ರಮ್ಯಾ ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ : ಕೃಷ್ಣ ಬೈರೇಗೌಡ
ಕೊಪ್ಪಳ, ಆಗಸ್ಟ್ 25 : 'ರಮ್ಯಾ ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ, ಸಂಘ ಪರಿವಾರದವರು ವಾಕ್ಸ್ವಾತಂತ್ರ್ಯ ಕಿತ್ತು ಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವುದು ಸಂವಿಧಾನ ವಿರೋಧಿ' ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಕೊಪ್ಪಳದಲ್ಲಿ ಗುರುವಾರ ಮಾತನಾಡಿದ ಅವರು, 'ಪಾಕಿಸ್ತಾನ ಎಂದರೆ ನರಕ ಅಲ್ಲ ಎಂದಿದ್ದಾರೆ, ಇದು ತಪ್ಪೇ? ಎಂದು ಪ್ರಶ್ನಿಸಿದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಓಟ್ ಬ್ಯಾಂಕ್ ರಾಜಕಾರಣ ಮಾಡುವ ಪ್ರಯತ್ನ ನಡೆಯುತ್ತಿದೆ' ಎಂದು ಆರೋಪಿಸಿದರು.['ರಮ್ಯಾ ಹೇಳಿಕೆಯಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ']
'ಸಂಘಪರಿವಾರದವರು ಒಂದು ಕಡೆ ಅಖಂಡ ಭಾರತದ ಬಗ್ಗೆ ಮಾತನಾಡುತ್ತಾರೆ. ಅಖಂಡ ಭಾರತ ಮತ್ತು ಹಿಂದುತ್ವದ ಮೂಲ ಆರಂಭವಾಗುವುದೇ ಸಿಂಧೂ ನದಿ ಕಣಿವೆಯ ನಾಗರಿಕತೆ ಪ್ರದೇಶದಲ್ಲಿ. ಅದಿರುವುದು ಪಾಕಿಸ್ತಾನದಲ್ಲಿ. ತಕ್ಷಶಿಲಾದಂಥ ಶ್ರೇಷ್ಠ ವಿಶ್ವವಿದ್ಯಾಲಯ ಇದ್ದದ್ದು ಪಾಕಿಸ್ತಾನದಲ್ಲಿ. ಇದಕ್ಕೆಲ್ಲಾ ಸುಮಾರು 3 ಸಾವಿರ ವರ್ಷಗಳಿಗೂ ಅಧಿಕ ಕಾಲಮಾನದ ಇತಿಹಾಸವಿದೆ' ಎಂದರು.[ಪಾಕಿಸ್ತಾನ ಪತ್ರಿಕೆಗಳಲ್ಲಿ ಸುದ್ದಿಯಾದ ರಮ್ಯಾ]
'ಹಿಂದುತ್ವದ ಪ್ರತಿಪಾದನೆ ಮಾಡುವವರು ಪಾಕಿಸ್ತಾನವನ್ನು ನರಕ ಎನ್ನುವುದಾದರೆ ಹಿಂದುತ್ವದ ಮೂಲ ಪ್ರದೇಶ, ಕಲಿಕಾ ಕೇಂದ್ರಗಳೆಲ್ಲವೂ ನರಕದಲ್ಲೇ ಇದ್ದವು ಎಂದು ಹೇಳಬೇಕಾಗುತ್ತದೆ. ಒಟ್ಟಿನಲ್ಲಿ ಬಿಜೆಪಿಗೆ ಅಖಂಡ ಭಾರತ ಹಾಗೂ ಹಿಂದುತ್ವ ಎರಡರ ಬಗ್ಗೆಯೂ ಎಳ್ಳಷ್ಟೂ ಕಾಳಜಿ ಇಲ್ಲ' ಎಂದು ಆರೋಪಿಸಿದರು.[ನಾನು ದೇಶದ್ರೋಹಿಯಲ್ಲ, ನಾನು ಕ್ಷಮೆಯಾಚಿಸಲ್ಲ : ರಮ್ಯಾ]
'ಪಾಕಿಸ್ತಾನ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅದರ ಫಲವನ್ನು ವಿಶ್ವದ ಇತರ ರಾಷ್ಟ್ರಕ್ಕಿಂತ ಹೆಚ್ಚು ಆ ದೇಶವೇ ಅನುಭವಿಸುತ್ತಿದೆ. ಸಮಸ್ಯೆ ಎಲ್ಲ ಕಡೆ ಇದೆ. ಗುಜರಾತ್ನಲ್ಲಿ ದಲಿತರ ಮೇಲೆ ಹಲ್ಲೆ ನಡೆದ ಮಾತ್ರಕ್ಕೆ ಇಡೀ ದೇಶದ ಎಲ್ಲರನ್ನೂ ಕೆಟ್ಟವರೆನ್ನಲು ಸಾಧ್ಯವೇ?' ಎಂದು ಸಚಿವರು ಪ್ರಶ್ನಿಸಿದರು.