ಅಗ್ನಿಶಾಮಕ, ತುರ್ತು ಸೇವೆ ಇಲಾಖೆಗೆ 1600 ಸಿಬ್ಬಂದಿ ನೇಮಕ: ಆರಗ ಜ್ಞಾನೇಂದ್ರ
ಬೆಂಗಳೂರು, ಸೆ. 9: ರಾಜ್ಯದಲ್ಲಿ ಈ ವರ್ಷ ಅಗ್ನಿ ಶಾಮಕ ಹಾಗೂ ತುರ್ತು ಸೇವೆ ಇಲಾಖೆಗೆ ಸುಮಾರು 1600 ನೂತನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅವರಗೆ ಒಂದು ವರ್ಷದ ತರಬೇತಿ ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಹೊಸತಾಗಿ ನೇಮಕಗೊಂಡ ಸಿಬ್ಬಂದಿಗೆ ಅಗ್ನಿ ಅವಘಡದಂಥಹ ಪರಿಸ್ಥಿತಿ ಎದುರಿಸಲು ಆರು ತಿಂಗಳ ಕಾಲ ತರಬೇತಿ ನೀಡಲಾಗುತ್ತಿದೆ. ಈ ವರ್ಷದಿಂದ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಇನ್ನೂ ಆರು ತಿಂಗಳುಗಳ ಕಾಲ ವಿಪತ್ತು ನಿರ್ವಹಣೆ ಬಗ್ಗೆ ಹೆಚ್ಚಿನ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ, ಮಳೆ ನೀರಿನಿಂದ ಅವೃತಗೊಂಡ ವಸತಿ ಪ್ರದೇಶಗಳಲ್ಲಿ, ರಾಜ್ಯ ವಿಪತ್ತು ನಿರ್ವಹಣಾ ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವೆ ಇಲಾಖೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯಗಳಲ್ಲಿ ತೊಡಗಿರುವ ಕಾರ್ಯವನ್ನು ವೀಕ್ಷಿಸಿ ಬಳಿಕ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಮಳೆಯಿಂದ 5000 ಜನರ ಸ್ಥಳಾಂತರ:
ಕಳೆದ ಹದಿನೈದು ದಿನಗಳಲ್ಲಿ ಮಳೆಯಿಂದ ಬಾಧಿತವಾದ ಸುಮಾರು 5000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದ್ದು, ನೀರಿನಿಂದ ಆವೃತವಾಗಿರುವ ಕಟ್ಟಡಗಳ ಪ್ರದೇಶದಿಂದ ನೀರನ್ನು ಹೊರಹಾಕಲು, ಸಿಬ್ಬಂದಿ ಅಹೋರಾತ್ರಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ನಗರದಲ್ಲಿ ಮಳೆ ನೀರಿನ ತುರ್ತು ಪರಿಸ್ಥಿತಿ ಎದುರಿಸಲು, ಒಟ್ಟು 36 ಯಾಂತ್ರಿಕೃತ ದೋಣಿಗಳು ಹಾಗೂ 56 ಅಗ್ನಿಶಾಮಕ ವಾಹನಗಳು ದಿನದ 24 ಗಂಟೆಗಳ ಕಾಲ ಸೇವೆಗೆ ಲಭ್ಯವಿದ್ದು, ಪರಿಸ್ಥಿತಿ ಎದುರಿಸಲು ಸಜ್ಜಾಗಿವೆ ಎಂದರು.
ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಇಂಥಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಕಾರದ ಹಿರಿಯ ಅಧಿಕಾರಿಗಳು, ನಗರದ ಸಚಿವರು ಹಾಗೂ ಶಾಸಕರೊಂದಿಗೆ ಸಮಾಲೋಚಿಸಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ, ಮಳೆ ನೀರಿನಿಂದ ಬಾಧಿತರಾದ ನಿವಾಸಿಗಳ ಅಹವಾಲುಗಳನ್ನು ಆಲಿಸಿದ ಸಚಿವರು, ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದರು
ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿದ, ಸಚಿವರಿಗೆ ಹಾಗೂ ಸಂಕಷ್ಟಕ್ಕೆ ನೆರವಾಗುತ್ತಿ ರುವ ಇಲಾಖೆಯ ಸಿಬ್ಬಂದಿಗಳ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ, ನಿವಾಸಿಗಳು ಕೃತಜ್ಞತೆ ಅರ್ಪಿಸಿದರು.
ರಾಜ್ಯ ಅಗ್ನಿಶಾಮಕ, ತುರ್ತು ಸೇವೆಗಳು ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಮುಖ್ಯಸ್ಥ, ಅಮರ್ ಕುಮಾರ್ ಪಾಂಡೆ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.