ಮಹಾ ಪ್ರವಾಹ : 3 ಸಾವಿರ ಕೋಟಿ ತುರ್ತು ನೆರವಿಗೆ ಕೇಂದ್ರಕ್ಕೆ ಮನವಿ
Recommended Video
ಬೆಂಗಳೂರು, ಆಗಸ್ಟ್ 12 : ಕರ್ನಾಟಕದ 17 ಜಿಲ್ಲೆಗಳ 80 ತಾಲೂಕುಗಳಲ್ಲಿ ಪ್ರವಾಹದಿಂದಾಗಿ ಅಪಾರವಾದ ಹಾನಿಯಾಗಿದೆ. ಕರ್ನಾಟಕ ಸರ್ಕಾರ ತುರ್ತಾಗಿ 3 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಈ ಕುರಿತು ಮಾಹಿತಿ ನೀಡಿದರು. "ಎಲ್ಲಾ ಜಿಲ್ಲೆಗಳು ಸೇರಿ ಸುಮಾರು 40 -50 ಸಾವಿರ ಕೋಟಿ ರೂ. ನಷ್ಟವಾಗಿದೆ" ಎಂದು ಹೇಳಿದರು.
"ತಕ್ಷಣಕ್ಕೆ 3 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಬಂದು ಹೋಗಿರುವ ಕಾರಣ ಹೆಚ್ಚಿನ ನೆರವು ಪಡೆಯಲು ಸಹಕಾರಿಯಾಗಲಿದೆ" ಎಂದರು.

"ಸೋಮವಾರ ಪ್ರವಾಹ ಪೀಡಿತ ಮಂಗಳೂರು, ಮೈಸೂರು, ನಂಜನಗೂಡಿನಲ್ಲಿ ಪ್ರವಾಸ ಮಾಡಲಿದ್ದೇನೆ. ಮಂಗಳವಾರ ಶಿವಮೊಗ್ಗ ಸೇರಿದಂತೆ ಇತರ ಕಡೆ ಪ್ರವಾಸ ಕೈಗೊಂಡು ಪ್ರವಾಹದಿಂದ ಆದ ಹಾನಿಯ ಬಗ್ಗೆ ಪರಿಶೀಲನೆ ನಡೆಸುತ್ತೇನೆ" ಎಂದು ಯಡಿಯೂರಪ್ಪ ತಿಳಿಸಿದರು.
"ಪರಿಹಾರ ಕಾರ್ಯದಲ್ಲಿ ದೇವೇಗೌಡರು, ಸಿದ್ಧರಾಮಯ್ಯ ಮತ್ತು ಕುಮಾರಸ್ವಾಮಿ ಪೂರ್ಣ ಸಹಕಾರ ಕೊಟ್ಟಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ. ಬಹಳಷ್ಟು ಪರಿಹಾರ ಸಾಮಾಗ್ರಿ ಕೊಡುವ ದಾನಿಗಳನ್ನು ನೆರೆ ಪೀಡಿತ ಪ್ರದೇಶಗಳಿಗೆ ಕಳುಹಿಸುತ್ತಿದ್ದೇನೆ" ಎಂದು ಹೇಳಿದರು.
"ದಾನಿಗಳು ನೀಡಿದ್ದನ್ನು ಒಂದು ಕಡೆ ಸಂಗ್ರಹಿಸಿ ಸಂತ್ರಸ್ಥರು ಮನೆಗೆ ಹೋಗುವಾಗ ಅವರಿಗೆ ಕೊಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆಗಸ್ಟ್ 16ರಂದು ದೆಹಲಿಗೆ ಭೇಟಿ ನೀಡಲಿದ್ದು, ಆಗ ಅನುದಾನ ನೀಡುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಮಾಡಲಿದ್ದೇನೆ" ಎಂದರು.












Click it and Unblock the Notifications