ಸಿಎಂ ವಿಶ್ರಾಂತಿ ಅಂತ್ಯ, ಆಡಳಿತದತ್ತ ಗಮನ
ಬೆಂಗಳೂರು, ಏ. 28 : ಲೋಕಸಭೆ ಚುನಾವಣಾ ಪ್ರಚಾರ ಮುಗಿಸಿ ವಿಶ್ರಾಂತಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಸೋಮವಾರದಿಂದ ನಿರಂತರ ಸಭೆಗಳನ್ನು ನಡೆಸುವ ಮೂಲಕ ಆಡಳಿತ ಯಂತ್ರ ಚುರುಕುಗೊಳಿಸಲು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲು ಹಲವು ದಿನಗಳು ಬಾಕಿ ಉಳಿದಿರುವುದರಿಂದ ಸಿಎಂ ಆಡಳಿತದ ಬಗ್ಗೆ ಗಮನಹರಿಸಲಿದ್ದಾರೆ.
ವಿಶ್ರಾಂತಿ ಪಡೆದು ಸಿಎಂ ಸಿದ್ದರಾಮಯ್ಯ ಭಾನುವಾರ ಸಂಜೆ ತಮ್ಮ ಗೃಹ ಕಚೇರಿಗೆ ಆಗಮಿಸಿದ್ದಾರೆ. ಸದ್ಯ ರಾಜ್ಯದಲ್ಲಿ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ಸಡಿಲಿಸಿದ್ದು, ಇಂದಿನಿಂದ ಸಿಎಂ ಎಂದಿನಂತೆ ಆಡಳಿತದ ಕಾರ್ಯಗಳಲ್ಲಿ ಬ್ಯುಸಿಯಾಗಲಿದ್ದಾರೆ. ಸೋಮವಾರ ಬೆಳಗ್ಗೆ ಗೃಹ ಕಚೇರಿಯಲ್ಲಿ ಶಾಸಕರು, ಸಚಿವರನ್ನು ಭೇಟಿ ಮಾಡಲಿರುವ ಸಿಎಂ ಮಧ್ಯಾಹ್ನ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.

ಸಚಿವ ಸಂಪುಟ ಸಭೆ : ಸೋಮವಾರ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಆಡಳಿತಕ್ಕೆ ಸಂಬಂಧಿಸಿದ ಕೆಲವು ತುರ್ತು ವಿಷಯಗಳ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ವಿಚಾರವಾಗಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ. [ವಿಶ್ರಾಂತಿಗೆ ತೆರಳಿದ ಸಿಎಂ ಸಿದ್ದು, ಬಿಜೆಪಿ ಗುದ್ದು!]
ನೇಮಕಾತಿ ಬಗ್ಗೆ ನಿರ್ಧಾರ : ಹಲವು ದಿನಗಳಿಂದ ಖಾಲಿ ಉಳಿದಿರುವ ನಿಗಮ, ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಕುರಿತು ಸರ್ಕಾರ ಸೋಮವಾರ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಪಕ್ಷದ ಮೂಲಕಗಳ ಪ್ರಕಾರ ನೇಮಕಾತಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ವಿಶ್ರಾಂತಿ ಬಳಿಕ ಸಿಎಂ ಸಿದ್ದರಾಮಯ್ಯ ಇಂದಿನಿಂದ ಆಡಳಿತ ಯಂತ್ರದ ಕಡೆ ಗಮನ ಹರಿಸಲಿದ್ದಾರೆ. ಮೇ 16ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ನಂತರ ಜೂನ್ ನಲ್ಲಿ ವಿಧಾನಪರಿಷತ್ ಮತ್ತು ರಾಜ್ಯಸಭೆಯ ಚುನಾವಣೆಯನ್ನು ಸಹ ಎದುರಿಸಬೇಕಾಗಿದೆ. ತುರ್ತಾಗಿ ರಾಜ್ಯದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವತ್ತ ಸರ್ಕಾರ ಗಮನಹರಿಸಬೇಕಾಗಿದೆ.












Click it and Unblock the Notifications