ಐ.ಟಿ. ಕ್ಷೇತ್ರ ಉದ್ಯೋಗಾರ್ಥಿಗಳಿಗೆ ಕರವೇಯಿಂದ 'ನಲ್ನುಡಿ'
ಬೆಂಗಳೂರು, ಜುಲೈ 12: ಉದ್ಯೋಗ ಅರಸಿ ಐಟಿ ಕಂಪನಿಗಳಿಗೆ ಸಂದರ್ಶನಕ್ಕೆ ಹೋಗುವ ಕನ್ನಡಿಗರಿಗೆ ತಯಾರಿ, ತರಬೇತಿ, ಮಾಹಿತಿ ನೀಡುವ ಕಾಯಕವನ್ನು ಕರ್ನಾಟಕ ರಕ್ಷಣಾ ವೇದಿಕೆ ಐಟಿ ಘಟಕ ನಡೆಸಿಕೊಂಡು ಬರುತ್ತಿದೆ. ಟಿಎ ನಾರಾಯಣ ಗೌಡರ ಆಶಯದಂತೆ ಮೂರನೇ ಉದ್ಯೋಗ ಮಾರ್ಗದರ್ಶನ ಶಿಬಿರ ಯಶಸ್ವಿಯಾಗಿ ನೆರವೇರಿದೆ.
ಭಾನುವಾರ (12 ಜುಲೈ 2015) ದಂದು ಕರ್ನಾಟಕ ರಕ್ಷಣಾ ವೇದಿಕೆಯ ಐಟಿ ಘಟಕದ ವತಿಯಿಂದ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಆಶಯದಂತೆ "ಐ.ಟಿ. ಕ್ಷೇತ್ರ"ದಲ್ಲಿ ಕೆಲಸ ಹುಡುಕುತ್ತಿರುವವರಿಗಾಗಿ ಉದ್ಯೋಗ ಮಾರ್ಗದರ್ಶನ ಶಿಬಿರವನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆಸಲಾಯಿತು.
ಬೆಳಿಗ್ಗೆ 9.30ಯಿಂದ ಮಧ್ಯಾಹ್ನ 1.00ರ ವರೆಗೂ ನಡೆದ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಭ್ಯರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡರು. ಕರವೇ ಐ.ಟಿ. ಘಟಕದ ಉಪಾಧ್ಯಕ್ಷರಾದ ಅಮರನಾಥ್ ಶಿವಶಂಕರ್ ಅವರು ನೆರೆದಿದ್ದ ಕನ್ನಡಿಗ ಉದ್ಯೋಗಾರ್ಥಿಗಳನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಉದ್ಯೋಗದ ವಿಚಾರದಲ್ಲಿ ಕರವೇ ಮಾಡಿರುವ ಹೋರಾಟಗಳು ಮತ್ತು ಕರವೇ ಐ.ಟಿ. ಘಟಕದ ಧ್ಯೇಯೋದ್ದೇಶಗಳನ್ನು ಅಮರನಾಥ್ ಹೇಳಿದರು.
ನೇಮಕಾತಿ ಹೇಗೆ ನಡೆಯುತ್ತದೆ? : ಮತ್ತೋರ್ವ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಐ.ಟಿ. ಕಂಪನಿಯೊಂದರ ಹಿರಿಯ ಅಧಿಕಾರಿಗಳು ಮಾತನಾಡಿ, ನೇಮಕಾತಿ ಮಾಡಿಕೊಳ್ಳುವಾಗ ಅಭ್ಯರ್ಥಿಗಳಿಂದ ಸಾಮಾನ್ಯವಾಗಿ ಯಾವ ಗುಣ ಮತ್ತು ಕೌಶಲ್ಯಗಳನ್ನು ಅಪೇಕ್ಷೆ ಮಾಡುತ್ತಾರೆ ಎಂದು ವಿವರಿಸಿದರು.
ಐ.ಟಿ. ಕ್ಷೇತ್ರದಲ್ಲಿರುವ ಅನೇಕ ಉಪ-ಕ್ಷೇತ್ರಗಳು, ಅಲ್ಲಿರುವ ಕಂಪನಿಗಳು, ಅಲ್ಲಿನ ಉದ್ಯೋಗಾವಕಾಶಗಳು, ಅವನ್ನು ಪಡೆಯಲು ಬೇಕಾದ ಕೌಶಲ್ಯಗಳು, ನೇಮಕಾತಿ ಪ್ರಕ್ರಿಯೆ, ಅದಕ್ಕೆ ಬೇಕಾದ ತಯಾರಿ, ಸಂದರ್ಶನ ಎದುರಿಸುವ ಬಗೆ, ಇತ್ಯಾದಿ ವಿಚಾರಗಳ ಬಗ್ಗೆ ವಿವಿಧ ಐಟಿ ಕಂಪನಿಗಳ ಹಿರಿಯ ವ್ಯವಸ್ಥಾಪಕರು ಸಲಹೆ ಸೂಚನೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ಅಭ್ಯರ್ಥಿಗಳನ್ನು ಚಿಕ್ಕ ಚಿಕ್ಕ ಗುಂಪುಗಾಳಾಗಿ ವಿಂಗಡಿಸಿ, ನೇಮಕಾತಿಯ ವೇಳೆ ಸಾಮಾನ್ಯವಾಗಿ ನಡೆಸುವ ಅಣುಕು ಗುಂಪು ಚರ್ಚೆಗಳನ್ನು ನಡೆಸಿ, ಅವನ್ನು ಸಮರ್ಥವಾಗಿ ಎದುರಿಸಲು ಅಭ್ಯರ್ಥಿಗಳಿಗೆ ಸೂಕ್ತ ಸಲಹೆಗಳನ್ನು ನೀಡಲಾಯಿತು. ಹಾಗೆಯೇ ಅಭ್ಯರ್ಥಿಗಳ ಅನುಭವಗಳನ್ನೂ ಹಂಚಿಕೊಳ್ಳುವ ಅವಕಾಶ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕರವೇ ಐ.ಟಿ. ಘಟಕದ ಪದಾಧಿಕಾರಿಗಳು ಮತ್ತು ಕೆಲವು ಐ.ಟಿ. ಕಂಪನಿಗಳ ಮುಖ್ಯಸ್ಥರೂ ಸಹ ಭಾಗಿಯಾಗಿದ್ದರು.
ಐಟಿ ಘಟಕದ ಧ್ಯೇಯೋದೇಶಗಳು:
1. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಮಾರ್ಗದರ್ಶನ ನೀಡುವುದು.
2. ಉದ್ಯೋಗಾಕಾಂಕ್ಷಿಗಳಿಗೆ ಸಹಕಾರಿಯಾಗುವಂತಹ ಉದ್ಯೋಗ ಮಾಹಿತಿ ಕೇಂದ್ರವನ್ನು ಸ್ಥಾಪಿಸುವುದು.
3. ಐಟಿ ಉದ್ಯೋಗ ಅರಸಿ ನಾಡಿಗೆ ಹಲವು ಪರಭಾಷಿಕರು ಬರುತ್ತಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಲು "ಕನ್ನಡ ಕಲಿ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಇದು ಕರ್ನಾಟಕ ರಕ್ಷಣಾ ವೇದಿಕೆಯ ಐಟಿ ಘಟಕವು ಕನ್ನಡಿಗರ ಅನುಕೂಲಕ್ಕೋಸ್ಕರ ಉಚಿತವಾಗಿ ಆಯೋಜಿಸುತ್ತಿರುವ ಶಿಬಿರವಾಗಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications