ಕರ್ನಾಟಕದಲ್ಲಿ ಮತ್ತೊಂದು ಹಗರಣ ಬೆಳಕಿಗೆ; 60 ಕೋಟಿ ವಂಚನೆ
ಬೆಂಗಳೂರು, ಸೆಪ್ಟೆಂಬರ್ 25 : ಐಎಂಎ ಮಾದರಿಯ ಹಗರಣವೊಂದನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಿದೆ. ಸುಮಾರು 60 ಕೋಟಿ ರೂಪಾಯಿಗಳ ವಂಚನೆ ನಡೆದಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಘೋಷಿಸಲಾಗಿದೆ.
ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕಂದಾಯ ಸಚಿವ ಆರ್. ಅಶೋಕ ಈ ಕುರಿತು ಮಾಹಿತಿ ನೀಡಿದರು.
ಯೆಲ್ಲೋ ಇಂಡಿಯಾ ಎಕ್ಸ್ಪ್ರೆಸ್, ಯೆಲ್ಲೋ ಇಂಡಿಯಾ ಫೈನಾನ್ಸ್ ಸೇರಿದಂತೆ ಹಲವು ಹೆಸರುಗಳಲ್ಲಿ ಅಮಾಯಕ ಜನರಿಂದ ಬಂಡವಾಳ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಲಾಗಿದೆ.
ನಿಮ್ಮ ಹೆಸರಿನಲ್ಲಿ ಕ್ಯಾಬ್ ನೋಂದಣಿ ಮಾಡಿಸುತ್ತೇವೆ. ಕ್ಯಾಬ್ ಖರೀದಿ ಮಾಡಿಸಲು ನಮಗೆ ಹಣ ಕೊಡಿ. ಆನಂತರ ಕ್ಯಾಬ್ ನಾವು ಬಳಸಿ ಪ್ರತಿ ತಿಂಗಳು 25 ಸಾವಿರ ರೂ. ತನಕ ಆದಾಯ ನಿಮಗೆ ಬರುವಂತೆ ಮಾಡುತ್ತೇವೆ ಎಂದು ಸುಮಾರು 2 ಸಾವಿರ ಜನರಿಂದ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದೆ.

"ಜನರು 2, 3 ಲಕ್ಷ ರೂ. ತನಕ ಹಣವನ್ನು ಹೂಡಿಕೆ ಮಾಡಿದ್ದು, ಹಣ ಹೂಡಿಕೆ ಮಾಡುವ ಮುನ್ನ ನೀಡಿದ ಭರವಸೆಯಂತೆ ಹಣ ಕಟ್ಟಿಲ್ಲ. ಕೊಡಲು ಸಾಧ್ಯವೂ ಇಲ್ಲ. ಇದೊಂದು ದೊಡ್ಡ ವಂಚನೆ ಪ್ರಕರಣವಾಗಿದ್ದು, ಸಿಐಡಿ ತನಿಖೆಗೆ ವಹಿಸಲಾಗುತ್ತದೆ" ಎಂದು ಆರ್. ಅಶೋಕ ಘೋಷಣೆ ಮಾಡಿದರು.
"ಸಂಸ್ಥೆಯವರು ಹೇಳಿದ ಪ್ರಕಾರ ಕ್ಯಾಬ್ಗಳಿಂದ ಲಾಭ ನಿರೀಕ್ಷಿಸಬಹುದು ಎನ್ನುವುದಾದರೆ ತಿಂಗಳಿಗೆ 20 ರಿಂದ 30 ಲಕ್ಷ ಲಾಭ ಮಾಡಬಹುದು. ಆದರೆ, ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಪ್ರತಿ ತಿಂಗಳು 2 ಕೋಟಿ ರೂ.ಗಿಂತ ಹೆಚ್ಚು ಹಣ ಬೇಕು" ಎಂದು ಆರ್. ಅಶೋಕ ಹೇಳಿದರು.
"ಸಂಸ್ಥೆಯಿಂದ ಜನರಿಗೆ ಹಣ ನೀಡಲು ಸಾಧ್ಯವಿಲ್ಲ. ಜನರಿಗೆ ಮೋಸವಾಗುತ್ತಿದೆ ಎಂಬ ವಿವರ ಪಡೆದ ಪೋಲೀಸರು ಈ ಕುರಿತು ತನಿಖೆ ನಡೆಸಿ ವರದಿ ನೀಡಿದ್ದಾರೆ. ಆ ವರದಿಯನ್ನು ಮುಂದಿಟ್ಟುಕೊಂಡು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ" ಎಂದು ಅಶೋಕ ಸ್ಪಷ್ಟಪಡಿಸಿದರು.
"ಇದು ಸಹ ಐಎಂಎ ಮಾದರಿಯ ಹಗರಣ. ಜನಸಾಮಾನ್ಯರು ಹಣವನ್ನು ಹೂಡಿಕೆ ಮಾಡುವ ಮುನ್ನ ಎಚ್ಚರ ವಹಿಸಬೇಕು. ಬಂಡವಾಳ ಹೂಡಿಕೆ ಮಾಡಿದ ಮೇಲೆ ಮರಳಿ ಪಡೆಯುವುದು ಕಷ್ಟದ ಕೆಲಸ" ಎಂದು ತಿಳಿಸಿದರು.












Click it and Unblock the Notifications