ವೈದ್ಯರ 1 ವರ್ಷ ಗ್ರಾಮೀಣ ಸೇವೆ ಕಡ್ಡಾಯ; ತಿದ್ದುಪಡಿ ಆದೇಶ
ಬೆಂಗಳೂರು, ನವೆಂಬರ್ 13; ಕರ್ನಾಟಕ ಸರ್ಕಾರ ವೈದ್ಯಕೀಯ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಗ್ರಾಮೀಣ ಸೇವೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈ ಕುರಿತು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರು ಅವರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ (ಜಿ. ಶ್ರೀಧರ್) ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಒಟ್ಟು 5 ತಿದ್ದುಪಡಿಗಳನ್ನು ಮಾಡಲಾಗಿದ್ದು, ಇವು ತಕ್ಷಣದಿಂದ ಜಾರಿಗೆ ಬರಲಿವೆ.

ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಅಧ್ಯಾದೇಶ, 2023 ಇದಕ್ಕೆ 2023ರ ನವೆಂಬರ್ ತಿಂಗಳ 8ನೇ ದಿನಾಂಕದಂದು ರಾಜ್ಯಪಾಲರ ಒಪ್ಪಿಗೆ ದೊರತಿದ್ದು, ಸಾಮಾನ್ಯ ತಿಳುವಳಿಕೆಗಾಗಿ ಇದನ್ನು 2023ರ ಕರ್ನಾಟಕ ಅಧ್ಯಾದೇಶ ಸಂಖ್ಯೆ:05 ಎಂಬುದಾಗಿ ದಿನಾಂಕ 8ನೇ ನವೆಂಬರ್ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ.
ಒಟ್ಟು 5 ತಿದ್ದುಪಡಿಗಳು; ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಅಧ್ಯಾದೇಶ, 2023. ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ಅಧಿನಿಯಮ, 2012 (2015ರ ಕರ್ನಾಟಕ ಅಧಿನಿಯಮ 26) ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ಮತ್ತು ಅದಕ್ಕೆ ಸಂಬಂಧಪಟ್ಟ ಪ್ರಾಸಂಗಿಕವಾದ ಅಥವಾ ವಿಷಯಗಳಿಗಾಗಿ ಒಂದು ಅಧ್ಯಾದೇಶ ಎಂದು ವಿವರಣೆ ನೀಡಲಾಗಿದೆ.
ಕರ್ನಾಟಕ ರಾಜ್ಯದ ವಿಧಾನಮಂಡಲದ ಉಭಯ ಸದನಗಳು ಅಧಿವೇಶನದಲ್ಲಿ ಇಲ್ಲದಿರುವುದರಿಂದ ಮತ್ತು ಸದ್ಯದಲ್ಲಿ ಸಭೆ ಸೇರುವ ಸಂಭವವಿಲ್ಲದಿರುವುದರಿಂದ ಹಾಗೂ ಇಲ್ಲಿ ಇನ್ನು ಮುಂದೆ ಕಂಡುಬರುವ ಉದ್ದೇಶಗಳಿಗಾಗಿ ಅಧ್ಯಾದೇಶವನ್ನು ಪ್ರಖ್ಯಾಪಿಸುವುದಕ್ಕೆ ಕೂಡಲೇ ಕ್ರಮವನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿರುವಂಥ ಸನ್ನಿವೇಶಗಳು ಉಂಟಾಗಿವೆಯೆಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಿಗೆ ಮನದಟ್ಟಾಗಿರುವುದರಿಂದ ಈ ಆದೇಶ ಹೊರಡಿಸಲಾಗಿದೆ.
ಭಾರತ ಸಂವಿಧಾನದ 213ನೇ ಅನುಚ್ಛೇದದ (1)ನೇ ಖಂಡದ ಮೂಲಕ ಪದವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಆದೇಶಿಸಿರುತ್ತಾರೆ. ಈ ಅಧ್ಯಾದೇಶವನ್ನು ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ಅಧ್ಯಾದೇಶ, 2023 ಎಂದು ಕರೆಯತಕ್ಕದ್ದು. ಇದು ಈ ಕೂಡಲೇ ಜಾರಿಗೆ ಬರತಕ್ಕದ್ದು.
ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ಅಧಿನಿಯಮ, 2012 (2015ರ ಕರ್ನಾಟಕ ಅಧಿನಿಯಮ 26) (ಇಲ್ಲಿ ಇನ್ನುಮುಂದೆ ಮೂಲ ಅಧಿನಿಯಮವೆಂದು ಉಲ್ಲೇಖಿಸಲಾಗಿದೆ). 'ಒಂದು ವರ್ಷದ ಕಡ್ಡಾಯ ಗ್ರಾಮೀಣ ಸೇವೆಗೆ' ಎಂಬ ಪದಗಳ ಮೊದಲು 'ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಲಾದಂತೆ ಅಸ್ತಿತ್ವದಲ್ಲಿರುವ ಖಾಲಿಹುದ್ದೆಗಳಲ್ಲಿ' ಎಂಬ ಪದಗಳನ್ನು ಸೇರಿಸತಕ್ಕದ್ದು. ಅಭ್ಯರ್ಥಿಗಳು ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿಯತ ಸೇವೆಗಾಗಿ ಆಯ್ಕೆಯಾದರೆ, ಅಂಥ ಅಭ್ಯರ್ಥಿಗಳನ್ನು ವಿನಾಯಿತಿಸತಕ್ಕದ್ದು.
"ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳಲ್ಲಿ ಸಾಮಾನ್ಯ ಕರ್ತವ್ಯ ನಿರತ ವೈದ್ಯರ ಒಟ್ಟು ಕನಿಷ್ಠ ಸಂಬಳಕ್ಕಿಂತ ನೂರು ರೂಪಾಯಿಗಳಷ್ಟು ಕಡಿಮೆಗೆ ಸಮನಾಗಿರುವ" ಎಂಬ ಪದಗಳಿಗೆ ಬದಲಾಗಿ "ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಿದಂತೆ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು. "ಕಡ್ಡಾಯ ಗ್ರಾಮೀಣ ಸೇವೆಗೆ ಒಳಪಡದಿರುವಂಥ" ಎಂಬ ಪದಗಳ ತರುವಾಯ "ಅಥವಾ ಕೆಲಸ ಮಾಡಲು ನಿರಾಕರಿಸುವ ಅಥವಾ ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಬಹದಾದಂಥ ಷರತ್ತುಗಳನ್ನು ಪಾಲಿಸದಿರುವ" ಎಂಬ ಪದಗಳನ್ನು ಸೇರಿಸತಕ್ಕದ್ದು. ಮೂಲ ಅಧಿನಿಯಮದ 4ನೇ ಪ್ರಕರಣದ (1)ನೇ ಉಪಪಕರಣದಲ್ಲಿ, "ಒಂದು ವರ್ಷದ ಕಡ್ಡಾಯ ಸೇವೆಗೆ" ಎಂಬ ಪದಗಳಿಗೆ ಮೊದಲು "ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಲಾದಂತೆ ಅಸ್ತಿತ್ವದಲ್ಲಿರುವ ಖಾಲಿಹುದ್ದೆಗಳಲ್ಲಿ" ಎಂಬ ಪದಗಳನ್ನು ಸೇರಿಸತಕ್ಕದ್ದು.
"ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ತಜ್ಞರ ಒಟ್ಟು ಕನಿಷ್ಠ ಸಂಬಳಕ್ಕಿಂತ ನೂರು ರೂಪಾಯಿಗಳಷ್ಟು ಕಡಿಮೆಗೆ ಸಮನಾಗಿರುವ ನಿಯಮಿಸಬಹುದಾದ" ಎಂಬ ಪದಗಳಿಗೆ ಬದಲಾಗಿ "ರಾಜ್ಯ ಸರ್ಕಾರವು ನಿರ್ದಿಷ್ಟಪಡಿಸಿದಂತೆ" ಎಂಬ ಪದಗಳನ್ನು ಪ್ರತಿಯೋಜಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.












Click it and Unblock the Notifications