ಕರ್ನಾಟಕ: ಆರ್ಟಿ-ಪಿಸಿಆರ್ ಪರೀಕ್ಷಾ ವರದಿ ವಿಳಂಬವೇ ದೊಡ್ಡ ತಲೆನೋವು
ಬೆಂಗಳೂರು, ಏಪ್ರಿಲ್ 6: ರಾಜ್ಯಾದ್ಯಂತ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಜತೆಗೆ ಆರ್ಟಿ-ಪಿಸಿಆರ್ ಪರೀಕ್ಷಾ ವರದಿ ವಿಳಂಬವಾಗುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.
ಈ ಮೊದಲು 24 ರಿಂದ 48 ಗಂಟೆಗಳೊಳಗೆ ಬರುತ್ತಿದ್ದ ಪರೀಕ್ಷೆ ವರದಿಗಳು ಇದೀಗ 3 ದಿನಗಳಾದರೂ ಅಧಿಕಾರಿಗಳ ಕೈ ಸೇರುತ್ತಿಲ್ಲ. ಇದು ಸೋಂಕಿತರು ಮತ್ತು ಅವರ ಸಂಪರ್ಕದಲ್ಲಿದ್ದವರ ಪತ್ತೆ ಮಾಡುವ ಪ್ರಕ್ರಿಯೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.
ಈ ಅವಧಿಯಲ್ಲಿ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಸೋಂಕಿತರನ್ನು ಮತ್ತು ಅವರ ಸಂಪರ್ಕಿತರನ್ನು ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ನೀಡಿದರೆ ಖಂಡಿತ ಸೋಂಕು ಹರಡದಂತೆ ನಿಯಂತ್ರಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಈ ಆರ್ ಟಿ ಪಿಸಿಆರ್ ಟೆಸ್ಟ್ ನ ವರದಿ ಎಷ್ಟು ಬೇಗ ಬರುತ್ತದೆಯೋ ಅಷ್ಟು ಬೇಗ ಸೋಂಕಿತರನ್ನು ಮತ್ತು ಅವರ ಸಂಪರ್ಕಿತರನ್ನು ಪತ್ತೆ ಮಾಡುವ ಸಮಯವನ್ನು ಅಮೂಲ್ಯ ಸಮಯ ಎಂದು ಕರೆಯಲಾಗುತ್ತದೆ.
ಈ ಬಗ್ಗೆ ಮಾತನಾಡಿರುವ ಹಿರಿಯ ಸರ್ಕಾರಿ ವೈದ್ಯರೊಬ್ಬರು, 'ಈಗ, ಆರ್ ಟಿ ಪಿಸಿಆರ್ ಪರೀಕ್ಷಾ ವರದಿಗಳು ಮೂರು ದಿನಗಳ ಬಳಿಕವೇ ತಮ್ಮನ್ನು ತಲುಪುತ್ತಿವೆ. ಕೆಲವು ಜಿಲ್ಲೆಗಳಲ್ಲಿ, ನಾಲ್ಕು ದಿನಗಳ ನಂತರ ಫಲಿತಾಂಶಗಳು ಬರುತ್ತವೆ. ಇದು ಹೀಗೆ ತಡವಾಗಬಾರದು ಎಂದು ಹೇಳಿದ್ದಾರೆ.
ಪ್ರಕರಣಗಳಲ್ಲಿ ಹಠಾತ್ ಏರಿಕೆ ಮತ್ತು ಅನೇಕ ಚಟುವಟಿಕೆಗಳಿಗೆ ಕಡ್ಡಾಯ ವರದಿಯು ಹಿನ್ನಡೆಗೆ ಕಾರಣವಾಗಿದೆ. ಸಂಗ್ರಹಿಸಲಾಗುತ್ತಿರುವ ಮಾದರಿಗಳ ಸಂಖ್ಯೆ ಹೆಚ್ಚಾಗಿದೆ.
ಆದರೆ ಸೂಕ್ಷ್ಮ ಜೀವಶಾಸ್ತ್ರಜ್ಞರು ಮತ್ತು ತಂತ್ರಜ್ಞರ ಸಂಖ್ಯೆ ಮಾತ್ರ ಅಷ್ಟೇ ಇದೆ. ಮೊದಲ ಅಲೆಯ ಬಳಿಕವೂ ನಾವು ಏನನ್ನೂ ಕಲಿತಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕ ಆರೋಗ್ಯ ತಜ್ಞರು ಹೇಳಿದ್ದಾರೆ.
ಕರ್ನಾಟಕದಲ್ಲಿ ದಿನಕ್ಕೆ ಸುಮಾರು ಒಂದು ಲಕ್ಷ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.












Click it and Unblock the Notifications