ಹವಮಾನ ವೈಪರಿತ್ಯದಿಂದ ದಕ್ಷಿಣಕನ್ನಡದಲ್ಲಿ 40 ಅಡಿ ಮುಂದೆ ಬಂದ ಕಡಲು
ಮಂಗಳೂರು, ಏಪ್ರಿಲ್ 23 : ಸಮುದ್ರದಲ್ಲಿ ಏಳುತ್ತಿರುವ ಅಬ್ಬರದ ಅಲೆಗಳು ಕಡಲ ಕಿನಾರೆಯ ಸುಮಾರು 40 ಅಡಿಗಳಷ್ಟು ಭೂಭಾಗ ಪ್ರದೇಶವನ್ನು ಆಕ್ರಮಿಸಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ಸಿದ್ಧಪಡಿಸಿರುವ ಇತ್ತೀಚಿನ ಬಹುಮಾದರಿ ಆಧಾರಿತ ತರಂಗ ಮುನ್ಸೂಚನಾ ವ್ಯವಸ್ಥೆಯ ಮಾಹಿತಿ ಪ್ರಕಾರ ಏಪ್ರಿಲ್ 21 ಮತ್ತು 22 ರಂದು ಪ್ರತಿ 17 -22 ಸೆಕೆಂಡ್ ಗಳಿಗೊಮ್ಮೆ 2 ರಿಂದ 3 ಮೀಟರನಷ್ಟು ಎತ್ತರ ಅಲೆಗಳು ಸಮದ್ರದಲ್ಲಿ ಏಳಲಿದ್ದು ಇದು ದಡದತ್ತ ಅಪ್ಪಳಿಸಲಿದೆ ಎಂದು ಮುನ್ಸೂಚನೆ ನೀಡಿತ್ತು.
ಹವಾಮಾನ ವೈಪರೀತ್ಯ, ಮೀನುಗಾರರ ಬದುಕಿಗೇ ಲಂಗರು!
ಅದರ ಪ್ರಕಾರ ಕರಾವಳಿಯ ಉಡುಪಿ, ಮುರ್ಡೇಶ್ವರ, ಗೋಕರ್ಣ ಪ್ರದೇಶದಲ್ಲಿ ಉತ್ತರ ಕೇರಳದ ಕಣ್ಣೂರು ಕಾಸರಗೋಡಿನಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿರುವುದು ಕಂಡು ಬಂದಿದೆ. ಈ ನಡುವೆ ದಕ್ಷಿಣಕನ್ನಡ ಜಿಲ್ಲೆಯ ಪಣಂಬೂರು, ಸಸಿಹಿತ್ಲು ಮತ್ತು ಉಡುಪಿಯ ಮಲ್ಪೆ ಬೀಚ್ ಗಳಲ್ಲಿ ಅಲೆಗಳ ಅಬ್ಬರ ಜಾಸ್ತಿಯಾಗಿತ್ತು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
40 ಅಡಿ ಭೂಭಾಗ ಆಕ್ರಮಿಸಿದ ಸಮುದ್ರ
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ವೈಫರಿತ್ಯದಿಂದಾಗಿ ಉಂಟಾಗಿರುವ ಸಮುದ್ರದ ಅಬ್ಬರದ ಅಲೆಗಳ ಪರಿಣಾಮ ಕಡಲು ತನ್ನ ಕಿನಾರೆ ಪ್ರದೇಶದ ಸುಮಾರು 40 ಅಡಿಗಳಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿದೆ. ಪಣಂಬೂರು ಕಡಲ ಕಿನಾರೆಯಲ್ಲಿ ಶನಿವಾರ ಮಧ್ಯಾಹ್ನ ಸುಮಾರು 2.30 ರಿಂದ 4.30ರ ವರೆಗೆ ಸಮುದ್ರದ ಅಲೆಗಳು ಸುಮಾರು 40 ಅಡಿಯಷ್ಟು ಭೂಭಾಗವನ್ನು ಆಕ್ರಮಿಸಿಕೊಂಡಿತ್ತು.
ಈ ಹಿನ್ನಲೆಯಲ್ಲಿ ಪಣಂಬೂರು ಬೀಚ್ ನಲ್ಲಿ ಯಾವಾಗಲೂ ನಡೆಯುತ್ತಿದ್ದ ಸ್ವೀಡ್ ಬೋಟ್ ಸಹಿತ ವಿವಿಧ ನೀರಿನಾಟಗಳಿಗೆ ಶನಿವಾರ ಬ್ರೇಕ್ ಹಾಕಲಾಗಿತ್ತು. ಇಂದು ಕೂಡ ಸಮುದ್ರದಲ್ಲಿ ಅಲೆಗಳ ಅಬ್ಬರ ಜಾಸ್ತಿಯಾಗಿತ್ತು ಎಂದು ವರದಿಯಾಗಿದೆ.
ಕಡಲಿಗೆ ಇಳಿಯಲಿಲ್ಲ...
ಉಚ್ಚಿಲ, ಸೋಮೇಶ್ವರ, ಉಡುಪಿಯ ಮಲ್ಪೆ, ಪಡುಕೆರೆ , ಕೋಡಿ, ಕನ್ಯಾನ, ಕಾಪು ಭಾಗದಲ್ಲಿ ಸಮುದ್ರದ ಅಲೆಗಳು ಪ್ರಕ್ಷುಬ್ದಗೊಂಡಿರುವುದು ಕಂಡು ಬಂದಿದೆ. ಸಮುದ್ರದ ಬೃಹತ್ ಅಲೆಗಳು ತಡೆಗೋಡೆಗೆ ಅತೀವೇಗದಲ್ಲಿ ಬಡಿಯುತ್ತಿದೆ.
ಮಂಗಳೂರಿನಲ್ಲಿ ಬಹುತೇಕ ಮೀನುಗಾರಿಕೆ ಬೋಟುಗಳು ಲಂಗರು ಹಾಕಿದ್ದು , ಜಿಲ್ಲಾಡಳಿತದ ಸೂಚನೆ ನಂತರ ಮೀನುಗಾರಿಕೆಗೆ ತೆರಳುವ ಸಾಧ್ಯತೆಯಿದೆ. ಶನಿವಾರ ಮೀನುಗಾರಿಕೆಗೆ ತೆರಳಲು ಸಿದ್ಧತೆ ನಡೆಸಿದ ಬೋಟುಗಳು ಕಡಲ ಪ್ರಕ್ಷುಬ್ದತೆಯನ್ನು ನೋಡಿ ಕಡಲಿಗೆ ಇಳಿಯಲಿಲ್ಲ.
ಸಮುದ್ರದ ಪ್ರಕ್ಷುಬ್ದತೆಗೆ ಕಾರಣ
ಸಮುದ್ರದಲ್ಲಿ ಗಾಳಿಯ ಅಲೆಗಳು ಮತ್ತು ಉಬ್ಬು ಅಲೆಗಳು ಎಂದು ಎರಡು ರೀತಿಯ ಅಲೆಗಳು ಉಂಟಾಗುತ್ತದೆ. ಸಾಧಾರಣ ಬಿರುಗಾಳಿಯಿಂದ ಸಮುದ್ರ ಅಲ್ಲೋಲ ಕಲ್ಲೋಲವಾಗುತ್ತದೆ. ಇದರ ಪರಿಣಾಮ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ಆದರೆ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರದ ಎಚ್ಚರಿಕೆ ಇರುವುದು ಮಾತ್ರ ಉಬ್ಬು ಅಲೆಗಳ ಬಗ್ಗೆ. ಇದರಿಂದಾಗಿ ಸಮುದ್ರದ ಎಲ್ಲೋ 100 ಕಿಲೋ ಮೀಟರ್ ದೂರದಲ್ಲಿ ಉಂಟಾಗಿರುವ ಬಿರುಗಾಳಿಯ ಪರಿಣಾಮ ನಮಗೆ ಇಲ್ಲಿ ಅನುಭವನಕ್ಕೆ ಬರಲಿದೆ.
ಮೀನುಗಾರಿಕೆ ತಾತ್ಕಾಲಿಕ ಸ್ಥಗಿತ
ಅಕಾಲಿಕೆ ಮಳೆ, ಸಮುದ್ರದ ಅಲೆಗಳ ಅಬ್ಬರದ ಕಾರಣದಿಂದ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆ ಸ್ಥಗಿತಗೊಂಡಿದೆ. ಕೆಲವು ದಿನಗಳಿಂದ ಇದ್ದ ಮೊಡ ಕವಿದ ವಾತಾವರಣ, ಅಕಾಲಿಕೆ ಮಳೆ, ನಡುವೆ ಸಮುದ್ರದಲ್ಲಿ ಏಳುತ್ತಿರುವ ಅಲೆಗಳ ಹಿನ್ನಲೆಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಮಾಡಿದೆ.
ಈ ನಡುವೆ ಮೀನುಗಾರಿಕೆ ಮುಗಿಸಿ ಬಂದ ಬೋಟ್ ಗಳು ಬಂದರಿ ನಲ್ಲಿ ಲಂಗರು ಹಾಕಿವೆ. ಮೀನುಗಾರಿಕೆಗೆ ತೆರಳು ಸಿದ್ದತೆ ಮಾಡಿಕೊಂಡಿದ್ದ ಬೋಟುಗಳು ವಾತಾವರಣ ಸರಿಯಾದ ಬಳಿಕವೇ ಮೀನುಗಾರಿಕೆಗೆ ತೆರಳಲು ಚಿಂತನೆ ನಡೆಸಿದೆ.