ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಡೆ ಸ್ನಾನ, ಬಿಗಿ ಬಂದೋಬಸ್ತ್
ಸುಬ್ರಹ್ಮಣ್ಯ, ಡಿಸೆಂಬರ್.15 : ನಾಡಿನ ಪ್ರಸಿದ್ಧ ದೇಗುಲ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ನಾಳೆಯಿಂದ ಮೂರು ದಿನಗಳ ಕಾಲ ಎಡೆಸ್ನಾನಕ್ಕೆ ಧಾರ್ಮಿಕ ದತ್ತಿ ಇಲಾಖೆ ಅವಕಾಶ ಕಲ್ಪಿಸಿದ್ದು, ಈ ಬಗ್ಗೆ ಕೆಲವು ವಿರೋಧಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ನಡುವೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುವ ಎಡೆಸ್ನಾನ ನಿಷೇಧಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಹಾಗೂ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಾಗೂ ಇತರೆ ಸಂಘಟನೆಗಳು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗ ಸೋಮವಾರ ಧರಣಿ ನಡೆಸಿದವು.[ಕುಕ್ಕೆಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ: ಇತಿಹಾಸ, ಆಚರಣೆ ಮಹತ್ವ]
ಇಂದಿನ ವೈಜ್ಞಾನಿಕ ಯುಗದಲ್ಲೂ ಶೋಷಿತ ಜನರನ್ನು ಮಡೆಸ್ನಾನ, ಎಡೆಸ್ನಾನ ನೆಪದಲ್ಲಿ ಮೂಢನಂಬಿಕೆಗಳತ್ತ ತಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಒಂದು ಸಮುದಾಯದವರು ಊಟ ಮಾಡಿದ ಎಂಜಲೆಲೆಯ ಮೇಲೆ ಉರುಳಾಡಿದರೆ ರೋಗ ವಾಸಿಯಾಗುತ್ತದೆ ಎಂಬುದು ಯಾವ ಸಿದ್ಧಾಂತ? ಎಂಬುದನ್ನು ನಾವೆಲ್ಲರೂ ಒಂದೇ ಎಂದು ಹೇಳುವವರು ಉತ್ತರಿಸಬೇಕಾಗಿದೆ ಎಂದು ಧರಣಿ ನಿರತರು ಹೇಳಿದರು.[ಎಂಜಲೆಲೆಯ ಮೇಲೆ ಉರುಳಲು ಸಿದ್ಧ ಎನ್ನುತ್ತಿದ್ದಾರೆ ಮಲೆಕುಡಿಯರು]
ಮೂಢನಂಬಿಕೆಯನ್ನು ಪ್ರತಿನಿಧಿಸುವ ಎಡೆಸ್ನಾನ ನಿಷೇಧಿಸಬೇಕು, ಮೂಢ ನಂಬಿಕೆ ನಿಷೇಧ ಕಾಯ್ದೆ ಶೀಘ್ರ ಜಾರಿಗೆ ತರಬೇಕು, ಪಂಕ್ತಿ ಭೇದ ನಿಷೇಧಿಸಬೇಕು ಮುಂತಾದ ಬೇಡಿಕೆಗಳ ಮನವಿಯನ್ನು ಪಟ್ಟಿ ಮಾಡಿದ ಸಂಘಟನೆಗಳ ಕಾರ್ಯಕರ್ತರು ತಹಶೀಲ್ದಾರ್ ಪ್ರಸನ್ನಮೂರ್ತಿ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.