ಮಾಗಡಿಯಲ್ಲಿ ತಹಸೀಲ್ದಾರ್ ಮೇಲೆ ಟ್ರ್ಯಾಕ್ಟರ್ ಹತ್ತಿಸಲೆತ್ನಿಸಿದವರ ಬಂಧನ
ಮಾಗಡಿ, ಸೆಪ್ಟಂಬರ್ 3: ಅಕ್ರಮ ಫಿಲ್ಟರ್ ಮರಳು ಮಾಫಿಯಾ ದಂಧೆ ನಡೆಸುತ್ತಿದ್ದಾಗ ದಾಳಿ ಮಾಡಿದ ತಹಸೀಲ್ದಾರ್ ಮೇಲೆಯೇ ದಂಧೆಕೋರರು ಟ್ರ್ಯಾಕ್ಟರ್ ಹರಿಸಲೆತ್ನಿಸಿದ ಘಟನೆ ಮಾಗಡಿ ತಾಲೂಕಿನ ನಾರಸಂದ್ರದಲ್ಲಿ ನಡೆದಿದೆ. ಇದೀಗ ಟ್ರಾಕ್ಟರ್ ಹತ್ತಿಸಲೆತ್ನಿಸಿದ ಆರೋಪಿಗಳನ್ನು ಕುದೂರು ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ತಾಲೂಕಿನ ನಾರಸಂದ್ರ ಗ್ರಾ.ಪಂ. ವ್ಯಾಪ್ತಿಯ ಚೀಲೂರು ಕೆರೆಯಲ್ಲಿ ಹಲವರು ಅಕ್ರಮವಾಗಿ ಫಿಲ್ಟರ್ ಮರಳು ದಂಧೆ ನಡೆಸುತ್ತಿದ್ದರು. ಈ ಬಗ್ಗೆ ದೂರುಗಳು ಕೇಳಿ ಬಂದಿದ್ದವು.
ಹೀಗಾಗಿ ತಹಸೀಲ್ದಾರ್ ಲಕ್ಷ್ಮಿ ಸಾಗರ್ ಅವರು ಸಿಬ್ಬಂದಿಗಳ ಜತೆ ಅಕ್ರಮ ಫಿಲ್ಟರ್ ಮರಳು ದಂಧೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿ ಟ್ರ್ಯಾಕ್ಟರ್ಗಳು ಇರಲಿಲ್ಲ. ಆದ್ದರಿಂದ ಸಂಜೆ ಮತ್ತೆ ತಹಸೀಲ್ದಾರ್ ದಾಳಿ ಮಾಡಿದ್ದು, ಆಗ ಫಿಲ್ಟರ್ ಮರಳಿನ ಟ್ರಾಕ್ಟರ್ ಓಡಿಸುತ್ತಿದ್ದ ಆರೋಪಿ ಧನಂಜಯ್ಯ ಎಂಬಾತ ಏಕಾ ಏಕಿ ತಹಸೀಲ್ದಾರ್ ಲಕ್ಷ್ಮೀ ಸಾಗರ್ ಮೇಲೆಯೇ ಟ್ರ್ಯಾಕ್ಟರನ್ನು ಹತ್ತಿಸಲು ಮುಂದಾಗಿದ್ದಾನೆ.
ತಕ್ಷಣ ತಹಸೀಲ್ದಾರ್ ಕುದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಎಸ್ಐ ಜೋಸೆಫ್ ಮತ್ತು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿಕೊಂಡು ಆರೋಪಿಗಳಾದ ಧನಂಜಯ್ಯ, ಚಿಕ್ಕಣ್ಣ, ಸೂರ್ಯ ಕುಮಾರ್, ಮೋಹನ್ ರವರನ್ನು ಬಂಧಿಸಿಸಲಾಗಿದ್ದು, ಅವರಿಂದ ಎರಡು ಟ್ರ್ಯಾಕ್ಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಮರಳಿನ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಮರಳು ದಂಧೆ ನಡೆಸುವವರ ಸಂಖ್ಯೆ ಹೆಚ್ಚಾಗಿದ್ದು, ಅಧಿಕಾರಿಗಳ ಮೇಲೆಯೇ ಹಲ್ಲೆಗೆ ಯತ್ನಿಸುವುದು, ಟ್ರ್ಯಾಕ್ಟರ್ ಹತ್ತಿಸಲು ಯತ್ನಿಸುವುದು ಮೇಲಿಂದ ಮೇಲೆ ನಡೆಯುತ್ತಿದ್ದು, ಇನ್ನಾದರೂ ಸರ್ಕಾರ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕಾಗಿದೆ.