ರೈಲ್ವೆ ಸದಾನಂದ ಗೌಡರ ಕೈ ತಪ್ಪಲು 5 ಕಾರಣಗಳು
ಬೆಂಗಳೂರು, ನ. 10 : ರೈಲ್ವೆ ಖಾತೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡರ ಕೈತಪ್ಪಿದೆ. ಪ್ರಧಾನಿ ನರೇಂದ್ರ ಮೋದಿ ಖಾತೆಗಳ ಮರುಹಂಚಿಕೆ ಮಾಡಿದ್ದು, ಸದಾನಂದ ಗೌಡರಿಗೆ ಕಾನೂನು ಮತ್ತು ನ್ಯಾಯಾಂಗ ಖಾತೆ ನೀಡಲಾಗಿದೆ. ಮೋದಿ ಅವರ ವೇಗಕ್ಕೆ ಹೊಂದಿಕೊಳ್ಳದಿರುವುದು ಡಿವಿಎಸ್ ಖಾತೆ ಕೈ ತಪ್ಪಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಕೇಂದ್ರದಲ್ಲಿ ಸಚಿವರಾಗಿ ಕೆಲಸ ಆರಂಭಿಸಿದ ಕೇವಲ ಐದೂವರೆ ತಿಂಗಳಲ್ಲಿ ಮಹತ್ವದ ರೈಲ್ವೆ ಖಾತೆ ಡಿ.ವಿ. ಸದಾನಂದಗೌಡರ ಕೈತಪ್ಪಿದೆ. ರವಿಶಂಕರ್ ಪ್ರಸಾದ್ ಅವರ ಬಳಿ ಹೆಚ್ಚುವರಿಯಾಗಿದ್ದ ಕಾನೂನು ಖಾತೆ ಹಿಂದಕ್ಕೆ ಪಡೆದು ಅದನ್ನು ಗೌಡರಿಗೆ ಕೊಡಲಾಗಿದೆ. [ಯಾರಿಗೆ ಯಾವ ಖಾತೆ, ಇಲ್ಲಿದೆ ಮಾಹಿತಿ]
ದೊಡ್ಡ ವಿವಾದ ಹುಟ್ಟು ಹಾಕಿದ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ಪ್ರೇಮ ಪ್ರಕರಣ, ಐದು ತಿಂಗಳಲ್ಲಿ ದ್ವಿಗುಣಗೊಂಡ ಆಸ್ತಿಯಿಂದ ಸುತ್ತಿಕೊಂಡ ವಿವಾದದಿಂದಾಗಿ ಸದಾನಂದ ಗೌಡರಿಗೆ ಖಾತೆ ಕೈತಪ್ಪಿಗೆ ಎಂಬುದು ಒಂದು ಮಾತಾದರೆ, ಪ್ರಧಾನಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಗೌಡರು ವಿಫಲರಾದ್ದರಿಂದ ಖಾತೆ ಬದಲಾವಣೆಯಾಗಿದೆ ಎಂಬ ಮಾತುಗಳು ಇವೆ. ರೈಲ್ವೆ ಖಾತೆ ಡಿವಿಎಸ್ ಕೈ ತಪ್ಪಲು 5 ಕಾರಣಗಳು

ಮೋದಿ ವೇಗಕ್ಕೆ ಹೊಂದಿಕೊಳ್ಳಲಿಲ್ಲ
ನರೇಂದ್ರ ಮೋದಿ ಅವರು ಅಧಿಕಾರ ಸ್ವೀಕರಿಸಿದ ನಂತರ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದಗೌಡರ ಮೇಲೆ ವಿಶ್ವಾಸವಿಟ್ಟು ರೈಲ್ವೆ ಖಾತೆ ನೀಡಿದ್ದರು. ಪ್ರಮುಖ ಖಾತೆಯೊಂದು ಅವರಿಗೆ ದೊರೆತಿದ್ದು, ಅನೇಕರ ಹುಬ್ಬೇರಿಸುವಂತೆ ಮಾಡಿತ್ತು. ಆದರೆ, ಗೌಡರು ಪ್ರಧಾನಿ ಮೋದಿ ವೇಗಕ್ಕೆ ಹೊಂದಿಕೊಳ್ಳಲಿಲ್ಲ ಮತ್ತು ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ ಎಂಬ ವಾದವಿದೆ.

ಅನುಷ್ಠಾನದಲ್ಲಿ ವಿಳಂಬ
ರೈಲ್ವೆ ಬಜೆಟ್ನಲ್ಲಿ ಘೋಷಣೆ ಮಾಡಿದ್ದ ಬುಲೆಟ್, ಹೈಸ್ಪೀಡ್ ರೈಲೂ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸದಾನಂದ ಗೌಡರು ವಿಳಂಬ ಮಾಡಿದ್ದಾರೆ ಎಂಬುದು ಅವರ ಖಾತೆ ಬದಲಾವಣೆಗೆ ಪ್ರಮುಖ ಕಾರಣ ಎಂದೂ ವಿಶ್ಲೇಷಿಸಲಾಗುತ್ತಿದೆ.

ದೊಡ್ಡ ಖಾತೆ, ಲಕ್ಷಾಂತರ ನೌಕರರು
ಪ್ರತಿದಿನ ರೈಲ್ವೆಯಲ್ಲಿ ಸುಮಾರು 2 ಕೋಟಿ ಜನರು ಸಂಚರಿಸುತ್ತಾರೆ. ಇದೊಂದು ದೊಡ್ಡ ಖಾತೆಯಾಗಿದ್ದು ಲಕ್ಷಾಂತರ ನೌಕರರಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡಿ ಅನುಭವ ಇಲ್ಲದ ಅಧಿಕಾರಿಗಳು ಮತ್ತು ಸಿಬ್ಬಂದಿ ಸದಾನಂದ ಗೌಡ ಜೊತೆಗಿದ್ದರು. ಆದ್ದರಿಂದ ತೀರ್ಮಾನಗಳನ್ನು ಕೈಗೊಳ್ಳುವುದು ವಿಳಂಬವಾಯಿತು. ರೈಲ್ವೆಯನ್ನು ಪ್ರಯಾಣಿಕ ಸ್ನೇಹಿ ಮಾಡಲು ಗೌಡರು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬ ಆರೋಪಗಳಿವೆ.

ಕಾರ್ತಿಕ್ ಗೌಡ ಪ್ರೇಮ ಪ್ರಕರಣ
ನಟಿ ಮೈತ್ರಿಯಾ ಗೌಡ ಹಾಗೂ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ಅವರ ಪ್ರೇಮ-ವಿವಾಹ ಪ್ರಕರಣ ಭಾರೀ ವಿವಾದ ಹುಟ್ಟುಹಾಕಿತ್ತು. ಸದಾನಂದ ಗೌಡರು ಈ ಬಗ್ಗೆ ಪ್ರಧಾನಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ವಿವರಣೆ ನೀಡಿದ್ದರು. ಈ ವಿವಾದದಿಂದಾಗಿಯೂ ಅವರ ಖಾತೆ ಬದಲಾವಣೆಯಾಗಿರುವ ಸಾಧ್ಯತೆ ಇದೆ.

ಡಿವಿಎಸ್ ಆಸ್ತಿ ಹೆಚ್ಚಳ ವಿವಾದ
ಪುತ್ರನ ಪ್ರೇಮ ಪ್ರಕರಣ ವಿವಾದ ತಣ್ಣಗಾಗುವ ಮುಂಚೆಯೇ ಸದಾನಂದ ಗೌಡರ ಆಸ್ತಿಗಳಿಕೆ ಪ್ರಕರಣ ದೊಡ್ಡ ಸುದ್ದಿಯಾಯಿತು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಸದಾನಂದಗೌಡರು ತಮ್ಮ ಬಳಿ 9.88 ಕೋಟಿ ಮೊತ್ತದ ಆಸ್ತಿ ಇರುವುದಾಗಿ ಘೋಷಿಸಿದ್ದರು. ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವರಾದ ಬಳಿಕ 20.46ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದ್ದರು. ಇದಕ್ಕೆ ಗೌಡರು ಏನೇ ಕಾರಣ ಕೊಟ್ಟರೂ ದೊಡ್ಡ ವಿವಾದವಾಗಿತ್ತು.











Click it and Unblock the Notifications