50 ರು. ಆಸೆಗಾಗಿ 12 ಲಕ್ಷ ರು ಕಳೆದುಕೊಂಡ ವಜ್ರೆ
ಬೀದರ, ನವೆಂಬರ್ 03 : 'ಸರ... ಐವತ್ತು ರುಪಾಯಿ ಬಿದ್ದೈತಿ ನೋಡ್ರೀ... ಸರ...' ಅಂತ ಪಕ್ಕದ ಬೈಕಿನಲ್ಲಿ ಬಂದವ ಹೇಳಿದ್ದನ್ನು ಕೇಳಿ ಅದನ್ನು ಎತ್ತಿಕೊಳ್ಳಲು ಹೋದವರೊಬ್ಬರು ಕಳೆದುಕೊಂಡಿದ್ದು ಎಷ್ಟು ಹಣ ಗೊತ್ತೆ? ಹನ್ನೆರಡು ಲಕ್ಷ ರುಪಾಯಿ!
ಜೀವನಪೂರ್ತಿ ದುಡಿದ ಹಣದಿಂದ ನಿವೇಶನ ಕೊಳ್ಳುವ ಕನಸು ಕಂಡಿದ್ದ ಪಾಂಡುರಂಗ ವಜ್ರೆ ಅವರೇ ಹನ್ನೆರಡು ಲಕ್ಷ ರು. ಕಳೆದುಕೊಂಡ ನತದೃಷ್ಟರು. ಅಂಬೇಡ್ಕರ್ ವೃತ್ತದಲ್ಲಿ ಇರುವ ಸ್ಟೇಲ್ ಬ್ಯಾಂಕ್ ನಿಂದ ಹಣ ಹಿಂತೆಗೆದುಕೊಂಡು ಹೊರಟಿದ್ದಾಗ ಈ ಘಟನೆ ನಡೆದಿದೆ.

ಕೆಎಸ್ಆರ್ಟಿಸಿಯಲ್ಲಿ ಉದ್ಯೋಗಿಯಾಗಿ ನಿವೃತ್ತರಾಗಿದ್ದ ಪಾಂಡುರಂಗ ವಜ್ರೆ ಅವರು ಹಣ ಹಿಂತೆಗೆದುಕೊಂಡು ಬೈಕಿನಲ್ಲಿ ಹೊರಡಲು ಅನುವಾಗುತ್ತಿದ್ದರು. ಆಷ್ಟರಲ್ಲಿ, ಪಕ್ಕದಲ್ಲಿ ಬೈಕಿನಲ್ಲಿ ಬಂದ ದುರುಳರು 50 ರು. ಬಿದ್ದಿದೆ ಎಂದು ವಜ್ರೆ ಅವರ ಗಮನವನ್ನು ಅತ್ತ ಸೆಳೆದಿದ್ದಾರೆ.
ಇದರಲ್ಲಿ ದುಷ್ಕೃತ್ಯದ ಗುಮಾನಿ ಬರದೆ ಪಾಂಡುರಂಗ ವಜ್ರೆ ಅವರು 50 ರು. ತೆಗೆದುಕೊಳ್ಳಲೆಂದು ಕೆಳಗೆ ಬಾಗಿದ್ದಾರೆ. ಅದೇ ಕ್ಷಣ ವಜ್ರೆ ಬಳಿಯಿದ್ದ ಬ್ಯಾಗನ್ನು ಕಿತ್ತುಕೊಂಡು ದುರುಳರಿಬ್ಬರು ಬೈಕಿನಲ್ಲಿ ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications