ಕನ್ನಡ ನುಡಿ ನಮ್ಮೆಲ್ಲರ ಬದುಕಿನ ಮಾಧ್ಯಮವಾಗಲಿ: ಎಚ್.ಕೆ ಪಾಟೀಲ್
ಗದಗ, ನವೆಂಬರ್, 02: ನಮ್ಮ ಕನ್ನಡ ನುಡಿ ಶ್ರೀಮಂತಗೊಂಡು ನಮ್ಮ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕಿಗೆ ಮೂಲ ಮಾಧ್ಯಮವಾಗಿ ನಿಲ್ಲಬೇಕು. ನೆಮ್ಮದಿ ಜೀವನಕ್ಕೆ ಮಾರ್ಗದರ್ಶಿಯಾಗಿರಬೇಕು ಎಂದು ರಾಜ್ಯ ಗ್ರಾಮೀಣಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಆಶಯ ವ್ಯಕ್ತಪಡಿಸಿದರು.
ಗದುಗಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 60ನೇ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಎಚ್.ಕೆ.ಪಾಟೀಲ್ ಅವರು, ಕನ್ನಡನಾಡಿನ ಏಕೀಕರಣಕ್ಕೂ ಮುನ್ನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿ ರಕ್ಷಣೆಗಾಗಿ ನಮ್ಮ ಹಿರಿಯರು ಹೋರಾಟ ನಡೆಸಿದ್ದರು. ಇಂದೂ ಕೂಡಾ ನಾವು ನೀರಿಗಾಗಿ ಕಾನೂನಾತ್ಮಕ ಹಾಗೂ ರಾಜಕೀಯ ಹೋರಾಟ ನಡೆಸಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.[ಕಲ್ಯಾಣ ಕರ್ನಾಟಕದಲ್ಲಿ ಕರಾಳ ದಿನ ಆಚರಣೆ]

ಗದಗ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಪರಿಹಾರಕ್ಕೆ ಜಿಲ್ಲೆಯ 324 ಗ್ರಾಮಗಳಿಗೆ ನದಿ ಮೂಲದಿಂದ ನೀರನ್ನು ಪೂರೈಸುವ 1049 ಕೋಟಿ ರೂಗಳ ಯೋಜನೆ ಕೆಲಸ ಆರಂಭವಾಗಿದೆ. ಜಿಲ್ಲೆಯಲ್ಲಿ ಒಟ್ಟು 135 ಪೈಕಿ 91 ಶುದ್ದ ಕುಡಿಯುವ ನೀರು ಪೂರೈಕೆ ಘಟಕಗಳು ಕಾರ್ಯಾರಂಭ ಮಾಡಿವೆ. ರೈತರ ಕನಸಾದ ಸಿಂಗಟಾಲೂರು ಏತ ನೀರಾವರಿ ಮೊದಲ ಹಾಗೂ ಎರಡನೇ ಹಂತದ ನೀರು ಎತ್ತುವಳಿ ಘಟಕಗಳಿಂದ ಪ್ರಾಯೋಗಿಕ ನೀರು ಪೂರೈಕೆ ಆರಂಭಗೊಂಡಿದ್ದು, ಅಂತಿಮ ಹಂತದ ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.[ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸಿದ ಪ್ರಧಾನಿ ಮೋದಿ]
ಗದಗ ಅವಳಿನಗರದ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಲಕ್ಷ್ಮೇಶ್ವರ, ನರಗುಂದ ಪಟ್ಟಣಗಳ ಒಳಚರಂಡಿ ಕಾರ್ಯ ಹಾಗೂ ರೋಣ ನಗರದ ನೀರು ಪೂರೈಕೆ ಯೋಜನೆ ಪೂರ್ಣಗೊಂಡಿವೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮೀಣ ಜನರ ಅವಶ್ಯಕತೆಗಳನ್ನು ಪೂರೈಸುವ 21 ಅಂಶದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಗ್ರಾಮವಿಕಾಸ ಯೋಜನೆಯನ್ನು ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾರಂಭಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ನಾಡಿನ ಏಕೀಕರಣಕ್ಕೆ ಶ್ರಮಿಸಿದ ಆಲೂರು ವೆಂಕಟರಾಯರು, ಹುಯಿಲಗೋಳ ನಾರಾಯಣರಾಯರು, ಅಂದಾನೆಪ್ಪ ದೊಡ್ಡಮೇಟಿ, ಶಾಂತಪ್ಪಣ್ಣ ಯಳಮಲಿ, ಬಸರೀಗಿಡದ ವೀರಪ್ಪನವರನ್ನು ಸ್ಮರಿಸಿದ ಪಾಟೀಲ್ ಅವರು ಹಲವಾರು ಐತಿಹಾಸಿಕ ತಾಣ ಹೊಂದಿರುವ ಗದಗ ಮತೀಯ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಹಿಂದು ಮತ್ತು ಮುಸ್ಲಿಂ ಪ್ರಾರ್ಥನಾ ಸ್ಥಳಗಳಿಗೆ ಒಂದೇ ಟ್ರಸ್ಟ್ ಇದೆ. ಸಂಗೀತ, ಸಾಹಿತ್ಯ, ನಾಟಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಇದು ಹಲವಾರು ಕವಿಪುಂಗವರನ್ನು ಹೊಂದಿದೆ ಎಂದು ಗದಗ ಜಿಲ್ಲೆಯ ವೈಶಿಷ್ಟ್ಯತೆ ಅಭಿಮಾನದ ನುಡಿಗಳಾಡಿದರು.












Click it and Unblock the Notifications