ಚಿತ್ರದುರ್ಗ-ಆಲಮಟ್ಟಿ ಹೊಸ ರೈಲು ಮಾರ್ಗ ಬಜೆಟ್ನಲ್ಲಿ ಸೇರಿಸಲು ಮನವಿ
ಬೆಂಗಳೂರು, ಅಕ್ಟೋಬರ್ 21; ಚಿತ್ರದುರ್ಗ-ಆಲಮಟ್ಟಿ ಹೊಸ ರೈಲು ಮಾರ್ಗವನ್ನು 2023-24ರ ಬಜೆಟ್ನಲ್ಲಿ ಸೇರ್ಪಡೆ ಮಾಡಿ, ಅನುದಾನ ಬಿಡುಗಡೆ ಮಾಡಬೇಕು ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದರು.
ಕರಡಿ ಸಂಗಣ್ಣ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಚಿತ್ರದುರ್ಗ-ಆಲಮಟ್ಟಿ ಹೊಸ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದೆ, ರೈಲ್ವೆ ಇಲಾಖೆಗೆ ಸಮೀಕ್ಷೆ ವರದಿ ಸಲ್ಲಿಕೆಯಾಗಿದೆ.
2018ರಲ್ಲಿ ಕೇಂದ್ರ ಸರ್ಕಾರ ಆಲಮಟ್ಟಿಯಿಂದ ಚಿತ್ರದುರ್ಗದವರೆಗೆ ಸುಮಾರು 279.94 ಕಿ. ಮೀ. ನೂತನ ರೈಲು ಮಾರ್ಗದ ಸಮೀಕ್ಷೆ ಕಾರ್ಯಕ್ಕೆ ಆದೇಶ ನೀಡಲಾಗಿತ್ತು. ಅದರಂತೆ ಮುಖ್ಯ ಇಂಜಿನಿಯರ್ ನೈಋತ್ಯ ರೈಲ್ವೆ ವಿಭಾಗದ ಹುಬ್ಬಳ್ಳಿ ಇವರು 8431.44 ಕೋಟಿ ರೂ.ಗಳಿಗೆ ಅಂದಾಜು ಮೊತ್ತದ ಯೋಜನೆಯನ್ನು ತಯಾರಿಸಿ ದಿನಾಂಕ 14/10/2021ರಂದು ರೈಲ್ವೆ ಮಂಡಳಿಗೆ ಅನುಮೋದನೆಗೆ ಸಲ್ಲಿಕೆ ಮಾಡಲಾಗಿದೆ.

ಈ ರೈಲು ಮಾರ್ಗ ಕೂಡಲಸಂಗಮ, ಹುನಗುಂದ, ಕುಷ್ಟಗಿ, ಬೇವೂರ, ಇರಕಲಗಡ, ಕೊಪ್ಪಳ, ಹಿರೇಸಿಂಧೋಗಿ, ಕಾತರಕಿ, ತಮ್ರಹಳ್ಳಿ, ಆನಂದದೇವನಹಳ್ಳಿ, ಹಗರಿಬೊಮ್ಮನಹಳ್ಳಿ ಮಾರ್ಗವಾಗಿ ಚಿತ್ರದುರ್ಗ ತಲುಪಲಿದೆ.

ಸಂಸದ ಕರಡಿ ಸಂಗಣ್ಣ ಅಶ್ವಿನಿ ವೈಷ್ಣವ್ರನ್ನು ಭೇಟಿಯಾಗಿ ಈ ಹೊಸ ರೈಲಯ ಮಾರ್ಗದ ಬಗ್ಗೆ ಸಮಗ್ರವಾಗಿ ವಿವರಿಸಿ, ಸದರಿ ಈ ಯೋಜನೆಯನ್ನು 2023-2024ನೇ ಬಜೆಟ್ನಲ್ಲಿ ಘೋಷಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕೊಪ್ಪಳ ಹೊಸದಾಗಿ ಸೇರ್ಪಡೆ; ಚಿತ್ರದುರ್ಗ-ಆಲಮಟ್ಟಿ ಹೊಸ ರೈಲು ಮಾರ್ಗಕ್ಕೆ ಈ ಹಿಂದೆಯೇ ಸಮೀಕ್ಷೆ ನಡೆದಿತ್ತು. ಆದರೆ ಇದಕ್ಕೆ ಕೊಪ್ಪಳ ಜಿಲ್ಲೆ ಸೇರಿಸಿರಲಿಲ್ಲ. ಈಗ ಕೊಪ್ಪಳವನ್ನು ಸಹ ಸೇರಿಸಿ ಸಮೀಕ್ಷೆ ನಡೆಸಿ ರೈಲ್ವೆ ಮಂಡಳಿಗೆ ವರದಿ ಸಲ್ಲಿಕೆ ಮಾಡಲಾಗಿದೆ. ವರದಿಗೆ ಇಲಾಖೆ ಒಪ್ಪಿದರೆ ಹೊಸ ರೈಲು ಮಾರ್ಗ ಘೋಷಣೆಯಾಗಲಿದೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿ, "ಹೊಸ ರೈಲು ಮಾರ್ಗ ಬಹುಜನರ ಬೇಡಿಕೆಯಾಗಿತ್ತು. ಆಲಮಟ್ಟಿ-ಚಿತ್ರದುರ್ಗ ನೇರ ರೈಲು ಮಾರ್ಗಕ್ಕೆ ಕೊಪ್ಪಳವನ್ನು ಸಹ ಸೇರಿಸಲಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications