ರಮೇಶ್ ಜಾರಕಿಹೊಳಿ ದೆಹಲಿಗೆ, ರಾಜ್ಯ ರಾಜಕಾರಣ ಕ್ಲೈಮ್ಯಾಕ್ಸ್ಗೆ?
Recommended Video
ಬೆಂಗಳೂರು, ಜುಲೈ 02: ನಿನ್ನೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಅವರು ನಿನ್ನೆ ರಾತ್ರಿಯೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಅವರ ಈ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಇಂದು ಅಥವಾ ನಾಳೆ ಇನ್ನಷ್ಟು ಶಾಸಕರು ರಾಜೀನಾಮೆ ಕೊಡುತ್ತಾರೆಯೇ ಎಂಬ ಅನುಮಾನ ಮೂಡಿಸಿದೆ.
ನಿನ್ನೆ ರಾತ್ರಿಯೇ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದ್ದು, ಅಲ್ಲಿ ಬಿಜೆಪಿ ಪ್ರಮುಖ ನಾಯಕರನ್ನು ಭೇಟಿ ಆಗಲಿದ್ದಾರೆ ಎಂಬ ಅನುಮಾನವಿದೆ.
ರಮೇಶ್ ಜಾರಕಿಹೊಳಿ ಅವರು ನಿನ್ನೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದು, ಕೈಬರಹದಲ್ಲಿರುವ ಆ ರಾಜೀನಾಮೆ ಪತ್ರ ಸ್ವೀಕೃತಿ ಆಗುತ್ತದೆಯೇ ಇಲ್ಲವೆ ಎಂಬ ಬಗ್ಗೆ ಅನುಮಾನಗಳಿವೆ. ರಾಜೀನಾಮೆ ಸ್ವೀಕೃತಿ ಆಗದಿರಲೆಂದೇ ಜಾರಕಿಹೊಳಿ ಹಾಗೆ ಕೈಬರಹದ ರಾಜೀನಾಮೆ ರವಾನಿಸಿದ್ದಾರೆ ಎಂಬ ಅನುಮಾನವೂ ವ್ಯಕ್ತವಾಗಿದೆ.

ರಮೇಶ್ ಜಾರಕಿಹೊಳಿ ಪರ ನಾವಿದ್ದೇವೆ: ಮಹೇಶ್ ಕುಮಟಳ್ಳಿ
ಈ ಮಧ್ಯೆ ಇಂದು ರಮೇಶ್ ಜಾರಕಿಹೊಳಿ ಅವರ ಪರಮಾಪ್ತ ಶಾಸಕ ಮಹೇಶ್ ಕುಮಟಳ್ಳಿ ಅವರು 'ರಮೇಶ್ ಜಾರಕಿಹೊಳಿ ಪರವಾಗಿ ನಾವು ಇದ್ದೇವೆ, ಅವರು ನನಗಾಗಿ ಹಗಲಿರುಳು ಶ್ರಮಿಸಿದ್ದಾರೆ' ಎಂದು ಹೇಳಿಕೆ ನೀಡಿದ್ದು ಇದು ಅನುಮಾನಕ್ಕೆ ಕಾರಣವಾಗಿದೆ.

ಮಹೇಶ್ ಕುಮಟಳ್ಳಿ ರಾಜೀನಾಮೆ ಸಾಧ್ಯತೆ
ಮಹೇಶ್ ಕುಮಟಳ್ಳಿ ಅವರು ಸಹ ಇಂದು ಅಥವಾ ನಾಳೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಅವರ ರಮೇಶ್ ಜಾರಕಿಹೊಳಿ ಪರ ಹೇಳಿಕೆಗಳು ಅನುಮಾನಗಳಿಗೆ ಪುಷ್ಠಿ ನೀಡುತ್ತಿವೆ.

ಶಾಸಕ ಆನಂದ್ ಸಿಂಗ್ ನಿನ್ನೆ ರಾಜೀನಾಮೆ ನೀಡಿದ್ದಾರೆ
ವಿಜಯನಗರ ಶಾಸಕ ಆನಂದ್ ಸಿಂಗ್ ಅವರು ನಿನ್ನೆ ಬೆಳಿಗ್ಗೆ ರಾಜೀನಾಮೆ ನೀಡಿದ್ದು, ಸ್ಪೀಕರ್ ಮತ್ತು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ. ಅವರ ರಾಜೀನಾಮೆಯು ಸ್ವೀಕೃತಿ ಆಗುವ ಸಂಭವ ಇದೆ. ಆದರೆ ರಮೇಶ್ ಜಾರಕಿಹೊಳಿ ಅವರ ರಾಜೀನಾಮೆ ಸ್ವೀಕೃತಿ ಆಗುತ್ತದೆಯೇ ಇಲ್ಲವೆ ಎಂಬ ಬಗ್ಗೆ ಅನುಮಾನಗಳಿವೆ.

ಆಪರೇಷನ್ ಕಮಲ ನಿರ್ವಹಿಸುತ್ತಿರುವ ರಮೇಶ್ ಜಾರಕಿಹೊಳಿ?
ಬಿಜೆಪಿಯು ತನ್ನ ಆಪರೇಷನ್ ಕಮಲ ಜವಾಬ್ದಾರಿಯನ್ನು ರಮೇಶ್ ಜಾರಕಿಹೊಳಿ ಅವರ ಹೆಗಲಿಗೆ ಹೊರಿಸಿದೆ ಎಂಬ ಮಾತುಗಳು ಮುಂಚಿನಿಂದಲೂ ಕೇಳಿ ಬರುತ್ತಿತ್ತು. ಅದಕ್ಕೆ ತಕ್ಕಂತೆ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ವರ್ಚಸ್ಸಿಗೆ ಧಕ್ಕೆ ಆಗದಂತೆ ಶಾಸಕರನ್ನು ಒಬ್ಬೊಬ್ಬರನ್ನಾಗಿ ಕಾಂಗ್ರೆಸ್ನಿಂದ ಹೊರಗೆ ತರುತ್ತಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications