ಬೆಂಗಳೂರಿನಲ್ಲಿ ಆರ್ಎಸ್ಎಸ್ ಚಿಂತನ ಶಿಬಿರ ಆರಂಭ: 2023ರ ಚುನಾವಣೆ ಮೇಲೆ ಕಣ್ಣು
ಬೆಂಗಳೂರು,ಜು.14: 2023 ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಆಯೋಜಿಸಿರುವ ಚಿಂತನ ಶಿಬಿರ ಗುರುವಾರ ಮತ್ತು ಶುಕ್ರವಾರ (ಜು.14 ಮತ್ತು 15) ಬೆಂಗಳೂರಿನಲ್ಲಿ ನಡೆಯಲಿದೆ.
ಇದರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಕುಂದ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಆರ್ಎಸ್ಎಸ್ ನಾಯಕರು ಚಿಂತನ ಶಿಬಿರದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಎರಡು ದಿನಗಳ ಶಿಬಿರವು ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಸೈದ್ಧಾಂತಿಕವಾಗಿ ಮಾರ್ಗದರ್ಶನ ನೀಡುವ ಉದ್ದೇಶವನ್ನು ಹೊಂದಿದೆ. ಏಕೆಂದರೆ 'ಹಿಜಾಬ್' ಮತ್ತು 'ಹಲಾಲ್' ನಂತಹ ಸೂಕ್ಷ್ಮ ವಿಷಯಗಳ ಕುರಿತು ಹಿಂದಿನ ಮಾದರಿ ಸಮೀಕ್ಷೆಗಳ ಹೊರತಾಗಿಯೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ಬಗ್ಗೆ ಆರ್ಎಸ್ಎಸ್ ಚಿಂತಿಸುತ್ತಿದೆ ಎನ್ನಲಾಗಿದೆ.

ಕೇಶವಕೃಪಾದಲ್ಲಿ ನಡೆದ 45 ನಿಮಿಷಗಳ ಸಭೆ
ಬಿಜೆಪಿ ಅಧ್ಯಕ್ಷರು ಮತ್ತು ಆರ್ಎಸ್ಎಸ್ ಮುಖ್ಯಸ್ಥರಾದ ಮುಕುಂದ್ ಮತ್ತು ಸುಧೀರ್ ನಡುವೆ ಜೂನ್ 30 ರಂದು ಬೆಂಗಳೂರಿನ ಆರ್ಎಸ್ಎಸ್ ಕೇಂದ್ರ ಕಚೇರಿ ಕೇಶವಕೃಪಾದಲ್ಲಿ ನಡೆದ 45 ನಿಮಿಷಗಳ ಸಭೆಯ ನಂತರ ಈ ಪ್ರಮುಖ ಶಿಬಿರದ ಸುದ್ದಿ ಈಗ ಬಂದಿದೆ. ವಿರೋಧ ಪಕ್ಷದಿಂದ ವಿಶೇಷವಾಗಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಿರೋಧ ಪಕ್ಷದ ಮುಖ್ಯಸ್ಥ ಸಿದ್ದರಾಮಯ್ಯನವರಿಂದ ಅನೇಕ ವಾಗ್ದಾಳಿಗಳು ನಡೆದಿವೆ ಎಂದು ಸಂಘವು ಭಾವಿಸಿದ್ದು, ಇದಕ್ಕೆ ಬಿಜೆಪಿ ನಾಯಕರು ಸೂಕ್ತ ಉತ್ತರವನ್ನು ನೀಡಲು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.

2023ರ ನಿರ್ಣಾಯಕ ಚುನಾವಣೆ
ಇಲ್ಲಿ 2023ರ ನಿರ್ಣಾಯಕ ಚುನಾವಣೆಗೆ ಮುನ್ನ ಆರ್ಎಸ್ಎಸ್ ಪಕ್ಷದ ಕಾರ್ಯತಂತ್ರಗಳನ್ನು ಚರ್ಚಿಸುವ ಸಾಧ್ಯತೆಯಿದೆ. ಪಠ್ಯಪುಸ್ತಕ ಪರಿಷ್ಕರಣೆಯಿಂದ ಹಿಡಿದು ಮಂಡಳಿಗಳು ಮತ್ತು ನಿಗಮಗಳ ನೇಮಕಾತಿಯವರೆಗಿನ ವಿಷಯಗಳ ಬಗ್ಗೆ ಮಾತನಾಡಬಹುದು. ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಸರ್ಕಾರ, ಪಕ್ಷ, ನಾಯಕರು ಮತ್ತು ಆರ್ಎಸ್ಎಸ್ ಪಾತ್ರವನ್ನು ವಿಶ್ಲೇಷಿಸಲು ಸಭೆಯು ಚಿಂತನ ಮಂಥನ ಶಿಬಿರದಲ್ಲಿ ಚರ್ಚೆ ನಡೆಸಬಹುದು.

ಪಠ್ಯಪುಸ್ತಕಗಳ ಪರಿಷ್ಕರಣೆ ಕುರಿತು ಚರ್ಚೆ
ಇತ್ತೀಚೆಗೆ ಖ್ಯಾತ ಸಾಹಿತಿ ದೇವನೂರು ಮಹಾದೇವ ಅವರ ಆರ್ಎಸ್ಎಸ್ ಆಳ ಅಗಲ ಪುಸ್ತಕದ ಮಧ್ಯೆ ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯಪುಸ್ತಕಗಳ ಪರಿಷ್ಕರಣೆ ಕುರಿತು ಕ್ರಮ ಕೈಗೊಳ್ಳುವ ಬಗ್ಗೆಯೂ ಮಾತುಕತೆ ನಡೆಯಲಿದೆ. ವಿವಿಧ ಸಮಸ್ಯೆಗಳು ಮತ್ತು ಬಿಜೆಪಿ ಕಾರ್ಯಕರ್ತರ ಜವಾಬ್ದಾರಿಗಳ ಬಗ್ಗೆ ಗೊಂದಲವನ್ನು ನಿವಾರಿಸಲು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಂಘವು ಪಕ್ಷದ ಕಾರ್ಯಕರ್ತರಿಗೆ ನಿರ್ದೇಶಿಸುತ್ತದೆ ಎಂದು ತಿಳಿದು ಬಂದಿದೆ.

ರಾಷ್ಟ್ರದಲ್ಲಿ ಮತಾಂತರ ನಡೆಯುತ್ತಿದೆ: ಭಾಗವತ್
ಇದೇ ಜುಲೈ 12ರಂದು ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಚಿತ್ರದುರ್ಗಕ್ಕೆ ಭೇಟಿ ನೀಡಿ ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ್ದರು. ಈ ವೇಳೆ ಅವರು ರಾಷ್ಟ್ರದಲ್ಲಿ ಮತಾಂತರ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕು. ದೇಶದಲ್ಲಿ ಇಡೀ ಸಮಾಜ ಒಂದಾಗಿ ಒಟ್ಟಾಗಿ ಹೋಗಬೇಕು. ಏನಾದರೂ ತಪ್ಪು ದಾರಿಯಲ್ಲಿ ಹೋದರೆ ಅದನ್ನು ತಿದ್ದುವ ಕೆಲಸವನ್ನು ನಾವು ಮಾಡಬೇಕಿದೆ. ಪರಸ್ಪರ ಸಹಬಾಳ್ವೆಯಿಂದ ಬಾಳುವುದರ ಮೂಲಕ ನಮ್ಮಲ್ಲಿನ ಅಂತರ ಹೋಗಲಾಡಿಸಬೇಕಾಗಿದೆ. ಸಮಾಜವನ್ನು, ರಾಷ್ಟ್ರವನ್ನು ಕಟ್ಟುವ ಕೆಲಸವನ್ನು ನಾವು ಮಾಡಬೇಕಿದೆ ಎಂದು ಹೇಳಿದ್ದರು.












Click it and Unblock the Notifications