ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ 64 ಎಕರೆ ಅರಣ್ಯ ಭೂಮಿ ಒತ್ತುವರಿ: ಕೃಷ್ಣಬೈರೇಗೌಡ ಏನಂದ್ರು?
ಕೋಲಾರ, ಅಕ್ಟೋಬರ್ 31: ಅರಣ್ಯ ಇಲಾಖೆಯ ಕಾನೂನನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ, ಇದಕ್ಕೆ ಸುಪ್ರೀಕೋರ್ಟ್ ಆದೇಶವಿದೆ. ಮಾಜಿ ಸ್ವೀಕರ್ ಕೆಆರ್.ರಮೇಶ್ ಕುಮಾರ್ ಅವರು ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಇದೀಗ ಜಂಟಿ ಸರ್ವೇಗೆ ಸೂಚನೆ ನೀಡಿರುವುದರಿಂದ ಅಧಿಕಾರಿಗಳು ಅವರ ಕೆಲಸ ಮಾಡಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿ. ಅದರ ಮೇಲೆ ಮುಂದಿನ ಕ್ರಮವನ್ನು ಅರಣ್ಯ ಇಲಾಖೆ ತೆಗೆದುಕೊಳ್ಳುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಮಾಜಿ ಸ್ವೀಕರ್ ರಮೇಶ್ ಕುಮಾರ್ ವಿರುದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ರಮೇಶ್ ಕುಮಾರ್ ಅವರು ನೂರಾರು ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲ, ಈಗ ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಆಧಾರ್ ನಂಬರ್ ಹಾಕಿದರೆ ಎಷ್ಟು ಅಸ್ತಿ ಇದೆ ಎಂಬುದು ಸಿಗುತ್ತದೆ. ದಾಖಲೆ ತೆಗೆದು ಮಾತನಾಡಲಿ, ಅವರು ಚುನಾವಣೆ ಸಂದರ್ಭದಲ್ಲಿ ಆಫಿಡೆವಿಟ್ ಸಲ್ಲಿಸಿದಾಗ ಅವರ ಆಸ್ತಿ ಎಷ್ಟಿದೆ ಎಂದು ಭೂಮಿ ಸಾಫ್ಟ್ ವೇರ್ನಲ್ಲಿ ಸರ್ಚ್ ಮಾಡಿದ್ರೆ ಸಿಗುತ್ತೆ. ಆ ಸಂದರ್ಭದಲ್ಲಿ ಗಮನಿಸಿಲ್ಲವೆ ಎಂದು ತಿರುಗೇಟು ನೀಡಿದರು.

2014ರಲ್ಲಿ ಒಮ್ಮೆ ಸರ್ವೆ ಆಗಿದೆ. ಇದೀಗ ಮತ್ತೆ ಸರ್ವೆಗೆ ಕ್ರಮಕೊಳ್ಳಲಾಗಿದೆ, ಮತ್ತೆ ಸರ್ವೆ ಆಗಲಿ ಬಿಡಿ, ಇದಕ್ಕೆಲ್ಲ ಹಾದಿ ಬೀದಿಯಲ್ಲಿ ಹೋಗುವವರೆಲ್ಲ ಮಾತನಾಡಿದರೆ ಪ್ರತಿಕ್ರಿಯೆ ನೀಡಲಾಗುವುದಿಲ್ಲ, 2014ರಿಂದ ಇದುವರೆಗೂ ಬೇರೆ ಸರ್ಕಾರಗಳು ಬದಲಾಗಿವೆ, ಮೂರು ಮಂದಿ ಸಿಎಂಗಳು ಆಗಿದ್ದರು ಆಗ ಯಾಕೆ ಕ್ರಮವ ಹಿಸಲಿಲ್ಲ ಎಂದು ಪ್ರಶ್ನಿಸಿದರು. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಶೇ.10ರಷ್ಟು ತಕರಾರು ಇರಬಹುದು. ಆದರೆ ತಕರಾರು ಇಲ್ಲದೆ ಇರುವುದನ್ನು ಅಧಿಕೃತ ಮಾಡಿಕೊಡಲು ಕ್ರಮವಹಿಸಲಾಗಿದೆ. ಅರಣ್ಯ ಇಲಾಖೆಯ ಕಾನೂನುಗಳನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಸುಪ್ರೀಂಕೋರ್ಟ್ ಆದೇಶವೇ ಇದೆ ಎಂದು ಹೇಳಿದರು.
ರೈತರ ಆಸ್ತಿಗೆ ವಕ್ಫ್ ಮಂಡಳಿಯಿಂದ ನೋಟೀಸ್ ವಿಚಾರಕ್ಕೆ ಬಿಜೆಪಿ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರ ಅವಧಿಯಲ್ಲಿ ವಿಜಯಪುರದಲ್ಲಿ 138 ಜಮೀನುಗಳನ್ನು ವಕ್ಫ್ ಪಹಣಿ ಮಾಡಲಾಗಿದೆ. ನಾಲ್ಕು ವರ್ಷದ ಅವಧಿಯಲ್ಲಿ ವಕ್ಫ್ ಬೋರ್ಡ್ ಹಕ್ಕು ಬದಲಾವಣೆ ಮಾಡಲಾಗಿದೆ. ಬಿಜೆಪಿಯವರು ಹೇಗೆ ಮಾಡಿದರು? ನಮ್ಮ ಕಾಲದಲ್ಲಿ 44 ಆಗಿದೆ, ಬಿಜೆಪಿ ಕಾಲದಲ್ಲಿ 138 ಮಾಡಿದ್ದಾರೆ. ನಾವು ಮಾಡಿರುವುದನ್ನು ವಾಪಸ್ಸು ಪಡೆಯಲಾಗುತ್ತಿದೆ. 138 ಪಹಣಿಗಳಲ್ಲಿ ಮಾಡಿದ್ದಾಗ ಬಿಜೆಪಿಯವರು ಅವತ್ತು ಏಕೆ ಬೆಂಕಿಯಿಡುವ ಕೆಲಸ ಮಾಡಿಲ್ಲ. ಇವತ್ತು ಎದ್ದು ಕುಳಿತ್ತಿದ್ದಾರೆ ಎಂದು ಕಿಡಿಕಾರಿದರು.
ಆಗ ಅವರದ್ದೇ ಸರ್ಕಾರವಿದ್ದಾಗ ಇವರು ಬದುಕಿದ್ದರಾ ಇಲ್ಲವಾ? 138 ವಿತ್ ಔಟ್ ನೋಟಿಸ್ ರೈತರಿಗೆ ಎಂಟ್ರಿ ಮಾಡಿದ್ದಾರೆ, ಇವತ್ತು ಬಿಜೆಪಿ ಬೊಬ್ಬೆ ಹೊಡೆಯುತ್ತಿದೆ. ಬಿಜೆಪಿ ಅವರು ಉತ್ತರ ಕೊಡಲಿ, ಅವತ್ತು ಏನು ಮಾಡುತ್ತಿದ್ದರು, ವಕ್ಫ್ ಬೋರ್ಡ್ ವಿರುದ್ದ ಅವತ್ತು ಏಕೆ ಅಕ್ರೋಶ ಹೊರಹಾಕಿಲ್ಲ. ಇದು ಬಿಜೆಪಿ ಅವರ ಡೊಂಗೀತನ ಅಲ್ಲವಾ? ಬಿಜೆಪಿ ಅವರು ಇಂದು ರಾಜಕೀಯ ಲಾಭಗೋಸ್ಕರ ಬೆಂಕಿಯಿಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ಹಿಂದಿನ ಕಂದಾಯ ಇಲಾಖೆ ಸಚಿವರು, ಸಮರ್ಪಕವಾಗಿ ಕೆಲಸ ಮಾಡಿಲ್ಲ. ಎ.ಸಿ ಕೋರ್ಟ್ ನಲ್ಲಿ ಕೇಸ್ ವಿಲೇವಾರಿಗೆ 6 ತಿಂಗಳು ಗಡುವು ಇದೆ. 1 ವರ್ಷ ಮೀರಿದ ಪ್ರಕರಣಗಳು ರಾಜ್ಯದಲ್ಲಿ 59335 ಪ್ರಕರಣ ಇತ್ತು. ನಮ್ಮ ಸರ್ಕಾರ ಬಂದ ನಂತರ 25 ಸಾವಿರ ಪ್ರಕರಣ ವಿಲೇವಾರಿ ಮಾಡಿದ್ದೇವೆ. ರಾಜ್ಯದಲ್ಲಿ 32787 ಕೇಸ್ ಗಳು 5 ವರ್ಷವಾದರು ವಿಲೇವಾರಿ ಆಗಿಲ್ಲ. ನಮ್ಮ ಸರ್ಕಾರ ಬಂದ ನಂತರ ಇದೀಗ ಎ.ಸಿ ಕೋರ್ಟ್ ಪ್ರಕರಣ 7153 ಇಳಿದಿದೆ. ಕೋಲಾರ ಜಿಲ್ಲೆಯಲ್ಲಿ ಪಿ ನಂಬರ್ ದುರಸ್ತಿ ಸಮಸ್ಯೆ ಹಾಗೆ ಉಳಿದಿದೆ. ಕೋಲಾರ ಜಿಲ್ಲೆಯಾದ್ಯಂತ 1-5 ಕಡತ ತಯಾರಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಕೋಲಾರದಲ್ಲಿ ಒಟ್ಟು 87475 ಜನರಿಗೆ ಸರ್ಕಾರಿ ಜಮೀನು ಮಂಜೂರಾಗಿದೆ. 8842 ಸರ್ವೇ ನಂಬರ್ ಗಳಲ್ಲಿನ ಪಿ ನಂಬರ್ ದುರಸ್ತಿಗೆ ಕ್ರಮ ವಹಿಸುತ್ತೇವೆ ಎಂದರು.












Click it and Unblock the Notifications