ಪ್ರಿಯಾಂಕ್ ಖರ್ಗೆ ಸಂಪುಟದಿಂದ ವಜಾ ಮಾಡಲು ರಾಹುಲ್ ಗಾಂಧಿಗೆ...
ಬೆಂಗಳೂರು, ಜನವರಿ 02: ಪ್ರಿಯಾಂಕ್ ಖರ್ಗೆ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾ ಮಾಡಲು ಮುಖ್ಯಮಂತ್ರಿ, ಖರ್ಗೆಜೀ, ರಾಹುಲ್ ಗಾಂಧಿ ಅವರನ್ನು ಮನವಿ ಮಾಡುವುದಾಗಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ಸಚಿನ್ ಡೆತ್ ನೋಟ್ ಪ್ರದರ್ಶಿಸಿದರು. ಖರ್ಗೆಜೀ ಎಂದರೆ ಮಲ್ಲಿಕಾರ್ಜುನ ಖರ್ಗೆಯವರು. ಪ್ರಿಯಾಂಕ್ ಖರ್ಗೆ ಅಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಸಚಿನ್ ಡೆತ್ ನೋಟಿನಲ್ಲಿ ಎಲ್ಲ ವಿವರ ಬಂದಿದೆ. ಇದಕ್ಕೆ ಸರಕಾರ ಉತ್ತರಿಸಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸ ಮಾಡದಿರಿ ಎಂದು ಎಚ್ಚರಿಸಿದರು. ಒಬ್ಬರು ಜೀವತ್ಯಾಗ ಮಾಡಿದ್ದು, ಅವರಿಗೆ ಬೆದರಿಕೆ ಹಾಕಿರುವಾಗ ಅವರಿಗೆ ನ್ಯಾಯ ಬೇಕೇ ಬೇಡವೇ? ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲಿ ಎಂದು ಆಗ್ರಹಿಸಿದರು. ಸಿದ್ದರಾಮಯ್ಯನವರ ಸರಕಾರ ತಪ್ಪು ಮಾಡಿದವರನ್ನು ರಕ್ಷಿಸುತ್ತಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು.

ಪ್ರಿಯಾಂಕ್ ಖರ್ಗೆ ಪರವಾಗಿ ದೆಹಲಿಯಿಂದ ಫೋನ್ ಕರೆಗಳು ಬರುತ್ತಿವೆ. ಅವರ ಪರವಾಗಿ 3 ಜನರು ಮಾತನಾಡಿದ್ದಾರೆ. ಒಂದನೆಯದಾಗಿ ಮುಖ್ಯಮಂತ್ರಿಗಳು ಮಾತನಾಡಿದ್ದು, ಅವರು ಮಾತನಾಡದೆ ಇದ್ದರೆ ಅವರ ಸಿಎಂ ಸ್ಥಾನ ಇರುತ್ತದೆಯೇ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯನವರು ಯಾವ ರೀತಿ ತೊಂದರೆಯಲ್ಲಿದ್ದಾರೆ ಎಂಬುದು ನಮಗೂ ಗೊತ್ತಾಗುತ್ತದೆ. ಉಪ ಮುಖ್ಯಮಂತ್ರಿಗಳು ಮುಂದೆ ಆ ಸ್ಥಾನಕ್ಕೆ ಬರಬೇಕಿದ್ದು ಯಾರನ್ನು ಓಲೈಸಬೇಕೋ ಅದನ್ನು ಮಾಡುತ್ತಿದ್ದಾರೆ. ಗೃಹ ಸಚಿವರಿಗೆ ಇದು ಇಲಾಖೆ ವಿಷಯ. ಇವರು ಮೂವರು ಬಿಟ್ಟರೆ ಇನ್ಯಾರೂ ಮಾತನಾಡಿಲ್ಲ ಎಂದು ತಿಳಿಸಿದರು.
ಯಾಕೆ ನೀವೆಲ್ಲ ಸಚಿವರು ಮಾತನಾಡುತ್ತಿಲ್ಲ ಎಂದು ಉಳಿದ ಸಚಿವರನ್ನು ಮೇಲಿಂದ ಕೇಳುತ್ತಿದ್ದಾರೆ. ಅಂದರೆ ದೆಹಲಿಯಿಂದ ಒತ್ತಡ ಬರುತ್ತಿದೆ ಎಂದು ಹೇಳಿದರು. ಸಚಿನ್ ಪಾಂಚಾಳ ಡೆತ್ ನೋಟ್ ಸತ್ಯದ ಕೈಗನ್ನಡಿಯ ಹಾಗಿದೆ. ಅದೇ ಕಾರಣಕ್ಕಾಗಿ ಇತರ ಸಚಿವರು ಮಾತನಾಡುತ್ತಿಲ್ಲ. ಪದೇಪದೇ ದಲಿತರ ಹೆಸರು ಹೇಳುತ್ತೀರಿ. ಮೂರು ಸಾರಿ ಗೆದ್ದು ಬಿಟ್ಟಿದ್ದಾರಂತೆ ಅವರು. 3 ಸಾರಿಯೂ ಮಂತ್ರಿ ಆಗಿದ್ದಾರಂತೆ. 3 ಸಾರಿ ಗೆದ್ದವರು ಕಾಂಗ್ರೆಸ್ಸಿನಲ್ಲಿ ಬೇರೆ ಯಾರೂ ಉಳಿದೇ ಇಲ್ಲವೇ? ಎಂದು ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
3 ಸಾರಿ ಗೆದ್ದು ನರೇಂದ್ರಸ್ವಾಮಿ ಯಾಕೆ ಮಂತ್ರಿಯಾಗಿಲ್ಲ? ಎಸ್.ಎನ್. ನಾರಾಯಣಸ್ವಾಮಿ ಮೂರು ಸಾರಿ ಗೆದ್ದಿದ್ದಾರೆ. ಯಾಕೆ ಅವರು ಮಂತ್ರಿಯಾಗಿಲ್ಲ? 3 ಸಾರಿ ಗೆದ್ದು ಪ್ರಸಾದ್ ಅಬ್ಬಯ್ಯ ಯಾಕೆ ಮಂತ್ರಿಯಾಗಿಲ್ಲ? ಅಜಯ್ ಸಿಂಗ್ (ಧರಂಸಿಂಗ್ ಅವರ ಪುತ್ರ) 3 ಸಾರಿ ಗೆದ್ದರೂ ಯಾಕೆ ಮಂತ್ರಿಯಾಗಿಲ್ಲ? ನೀವು ಮಾತ್ರ ಯಾಕಾಗಿದ್ದೀರಿ? ಇವರೆಲ್ಲರ ಸಮಾಧಿ ಕಟ್ಟಿ ನೀವು ಆಗಿರುವುದಲ್ಲವೇ ಎಂದು ಕೇಳಿದರು.
ಬಹಳ ಹೋರಾಟ ಮಾಡಿದವರಂತೆ ಮಾತನಾಡುವ ಪ್ರಿಯಾಂಕ್ ಖರ್ಗೆಯವರೇ ನೀವು ಯಾವ್ಯಾವ ಊರಲ್ಲಿ ಹೋರಾಟ ಮಾಡಿದ್ದೀರೆಂದು ಹೇಳಿ ನೋಡೋಣ ಎಂದು ಕೇಳಿದರು. ನಮ್ಮ ಇಡೀ ಜೀವನವೇ ಹೋರಾಟದ್ದು. ಅದಕ್ಕೇ ನನ್ನ ಹೆಸರೇ ಛಲವಾದಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.












Click it and Unblock the Notifications