Ganesh Chaturthi 2024 Holiday: ಹೆಚ್ಚಿನ ಪ್ರಯಾಣ ದರ ವಿಧಿಸುವ ಮುನ್ನ ಹುಷಾರ್..! ಖಾಸಗಿ ಬಸ್ಗಳ ಮೇಲೆ ಆರ್ಟಿಓ ನಿಗಾ
ಬೆಂಗಳೂರು ಸೆಪ್ಟೆಂಬರ್ 6: ಗಣೇಶ ಚತುರ್ಥಿ ಹಬ್ಬ ಹಾಗೂ ವಾರಾಂತ್ಯವಾಗಿರುವುದರಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಬೆಂಗಳೂರಿನ ಮೆಜೆಸ್ಟಿಕ್ ಫುಲ್ ರೆಶ್ ಆಗಿದೆ. ತಮ್ಮ ಊರುಗಳತ್ತ ತೆರಳಲು ಜನ ಸಾಗರವೇ ಮೆಜೆಸ್ಟಿಕ್ನಲ್ಲಿ ಸೇರಿದೆ. ಇದರಿಂದ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದರೂ ಸಾಕಾಗುತ್ತಿಲ್ಲ. ಇದೇ ಸಮಯವನ್ನು ಬಂಡವಾಳವನ್ನಾಗಿಸಿಕೊಂಡ ಖಾಸಗಿ ಬಸ್ಗಳು ಪ್ರಯಾಣ ದರವನ್ನು ದುಪ್ಪಟ್ಟು ಮಾಡಿವೆ. ಇದರಿಂದಾಗಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಇದನ್ನು ತಪ್ಪಿಸಲು ಆರ್ಟಿಓ ಮುಂದಾಗಿದೆ.
ಹೌದು... ಹಬ್ಬದಿಂದಾಗಿ ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾಗುವುದರಿಂದ ಕೆಎಸ್ಆರ್ಟಿಸಿ 1500 ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ ಮಾಡಿದೆ. ಅದಾಗ್ಯೂ ಬಸ್ಗಳು ಸಾಕಾಗುತ್ತಿಲ್ಲ. ಇದರಿಂದ ಖಾಸಗಿ ಬಸ್ಗಳು ಹೆಚ್ಚಿನ ದರವನ್ನು ನಿಗದಿ ಮಾಡಿವೆ. ಇದಕ್ಕೆ ಬ್ರೇಕ್ ಹಾಕಲು ಆರ್ಟಿಓ ಮುಂದಾಗಿದ್ದು ರಾಜ್ಯಾದ್ಯಂತ ಇಂದು ಮತ್ತು ನಾಳೆ ಕಾರ್ಯಚರಣೆಗೆ ಮುಂದಾಗಿದೆ.

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಆದೇಶದ ಮೇರೆಗೆ ಆರ್ಟಿಓ ಅಧಿಕಾರಿಗಳು ಖಾಸಗಿ ಬಸ್ಗಳ ಮೇಲೆ ನಿಗಾ ಇಡಲಿದ್ದಾರೆ. ಬಸ್ ಬುಕ್ಕಿಂಗ್ ಶೀಟ್ ಪರಿಶೀಲನೆ ಮಾಡಿ ಹೆಚ್ಚಿನ ಪ್ರಯಾಣ ದರ ಕಂಡು ಬಂದರೆ ಕ್ರಮ ವಿಧಿಸಲಿದ್ದಾರೆ. ಇದಕ್ಕಾಗಿ ಸ್ವತ: ಸಾರಿಗೆ ಇಲಾಖೆ ಅಪರ ಆಯುಕ್ತ ಮಲ್ಲಿಕಾರ್ಜುನ ನೇತೃತ್ವದಲ್ಲಿ ಕಾರ್ಯಚರಣೆ ನಡೆಯಲಿದೆ.
ಖಾಸಗಿ ಬಸ್ಗಳು ಸುಲಿಗೆ ಮಾಡುತ್ತಿರುವುದು ಕಂಡು ಬಂದರೆ ಅಂಥಹ ಬಸ್ಗಳನ್ನು ಬ್ಲಾಕ್ ಲಿಸ್ಟ್, ಪರ್ಮಿಟ್ ರದ್ದಿಗೆ ಸೂಚನೆ ನೀಡಲಾಗಿದೆ. ಎರಡು ದಿನಗಳ ಕಾಲ ರಾತ್ರಿಯಿಡೀ ಕಾರ್ಯಚರಣೆ ನಡೆಯಲಿದ್ದು ಈ ಮೂಲಕ ಖಾಸಗಿ ಬಸ್ಗಳ ಸುಲಿಗೆಗೆ ಬ್ರೇಕ್ ಹಾಕಲಾಗುತ್ತಿದೆ. ನಗರದ ಗೊರಗುಂಟೆಪಾಳ್ಯ, ಹೆಬ್ಬಾಳ, ಕೆಂಗೇರಿ, ಹೂಸೂರು, ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಕೆ.ಆರ್.ಪುರಂ, ಮಡಿವಾಳ್ ಸೇರಿದಂತೆ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಲಾಗುತ್ತಿದೆ.
ಗಣೇಶ ಹಬ್ಬಕ್ಕೆ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 5 ರಿಂದ 7ರವರೆಗೆ ಬೆಂಗಳೂರಿನಿಂದ ರಾಜ್ಯ ಮತ್ತು ಹೊರರಾಜ್ಯದ ನಾನಾ ಪ್ರದೇಶಗಳಿಗೆ 1,500 ಹೆಚ್ಚುವರಿ ಬಸ್ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.

ಅಲ್ಲದೆ ಸೆಪ್ಟೆಂಬರ್ 8ರಂದು ರಾಜ್ಯ ಮತ್ತು ಹೊರರಾಜ್ಯದ ನಾನಾ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ಗಳನ್ನು ಬಿಡಲು ನಿರ್ಧರಿಸಲಾಗಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮನವಿ ಮಾಡಿದೆ. ಬೆಂಗಳೂರಿನ ಮೆಜೆಸ್ಟಿಕ್ನಿಂದ ಶಿವಮೊಗ್ಗ, ಶೃಂಗೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಮಂಗಳೂರು, ಕುಂದಾಪುರ, ಹೊರನಾಡು, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, , ಹೈದರಾಬಾದ್ನತ್ತ ಬಸ್ಗಳು ತೆರಳಲಿವೆ.
ವಿನಾಯಕ ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 220 ಹೆಚ್ಚುವರಿ ವಿಶೇಷ ಸಾರಿಗೆ ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.












Click it and Unblock the Notifications