ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ: ಹಿಂದೂ ಧಾರ್ಮಿಕ ದತ್ತಿ ಕಾನೂನು ಏನು ಹೇಳುತ್ತದೆ?
ಹಿಜಾಬ್ ಎಫೆಕ್ಟ್ ಹಲವು ಆಯಾಮಗಳಲ್ಲಿ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಬಂದ್ಗೆ ಮುಸ್ಲಿಂ ಸಂಘಟನೆಗಳು ಕರೆ ನೀಡಿದ ಸಂದರ್ಭದಲ್ಲಿ ಅದಕ್ಕೆ ಬೆಂಬಲ ನೀಡಿದ ವಿಚಾರ ಈಗ ಇನ್ನೊಂದು ಸಂಘರ್ಷಕ್ಕೆ ನಾಂದಿ ಹಾಡಿದೆ.
ನಮ್ಮ ನೆಲದ ಕಾನೂನಿಗೆ ಗೌರವ ನೀಡದವರು ಹಿಂದೂಗಳ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಬಾರದು ಎಂದು ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ಕೆಲಸ ಮೊದಲು ಉಡುಪಿಯಲ್ಲಿ ಆರಂಭವಾಯಿತು. ಇದು ನಂತರ ದಕ್ಷಿಣ ಕನ್ನಡದ ಕೆಲವು ದೇವಾಲಯಗಳಿಗೂ ವ್ಯಾಪಿಸಿತು.
ಅಷ್ಟೇ ಅಲ್ಲದೇ, ಶಿರಸಿಯ ಇತಿಹಾಸ ಪ್ರಸಿದ್ದ ಮಾರಿಕಾಂಬ ಜಾತ್ರೆಯಲ್ಲೂ ಇದು ಮಾರ್ದನಿಸಿದೆ. ನೆಲಮಂಗಲದಲ್ಲಿ ನಡೆಯುವ ಉತ್ಸವದ ವೇಳೆಯೂ ಹಿಂದುಯೇತರರಿಗೆ ಅವಕಾಶ ನೀಡಬಾರದು ಎನ್ನುವ ಕೂಗು ಹಿಂದೂ ಸಂಘಟನೆಗಳಿಂದ ಕೇಳಿ ಬರುತ್ತಿದೆ.
ಹಿಂದುಯೇತರರಿಗೆ ಅವಕಾಶ ನೀಡಬಾರದು ಎಂದು ಧಾರ್ಮಿಕ ದತ್ತಿ ಕಾನೂನಿನಲ್ಲೇ ಇದೆ ಎನ್ನುವುದು ಕೆಲವರ ವಾದ. ಇದೇ ಅಂಶವನ್ನು ಇಟ್ಟುಕೊಂಡು, ಉಡುಪಿ ಕಾಪು ಸುಗ್ಗಿ ಮಾರಿಜಾತ್ರೆಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿಲ್ಲ ಎನ್ನುವುದು ಅಲ್ಲಿಯವರ ವಾದ. ಹಾಗಾದರೆ, ಕಾನೂನು ಏನು ಹೇಳುತ್ತದೆ?
Recommended Video

ಉಡುಪಿ ಜಿಲ್ಲೆಯ ಕಾಪು ಸುಗ್ಗಿ ಮಾರಿಪೂಜೆ
ಹಿಂದೂ ಜಾತ್ರಾ ಮಹೋತ್ಸವದಲ್ಲಿ ಅವಕಾಶ ನೀಡಬೇಕೆಂದು ಕೆಲವು ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ. ಇನ್ನೊಂದು ಕಡೆ, ಒಂದು ದಿನದ ವ್ಯಾಪಾರವನ್ನು ನಂಬಿಕೊಂಡು ನಾವು ಬದುಕಿಲ್ಲ. ನಾವು ನಿಷೇಧ ಹೇರಿದರೆ, ಹಿಂದೂಗಳ ಆರ್ಥಿಕ ಪರಿಸ್ಥಿತಿಗೆ ತೊಂದರೆಯಾಗುತ್ತದೆ ಎನ್ನುವ ಪ್ರತಿಕ್ರಿಯೆಯೂ ಆ ಸಮುದಾಯದ ಮುಖಂಡರಿಂದ ಬರುತ್ತಿದೆ. ಈ ಹಿಂದೆ, ಹಿಂದೂ ಮಹಿಳೆಯರಿಂದ ಮೀನು ಖರೀದಿಸುವುದನ್ನು ಮುಸ್ಲಿಮರು ನಿಷೇಧಿಸಿದ್ದರು. ಈಗ, ಹಿಂದೂಗಳು ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸಿದ್ದಾರೆ. ಉಡುಪಿ ಜಿಲ್ಲಾ ಕಾಪು ಪುರಸಭೆಯ ಸದಸ್ಯರೊಬ್ಬರು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ, ಇದು ನಮ್ಮ ಕಾನೂನು ಪ್ರಕಾರ ಎಂದು ಹೇಳಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮ
2002ರಲ್ಲಿ ರೂಪಿಸಲಾದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಯ ನಿಯಮ ಏನು ಹೇಳುತ್ತದೆ? ನಿಯಮಾವಳಿ ಪುಸ್ತಕದ ಪುಟ ಸಂಖ್ಯೆ 446ರಲ್ಲಿರುವ 12 ನಿಯಮವನ್ನು ಉಲ್ಲೇಖಿಸುವುದಾದರೆ, ಹಿಂದೂಯೇತರರಿಗೆ ಗುತ್ತಿಗೆ ನೀಡುವಂತಿಲ್ಲ ಎನ್ನುವುದು ಅದರ ಸ್ಪಷ್ಟವಾಗಿ ಹೇಳಲಾಗಿದೆ. ಈಗ, ಇದನ್ನೇ ಆಧಾರವಾಗಿ ಇಟ್ಟುಕೊಂಡು, ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದೇ ಇರುವುದು ಕಾನೂನು ಪ್ರಕಾರವೇ ಎಂದು ಸಮರ್ಥಿಸಿಕೊಳ್ಳಲಾಗುತ್ತಿದೆ.

ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ನೀಡತಕ್ಕದಲ್ಲ
ಧರ್ಮಾದಾಯ ದತ್ತಿ ನಿಯಮದ ಪ್ರಕಾರ, 'ಸಂಸ್ಥೆಯ ಸಮೀಪದ ಜಮೀನು ಕಟ್ಟಡ ಅಥವಾ ನಿವೇಶನಗಳೂ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆಗೆ ನೀಡತಕ್ಕದ್ದಲ್ಲ'ಎಂದು ಉಲ್ಲೇಖಿಸಲಾಗಿದೆ. ಇದರ ಜೊತೆಗೆ, 'ಗುತ್ತಿಗೆಗೆ ನೀಡಿದ ಸ್ವತ್ತನ್ನು ಗುತ್ತಿಗೆ ಅವಧಿಯಲ್ಲಿ ಒಳಗೇಣಿಗೆ ಅವಕಾಶವಿರತಕ್ಕದಲ್ಲ' ಎಂದೂ ಹೇಳಲಾಗಿದೆ. ಅಂದರೆ, ಒಂದು ವೇಳೆ ಗುತ್ತಿಗೆ ಪಡೆದವನು ಇನ್ನೊಬ್ಬರಿಗೆ ಇದನ್ನು ವರ್ಗಾಯಿಸುವಂತಿಲ್ಲ ಎಂದೂ ಹೇಳಲಾಗಿದೆ.

ಉಡುಪಿ ಕಾಪು ಮಾರಿಗುಡಿ ದೇವಾಲಯದ ಆಡಳಿತ ಮಂಡಳಿ
ಈ ಕಾನೂನಿನ ಪ್ರಕಾರ, 'ಗುತ್ತಿಗೆದಾರನು, ದೇವಸ್ಥಾನದ ಭಕ್ತವೃಂದದ ಭಾವನೆಗಳಿಗೆ ನೋವುಂಟಾಗಬಹುದಾದ ಅಥವಾ ಆವರಣದ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡಬಹುದಾದ ಯಾವುದೇ ವ್ಯವಹಾರವನ್ನು ನಡೆಸತಕ್ಕದಲ್ಲ. ಗುತ್ತಿಗೆ ಪಡೆಯಲಾದ ಸ್ವತ್ತಿನಲ್ಲಿ ಬಾರ್, ಮಾಂಸಾಹಾರ, ಮದ್ಯ, ಮಾದಕ ಪಾನೀಯಗಳ ಅಂಗಡಿಯನ್ನು ಇಡುವಂತಿಲ್ಲ'ಎಂದು ಹೇಳಲಾಗಿದೆ. ಇದನ್ನೆಲ್ಲಾ, ಆಧರಿಸಿ, ನಾವು ಕಾನೂನು ಪ್ರಕಾರವೇ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಉಡುಪಿ ಕಾಪು ಮಾರಿಗುಡಿ ದೇವಾಲಯದ ಆಡಳಿತ ಮಂಡಳಿ ಹೇಳಿದೆ. ಈ ದೇವಾಲಯ, ರಾಜ್ಯ ಮುಜರಾಯಿ ವ್ಯಾಪ್ತಿಗೆ ಬರುವಂತಹ ದೇವಸ್ಥಾನವಾಗಿದೆ. ಈ ಎಲ್ಲಾ ವಿದ್ಯಮಾನಗಳು ಮುಂದೆ ಯಾವಯಾವ ರೀತಿಯಲ್ಲಿ ತಿರುವನ್ನು ಪಡೆದುಕೊಳ್ಳುತ್ತದೆ ಎನ್ನುವುದು ಗಂಭೀರ ಪ್ರಶ್ನೆಯಾಗಿದೆ.












Click it and Unblock the Notifications