೆ ಏನು?]
ಈ ಬೆಳವಣಿಗೆಗಳ ಕುರಿತು ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ದೂರು ನೀಡಿ, ಈಶ್ವರಪ್ಪ ಅವರಿಗೆ ಬ್ರಿಗೇಡ್ ಸ್ಥಾಪನೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ....[ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ : ಈಶ್ವರಪ್ಪ]

ಬ್ರಿಗೇಡ್ ಬಗ್ಗೆ ಈಶ್ವರಪ್ಪ ಹೇಳುವುದೇನು?
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಗ್ಗೆ ಮಾತನಾಡಿರುವ ಕೆ.ಎಸ್.ಈಶ್ವರಪ್ಪ ಅವರು. 'ಬಿಜೆಪಿ ಹಿಂದುಳಿದ ಮೋರ್ಚಾದ ದೀಪ ಹಚ್ಚಲು ಎಲ್ಲರೂ ಬರುತ್ತಾರಾ? ಪಕ್ಷದ ಬಾವುಟ ಹಿಡಿಯದೆಯೂ ಹೊರಗಿನಿಂದ ಬೆಂಬಲಿಸುವವರು ಇದ್ದಾರೆ. ಅವರನ್ನು ಒಗ್ಗೂಡಿಸುವ ಉದ್ದೇಶ ನನ್ನದು' ಎಂದು ಸಮರ್ಥನೆ ನೀಡಿದ್ದಾರೆ.

ಅಮಿತ್ ಶಾಗೆ ದೂರು?
ಜಾತಿ ಸಂಘಟನೆಗಳನ್ನು ಪಕ್ಷದ ಮೋರ್ಚಾಗಳ ಮೂಲಕವೇ ಸಂಘಟನೆ ಮಾಡಬೇಕು ಎಂದು ಯಡಿಯೂರಪ್ಪ ಅವರು ಎರಡು ದಿನಗಳ ಹಿಂದೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಈಶ್ವರಪ್ಪ ಅವರಿಗೆ ಸೂಚನೆ ನೀಡಿದ್ದರು. ಆದರೆ, ಯಡಿಯೂರಪ್ಪ ಅವರ ಸೂಚನೆಯನ್ನು ಅವರು ತಿರಸ್ಕರಿಸಿದ್ದಾರೆ. ಆದ್ದರಿಂದ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ದೂರು ಕೊಡಲು ಚಿಂತನೆ ನಡೆಸಲಾಗಿದೆ.

ಆ.21ರಂದು ಅಮಿತ್ ಶಾ ಭೇಟಿ
'70ನೇ ಸ್ವಾತಂತ್ರ್ಯೊತ್ಸವ ಬಲಿದಾನ ಸ್ಮರಣೆ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಮಿತ್ ಶಾ ಅವರು ಆ.21ರ ಭಾನುವಾರ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ವೇಳೆ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ದೂರು ಸಲ್ಲಿಸುವ ಸಾಧ್ಯತೆ ಇದೆ.

ಯಡಿಯೂರಪ್ಪ ಸಲಹೆ ಏನು?
'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹುಟ್ಟು ಹಾಕಲು ಹೊರಟಿರುವುದರಿಂದ ಪಕ್ಷದ ಸಂಘಟನೆಗೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ, ಈ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು. ಪಕ್ಷದಲ್ಲಿರುವ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಮುಂತಾದ ಮೋರ್ಚಾಗಳಿವೆ ಇವುಗಳ ಮೂಲಕವೇ ಹಿಂದುಳಿದ ವರ್ಗದವರನ್ನು ಸಂಘಟಿಸಬೇಕು. ಇದರಿಂದ ಪಕ್ಷಕ್ಕೆ ಅನುಕೂಲವಾಗುತ್ತದೆ. ಮೋರ್ಚಾಗಳ ವತಿಯಿಂದಲೇ ಸಮಾವೇಶ ನಡೆಸಬೇಕು' ಎಂಬುದು ಯಡಿಯೂರಪ್ಪ ಸಲಹೆ.

ಆ.22ರಂದು ಸಭೆ
ಪಕ್ಷ ಸಂಘಟನೆ ಬಗ್ಗೆ ಆ.22ರಂದು ದೆಹಲಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಗೆ ಆಗಮಿಸುವಂತೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಪ್ರಹ್ಲಾದ್ ಜೋಶಿ ಸೇರಿದಂತೆ ಕೆಲವು ನಾಯಕರಿಗೆ ಸೂಚನೆ ನೀಡಲಾಗಿದೆ.












Click it and Unblock the Notifications