ಉದ್ಯೋಗ ಖಾತ್ರಿಯಿಂದ ಸಾಮಾಜಿಕ ಬದಲಾವಣೆಯಾಗಬೇಕು: ಎಲ್.ಕೆ. ಅತಿಕ್
ಬೆಂಗಳೂರು, ಫೆ. 03: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಗ್ರಾಮೀಣ ಕುಟುಂಬಗಳು ಜೀವನೋಪಾಯಕ್ಕೆ ಯೋಜನೆಯನ್ನೇ ಅವಲಂಬಿಸಿವೆ. ಆದರೆ ತಮ್ಮ ಮಕ್ಕಳಿಗೆ ವೃತ್ತಿ ಕೌಶಲ್ಯತೆಯನ್ನು ಒದಗಿಸುವ ಮೂಲಕ ಸಾಮಾಜದಲ್ಲಿ ಬದಲಾವಣೆ ಆಗುವಂತೆ ಮಾಡಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದಲ್ಲಿ ಆಯೋಜಿಸಿದ್ದ 15ನೇ ನರೇಗಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 4-5 ವರ್ಷಗಳಿಂದ 5 ರಿಂದ 6 ಕೋಟಿ ಮಾನವ ದಿನಗಳು ಸೃಜನೆಯಾಗುತ್ತಿವೆ. ಈಗ 14 ಕೋಟಿ ಮಾನವ ದಿನ ಸೃಜನೆಯಾಗುತ್ತಿದ್ದು, ಹೆಚ್ಚುವರಿ ಮಾನವ ದಿನಗಳ ಸೃಜನೆಯಿಂದ ರಾಜ್ಯಕ್ಕೆ ಈ ಸಾಲಿನಲ್ಲಿ ಸುಮಾರು 24 ಸಾವಿರ ಕೋಟಿ ರೂ. ಅನುದಾನ ಸಿಕ್ಕಿದೆ. ಹೀಗಾಗಿ ಕೆಲಸ ಪಡೆಯುವುದು ಗ್ರಾಮೀಣ ಭಾಗದ ಜನರ ಹಕ್ಕು ಎಂದರು.
Recommended Video
ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಅನಿರುದ್ಧ ಶ್ರವಣ್ ಅವರು, ನರೇಗಾ ಯೋಜನೆ ಗ್ರಾಮೀಣ ಜನರಿಗೆ ಕೆಲಸದ ಖಾತ್ರಿಯಾಗಿದೆ. ಈಗಾಗಲೇ ಯೋಜನೆಯಡಿ ಕೈಗೊಂಡ ಅಭಿಯಾನಗಳ ಯಶಸ್ವಿ ಆಗಿರುವುದು ಇದಕ್ಕೆ ಸಾಕ್ಷಿ. ಜನರಿಗೆ ಕೆಲಸದ ಜೊತೆಗೆ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಮೂಲಕ ಮಾದರಿ ಗ್ರಾಮ ಪಂಚಾಯಿತಿಗಳಾಗಿ ರೂಪುಗೊಳ್ಳಲು ಯೋಜನೆ ಸಹಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ 100 ದಿವಸ ಕೆಲಸ ಪಡೆದ ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಯ ಆಯ್ದ ಕೆಲಸಗಾರರನ್ನು ಸನ್ಮಾನಿಸಲಾಯಿತು.