ಕೆರೆಕಟ್ಟೆ ಮಂಜೂರಾತಿಗೆ ಅವಕಾಶವಿದ್ದ ಸುತ್ತೋಲೆ ರದ್ದು
ಬೆಂಗಳೂರು, ಜೂನ್ 15: ಮೂಲಸ್ವರೂಪವನ್ನು ಕಳೆದುಕೊಂಡಿರುವ ಸರ್ಕಾರಿ, ಕೆರೆ, ಕಟ್ಟೆ, ಕುಂಟೆ ಮತ್ತು ಹಳ್ಳಿಗಳನ್ನು ಖಾಸಗಿ ಉದ್ದಿಮೆಗಳು ಹಾಗೂ ಸಂಘಟ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿದ್ದರಿಂದ 2000ಇಸವಿಯ ಸುತ್ತೋಲೆಯನ್ನು ರದ್ದುಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
ಹೀಗಾಗಿ ಸರ್ಕಾರಿ ಜಲಮೂಲ ಪ್ರದೇಶಗಳನ್ನು ಖಾಸಗಿ ಉದ್ದಿಮೆಗಳು ಮತ್ತು ಸಂಘ-ಸಂಸ್ಥೆಗಳಿಗೆ ಮಾರಾಟ ಮಾಡಬಹುದೆಂಬ ಯಾವುದೇ ಪ್ರಸ್ತಾವನೆಯನ್ನೂ ಇನ್ನುಮುಂದೆ ಸರ್ಕಾರಕ್ಕೆ ಕಳುಹಿಸದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಕೃತಿ ವಿಕೋಪ: ಮೃತರ ಕುಟುಂಬಕ್ಕೆ ತಕ್ಷಣ 4 ಲಕ್ಷ ಪರಿಹಾರ
ಸರ್ಕಾರಿ ಜಲಮೂಲ ಪ್ರದೇಶಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಲಿ, ಅಥವಾ ಖಾಸಗಿ ಉದ್ದೇಶಕ್ಕೇ ಆಗಲಿ ಉಪಯೋಗಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋಟ್ ಸಂಬಂಧಿಸಿದ ಎಲ್ಲ ಪ್ರಾಧಿಕಾರಗಳಿಗೂ ಎಚ್ಚರಿಕೆ ನೀಡಿದೆ. ಜೊತೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು 2010ರಲ್ಲಿ ಜಾರಿಗೆ ತಂದಿರುವ ಜಲಪ್ರದೇಶಗಳ ಸಂರಕ್ಷಣೆ ಮತ್ತು ನಿರ್ವಹಣೆ ನಿಯಮಗಳಡಿಯಲ್ಲಿ ಕೆರೆಗಳನ್ನೂ ಸೇರಿಸಿರುವುದನ್ನು ಇಲ್ಲಿ ನೆನೆಯಬಹುದು.
ಇದಲ್ಲದೆ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು 2016ರ ಮೇ 4ರಂದು ತಾನು ಹೊರಡಿಸಿರುವ ಆದೇಶದಲ್ಲಿ ಸರಕಾರಿ ಜಲಮೂಲಗಳ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದೆ.
ರಾಜ್ಯ ಕಂದಾಯ ಇಲಾಖೆಯು 2000ನೇ ಇಸವಿಯಲ್ಲಿ ಹೊರಡಿಸಿದ್ದ ಸುತ್ತೋಲೆಯಲ್ಲಿ ಸರ್ಕಾರಿ ಕೆರೆಕಟ್ಟೆಗಳು ತಮ್ಮ ಮೂಲಸ್ವರೂಪವನ್ನು ಕಳೆದುಕೊಂಡಿದ್ದರೆ ಅವುಗಳನ್ನು ಖಾಸಗಿಯವರಿಗೆ ಮಂಜೂರು ಮಾಡುವಂತಹ ಪ್ರಸ್ತಾವನೆಯನ್ನು ನೀರಾವರಿ ಇಲಾಖೆಯ ಸಹಮತಿಯೊಂದಿಗೆ ಸರ್ಕಾರಕ್ಕೆ ಕಳುಹಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಡಲಾಗಿತ್ತು. ಈಗ ಈ ಸುತ್ತೋಲೆಯನ್ನು ಸರಕಾರ ಹಿಂತೆದುಕೊಂಡಿರುವುದರಿಂದ ಆ ಅಧಿಕಾರವು ರದ್ದಾಗಿದೆ.
ಈ ಮಧ್ಯೆ ರಾಜ್ಯ ಸರಕಾರದ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ 2014ರ ಪ್ರಕರಣ 1(ಎಚ್)ರ ಅನ್ವಯ ಕೂಡ ನೀರು ಇರಲಿ ಅಥವಾ ಇಲ್ಲದಿರಲಿ, ಸರಕಾರಿ ಕೆರೆ, ಖರಾಬು, ಕುಂಟೆ, ಕಟ್ಟೆ, ರಾಜಕಾಲುವೆ ಮುಂತಾದವೆಲ್ಲವೂ ಜಲಮೂಲ ಪ್ರದೇಶಗಳೇ ಆಗಿರುತ್ತವೆ ಎಂದು ವ್ಯಾಖ್ಯಾನಿಸಲಾಗಿದೆ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ 2000ನೇ ಇಸವಿಯ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಇದರಿಂದಾಗಿ ರಾಜ್ಯದ ಜಲಮೂಲಗಳನ್ನು ಉಳಿಸಿಕೊಳ್ಳಬಹುದಾಗಿದ್ದು, ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇದೊಂದು ಮಹತ್ತ್ವದ ಹೆಜ್ಜೆಯಾಗಿದೆ ಎಂದು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ವಿವರಿಸಿದ್ದಾರೆ.